More

    ಮಾನಸಿಕ ಅನಾರೋಗ್ಯ ಕುರಿತ ಸಾಹಿತ್ಯಗಳು ಹೊರಬರಲಿ

    ಶಿವಮೊಗ್ಗ: ಮಾನಸಿಕ ಅನಾರೋಗ್ಯ ಮತ್ತು ಅದರ ಪರಿಣಾಮಗಳ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವ ಸಾಹಿತ್ಯಗಳು ಹೆಚ್ಚು ಹೊರಬರಬೇಕಿದೆ ಎಂದು ನಗರದ ವೈದ್ಯೆ ಡಾ. ವಿನಯಾ ಶ್ರೀನಿವಾಸ್ ಅಭಿಪ್ರಾಯಪಟ್ಟರು.

    ಚಾಲುಕ್ಯನಗರದ ಸಾಹಿತ್ಯ ಭವನದಲ್ಲಿ ಭಾನುವಾರ ದತ್ತಿ ಉಪನ್ಯಾಸ ಮತ್ತು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ‘ಮನೋವಿಜ್ಞಾನ ಮತ್ತು ಸಾಹಿತ್ಯ’ ವಿಷಯ ಕುರಿತು ಉಪನ್ಯಾಸ ನೀಡಿ, ಶರೀರಕ್ಕೆ ಆಗುವ ಆರೋಗ್ಯ ಸಮಸ್ಯೆಗಳನ್ನು ಶೀಘ್ರ ಗುರುತಿಸಿ ಪರಿಹರಿಸಿಕೊಳ್ಳಲು ಮುಂದಾಗುವುದು ಸಾಮಾನ್ಯ. ಆದರೆ ಮಾನಸಿಕ ಅನಾರೋಗ್ಯದ ಬಗ್ಗೆ ಬಹುತೇಕ ಜನರು ಗಮನ ಹರಿಸುವುದೇ ಇಲ್ಲ ಎಂದರು.

    ಮನೋಸಮಸ್ಯೆಗಳ ಬಗ್ಗೆ ಇರುವ ತಿಳಿವಳಿಕೆ ಕೊರತೆ ಅದಕ್ಕೆ ಕಾರಣ. ಹಾಗಾಗಿ ಮನೋವಿಜ್ಞಾನದ ಬಗ್ಗೆ ತಿಳಿವಳಿಕೆ ಮೂಡಿಸುವ ಕೆಲಸ ಆಗಬೇಕಿದೆ. ಕಲಿಕೆಯ ನ್ಯೂನತೆ, ಮಾದಕ ದ್ರವ್ಯ ಸೇವನೆ, ನಕರಾತ್ಮಕ ಚಿಂತನೆ, ಆತ್ಮಹತ್ಯೆಗೆ ತುಡಿತ ಸೇರಿ ಇತರೆ ವಿಷಯಗಳು ಮಾನಸಿಕ ಸಮಸ್ಯೆ ಆಗಿರುತ್ತದೆ. ಆದರೆ ಮಾನಸಿಕ ಸಮಸ್ಯೆಗಳನ್ನು ಗುರುತಿಸುವುದರಲ್ಲಿ ನಾವು ವಿಫಲರಾಗುತ್ತೇವೆ. ಮಾನಸಿಕ ಸಮಸ್ಯೆ ಗೊತ್ತಿದ್ದರೂ ಚಿಕಿತ್ಸೆ ಕೊಡಿಸುವುದಕ್ಕೆ ಹಿಂಜರಿಕೆ ಹೆಚ್ಚಾಗಿದೆ ಎಂದರು.

