ಬೆಂಗಳೂರು: ಸಾಕಷ್ಟು ತರಬೇತಿ ಬಳಿಕವೂ ಕ್ಯಾಮರಾ ಎದುರಿಸುವಾಗ ಬಹಳಷ್ಟು ನಟ-ನಟಿಯರಿಗೆ ಭಯವಾಗುವುದು ಸಾಮಾನ್ಯ. ಅದನ್ನು ಹಲವರು ಹೇಳಿಕೊಂಡಿದ್ದಾರೆ ಕೂಡ. ಆದರೆ ಬಾಲ್ಯದಲ್ಲೇ ರಾಷ್ಟ್ರಪ್ರಶಸ್ತಿ ಗಿಟ್ಟಿಸಿಕೊಂಡಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಚಿಕ್ಕವಯಸ್ಸಿನಲ್ಲಿ ನಟಿಸಿದ್ದರೂ ಕ್ಯಾಮರಾ ಭಯವಿರಲಿಲ್ಲ. ಇದನ್ನು ಅವರೇ ಸ್ವತಃ ಹೇಳಿಕೊಂಡಿದ್ದಾರೆ.
ಲೋಹಿತ್ ಅರ್ಥಾತ್ ಪುನೀತ್ಗೆ ಎಂಟು ವರ್ಷ ತುಂಬಿದಾಗ ಕನ್ನಡದ ನಿಯತಕಾಲಿಕವೊಂದು ಅವರ ಸಂದರ್ಶನ ಮಾಡಿತ್ತು. ಅದರಲ್ಲಿ ‘ನಿನಗೆ ಕ್ಯಾಮರಾ ಮುಂದೆ ನಿಂತಾಗ ಭಯವಾಗುವುದಿಲ್ಲವೇ?’ ಎಂದು ಕೇಳಿದ್ದಕ್ಕೆ ಪುನೀತ್, ‘ಯಾಕೆ ಹೆದರಬೇಕು, ಭಕ್ತ ಪ್ರಹ್ಲಾದ ಚಿತ್ರದಲ್ಲಿ ಮೈಮೇಲೆ ಹಾವುಗಳನ್ನು ಹಾಕಿಕೊಂಡು ಅಭಿನಯಿಸಿದ್ದೇನೆ’ ಎಂದು ಉತ್ತರಿಸಿದ್ದರು. ‘ಅಪ್ಪಾಜಿ ಹಿರಣ್ಯಕಶಿಪು ಪಾತ್ರದಲ್ಲಿ ಕೋಪದಿಂದ ಮಾತನಾಡುವಾಗಲೂ ಭಯವಾಗಲಿಲ್ಲವೇ?’ ಎಂದು ಕೇಳಿದಾಗಲೂ, ‘ಇಲ್ಲವೇ ಇಲ್ಲ’ ಎಂದು ಉತ್ತರಿಸಿದ್ದರು.
ಆ ಸಂದರ್ಶನಲ್ಲಿ ಅವರು ಸಾಕಷ್ಟು ಅಂಶಗಳನ್ನು ಹೇಳಿಕೊಂಡಿದ್ದು ಅದರ ಕೆಲವು ಸ್ವಾರಸ್ಯಕರ ತುಣುಕುಗಳು ಇಲ್ಲಿದೆ.
ನಿನಗೆ ಏನಾದರೂ ಬೇಕಾದರೆ ಅಪ್ಪಾಜಿಯನ್ನು ಕೇಳ್ತೀಯೋ ಅಮ್ಮನನ್ನು ಕೇಳ್ತಿಯೋ?
– ನಾನು ಅಪ್ಪಾಜಿಯನ್ನೇ ಕೇಳ್ತೇನೆ, ಅಮ್ಮನನ್ನು ಕೇಳಿದ್ರೆ ನಾಳೆ ನೋಡೋಣ ಅಂತಾರೆ, ಅಪ್ಪಾಜಿ ಕೇಳಿದ ತಕ್ಷಣ ಕೊಡಿಸ್ತಾರೆ.
ಅಪ್ಪಾಜಿ ನಿಮ್ಮ ಮೇಲೆ ರೇಗ್ತಾರೇನು?
– ಎಲ್ಲಿಗಾದರೂ ಹೊರಡುವಾಗ ತಡವಾದರೆ ರೇಗ್ತಾರೆ. ಯಾರನ್ನಾದರೂ ನಾವು ಬೈದರೆ ಹಾಗೆ ಮಾಡಬಾರದು ಅಂತಾರೆ. ಒಂದೊಂದು ಸಲ ತಮಾಷೆಗೆ ಅಯ್ಯೋ ಬಡ್ಡಿಮಗನೆ ಅಂತ ಬೈತಾರೆ.
ಅಪ್ಪಾಜಿ ಯಾವಾಗಲಾದರೂ ನಿನಗೆ ಹೊಡೆದಿದ್ದಾರೇನು?
– ‘ಶಂಕರ್ ಗುರು’ ಸಿನಿಮಾ ಶೂಟಿಂಗ್ಗೆ ಕಾಶ್ಮೀರಕ್ಕೆ ಹೋಗಿದ್ದಾಗ ನಾನು ನನ್ನ ಸ್ನೇಹಿತ ಸತೀಶ್ನನ್ನು ಹೊಡೆದಿದ್ದೆ. ಆಗ ಅಪ್ಪಾಜಿ ನನಗೆ ಹೊಡೆದು ಹಾಗೆಲ್ಲ ಮಾಡಬಾರದು ಅಂತ ಬುದ್ಧಿ ಹೇಳಿದ್ದರು.
ಅಪ್ಪಾಜಿ ಎಂಥ ಚಿತ್ರಗಳಲ್ಲಿ ಅಭಿನಯಿಸಬೇಕು?
– ಅವರು ಸಾಯೋವಂಥ ಪಾತ್ರ ನನಗೆ ಇಷ್ಟ ಆಗಲ್ಲ.
‘ಭಕ್ತ ಪ್ರಹ್ಲಾದ’ದಲ್ಲಿ ನರಸಿಂಹ ನಿಮ್ಮ ತಂದೆಯ ಹೊಟ್ಟೆ ಬಗೀತಾನಲ್ಲ?!
– ಅದು ದೇವರ ಕಥೆ, ಆದ್ದರಿಂದ ಅದು ಪರವಾಗಿಲ್ಲ..
ಅಪ್ಪಾಜಿ ಜೊತೆ ಬೇರೆ ನಾಯಕಿಯರು ಪಾತ್ರ ಮಾಡುವುದು ನಿನಗೆ ಇಷ್ಟವೇ?
– ಸರಿತಾ ನನಗೆ ಒಪ್ಪಿಗೆಯಾಗಲ್ಲ, ಆಕೆ ಕಪ್ಪು, ಸರಿಯಾಗಿ ಕನ್ನಡ ಬರಲ್ಲ. ಲಕ್ಷ್ಮಿ, ಅಂಬಿಕಾ, ಮಾಧವಿಯಾದರೆ ಚೆನ್ನಾಗಿರುತ್ತೆ.
ನಿಮ್ಮ ತಾಯಿ ಕಪ್ಪಗಿಲ್ಲವೇ?
– ಅವರು ನಮ್ಮ ಅಮ್ಮ, ಹೇಗಿದ್ದರೂ ಸರಿ.
ನಿನಗೆ ಮುಂದೆ ಏನಾಗ್ಬೇಕಂತ ಆಸೆ?
– ಎರಡು ಮೂರು ಸಿನಿಮಾದಲ್ಲಿ ಮಾಡಿ ಆಮೇಲೆ ಓದೋಕೆ ಹೋಗ್ತೀನಿ, ಆಗ ನಟಿಸಲ್ಲ. ಕಾಲೇಜಿಗೆ ಹೋಗ್ತೀನಿ, ಡಾಕ್ಟರ್ ಆಗ್ತೀನಿ. ಫಾರಿನ್ಗೆ ಹೋಗಿ ಅಲ್ಲೇ ಇದ್ಬಿಟ್ಟು, ಅಲ್ಲೇ ಕನ್ನಡ ಪಿಕ್ಚರ್ ಮಾಡ್ತೀನಿ. ನಾನು ಮದ್ವೆನೇ ಆಗಲ್ಲ, ಬ್ರಹ್ಮಚಾರಿಯಾಗೇ ಇರ್ತೀನಿ, ಅಪ್ಪನ ಥರ ಫೇಮಸ್ ಆಗ್ತೀನಿ.
ಅವನನ್ನು ಲವ್ ಮಾಡ್ಬೇಡ ಅಂದ್ರೂ ಕೇಳದ ಮಗಳನ್ನು ಕೊಲೆ ಮಾಡಿದ ಅಪ್ಪ; ವೇಲ್ನಿಂದ ಕತ್ತು ಸುತ್ತಿ ಸಾಯಿಸಿದ..