ಶಿವಮೊಗ್ಗ: ಮಳೆನೀರು ಸಂರಕ್ಷಣೆ ಬಗ್ಗೆ ಜಿಲ್ಲೆಯ ಎಲ್ಲ ಹಳ್ಳಿಗಳಲ್ಲೂ ಗೋಡೆ ಬರಹ, ಜನಜಾಗೃತಿ ಜತೆಗೆ ಯುವಕರಿಗೆ ಕ್ವಿಜ್ ಮತ್ತು ಚಿತ್ರಕಲಾ ಸ್ಪರ್ಧೆಯ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಕೆ.ಟಿ.ಕೆ.ಉಲ್ಲಾಸ್ ಹೇಳಿದರು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬುಧವಾರ ಕೇಂದ್ರ ಸರ್ಕಾರ, ಯುವಜನ ವ್ಯವಹಾರ ಮತ್ತು ಕ್ರೀಡಾಸಚಿವಾಲಯ, ಶಿವಮೊಗ್ಗ ನೆಹರು ಯುವ ಕೇಂದ್ರ, ತೀರ್ಥಹಳ್ಳಿಯ ಜನ ಸ್ಪಂದನ ಸೇವಾ ಸಂಸ್ಥೆ ಸಹಯೋಗದಲ್ಲಿ ಮಳೆನೀರು ಸಂರಕ್ಷಣೆ ಕಾರ್ಯಕ್ರಮ ಕುರಿತು ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಳೆನೀರು ಕೊಯ್ಲು, ನೀರಾವರಿಯ ಮತ್ತೊಂದು ಪ್ರಮುಖ ಮೂಲ ಅಂತರ್ಜಲವನ್ನು ಸಂರಕ್ಷಿಸುವುದು ಅತ್ಯಗತ್ಯವಾಗಿದೆ. ರಾಷ್ಟ್ರೀಯ ಜಲ ಶಕ್ತಿ ಯೋಜನಡಿಯಲ್ಲಿ ಮಳೆನೀರು ಸಂರಕ್ಷಣೆ ಅಭಿಯಾನಕ್ಕೆ ಚಾಲನೆ ನೀಡಿದ್ದು ಇದು 3ನೇ ವರ್ಷದ ಅಭಿಯಾನವಾಗಿದೆ ಎಂದರು.
ನೀರಿನ ಬಳಕೆ, ದುರ್ಬಳಕೆ, ದುರುಪಯೋಗ ಮತ್ತು ಮಳೆ ನೀರು ಸಂರಕ್ಷಣೆ ಬಗ್ಗೆ ತೀರ್ಥಹಳ್ಳಿ ಸ್ಪಂದನ ಸೇವಾ ಸಂಸ್ಥೆಯ ಕಲಾವಿದರಾದ ಶ್ರೀಪಾದ್, ಶಿವಕುಮಾರ್, ರಕ್ಷಿತ್, ನಿರಂಜನ್ರಾವ್ ಪವಾರ್, ಚಂದನ್ ಜಾಧವ್, ಕಾರ್ತಿಕ್, ವಿನಯ್ ಶೆಟ್ಟಿ ಅವರು ನಾಟಕದ ಮೂಲಕ ಅರಿವು ಮೂಡಿಸಿದರು. ಸಂಸ್ಥೆಯ ಕಾರ್ಯದರ್ಶಿ ಹಬೀಬ್, ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ರಮೇಶ್ ಮತ್ತು ಯುವ ಕಾರ್ಯಕರ್ತರಾದ ದುತೀಂದ್ರ, ರಶ್ಮಿ, ಹೇಮಂತ್, ಶೇಕ್ ಹಸನ್ ಉಪಸ್ಥಿತರಿದ್ದರು.