    ಕನ್ನಡ ಸಾಹಿತ್ಯದಲ್ಲಿ ತ್ರಿವೇಣಿ, ಡಾ. ಎಂ.ಶಿವರಾಮಗೌಡ, ಡಾ. ಅನುಪಮಾ ನಿರಂಜನ, ಡಾ. ಸಿ.ಆರ್.ಚಂದ್ರಶೇಖರ್, ಡಾ. ಕೆ.ಆರ್.ಶ್ರೀಧರ್ ಸೇರಿ ಅನೇಕ ಸಾಹಿತಿಗಳು ವಿಶೇಷವಾಗಿ ಮನೋವಿಜ್ಞಾನ, ಮಾನಸಿಕ ಸಮಸ್ಯೆಗಳ ಬಗ್ಗೆ ಸಾಹಿತ್ಯ ರಚಿಸಿದ್ದಾರೆ ಎಂದು ಹೇಳಿದರು.

    ಸಾಹಿತಿ ಎಂ.ಎನ್.ಸುಂದರರಾಜ್ ಅವರು ಡಿ.ವಿ.ಗುಂಡಪ್ಪನವರ ಸಾಹಿತ್ಯ ಕುರಿತು ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಡಿ.ವಿ.ಗುಂಡಪ್ಪನವರ ಕೊಡುಗೆ ಅಪಾರ. ಡಿವಿಜಿ ಎಂದೇ ನಾಡಿನಾದ್ಯಂತ ಚಿರಪರಿತರಾಗಿದ್ದ ಗುಂಡಪ್ಪನವರ ಸಾಹಿತ್ಯವು ಜೀವನಕ್ಕೆ ಮಾರ್ಗದರ್ಶನ ಆಗಬಲ್ಲವು. ‘ಮಂಕುತಿಮ್ಮನ ಕಗ್ಗ’ ಕೃತಿಯು ಕನ್ನಡದ ಭಗವದ್ಗೀತೆಯ ಸ್ವರೂಪ. ಆ ಕೃತಿಯಲ್ಲಿ ಎಲ್ಲ ರೀತಿಯಲ್ಲಿಯೂ ಜೀವನ ಸಂದೇಶಗಳಿವೆ. ಡಿವಿಜಿಯವರ ಸಾಹಿತ್ಯ ಕೃತಿಗಳ ಅಧ್ಯಯನ ಪ್ರತಿಯೊಬ್ಬರು ಮಾಡಬೇಕು ಎಂದರು.

    ದತ್ತಿ ಕಾರ್ಯಕ್ರಮವನ್ನು ನಿವೃತ್ತ ಡಿಡಿಪಿಐ ಕೆ.ಶಂಕರಪ್ಪ ಉದ್ಘಾಟಿಸಿದರು. ಕಸಾಪ ಜಿಲ್ಲಾ ಉಪಾಧ್ಯಕ್ಷ ಗೋಪಜ್ಜಿ ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ. ಎಚ್.ಎಸ್.ರುದ್ರೇಶ್ ‘ವೈದ್ಯಕೀಯ ಸಾಹಿತ್ಯ’ ಕುರಿತು ಉಪನ್ಯಾಸ ನೀಡಿದರು. ದತ್ತಿ ಉಪನ್ಯಾಸದ ನಂತರ ಮಾನಸ ಶಿವರಾಮಕೃಷ್ಣ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. 20ಕ್ಕೂ ಜನರು ಕವಿಗೋಷ್ಠಿಯಲ್ಲಿ ಕವನ ವಾಚಿಸಿದರು.

    ಮನೋವೈದ್ಯೆ ಡಾ. ರಜನಿ ಪೈ, ಕಸಾಪ ಜಿಲ್ಲಾ ಉಪಾಧ್ಯಕ್ಷ ಮಧು ಗಣಪತಿರಾವ್ ಮಡೆನೂರು, ಕೆ.ಬಸವನಗೌಡರು, ತಾಲೂಕು ಕಾರ್ಯದರ್ಶಿ ಜಿ.ಎಸ್.ಅನಂತ, ಚನ್ನಬಸಪ್ಪ ನ್ಯಾಮತಿ, ಹಸನ್ ಬೆಳ್ಳಿಗನೂಡು ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts