More

    ಸಹಕಾರಿ ಸಂಘದ ಪದಾಧಿಕಾರಿಗಳ ಪ್ರತಿಭಟನೆ

    ಹಾವೇರಿ: ಸಹಕಾರಿ ಕ್ಷೇತ್ರವನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡುವುದು ಹಾಗೂ ನೋಟ್​ಬ್ಯಾನ್ ನಂತರ ನಡೆದ ವಿನಿಮಯಕ್ಕೆ ಈಗ ನೋಟಿಸ್ ನೀಡುವುದನ್ನು ನಿಲ್ಲಿಸುವುದು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲೆಯ ಸಹಕಾರಿ ಪತ್ತಿನ ಸಂಘಗಳ ಪದಾಧಿಕಾರಿಗಳು, ಸದಸ್ಯರು ಗುರುವಾರ ನಗರದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿದರು.

    ನಗರದ ಮುರುಘರಾಜೇಂದ್ರಮಠದಿಂದ ರ‍್ಯಾಲಿ ಆರಂಭಿಸಿ ಸಿದ್ದಪ್ಪ ಹೊಸಮನಿ ವೃತ್ತದಲ್ಲಿ ಕೆಲಹೊತ್ತು ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಸಹಕಾರ ಸಂಸ್ಥೆಗಳಿಗೆ 80(ಪಿ) ಅಡಿಯಲ್ಲಿ ತೆರಿಗೆ ವಿನಾಯಿತಿಯಿದ್ದರೂ ಹೊಸ ಕಾಯ್ದೆ ರೂಪಿಸಿ ಶೇ. 30ರಷ್ಟು ಆದಾಯ ತೆರಿಗೆ ನೀಡುವಂತೆ ಅಧಿಕಾರಿಗಳು ನೋಟಿಸ್ ನೀಡುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ. ಸಹಕಾರ ಕ್ಷೇತ್ರವು ಸೇವಾ ಕ್ಷೇತ್ರವಾಗಿದೆ. ಇದು ಲಾಭದಾಯಕ ಕ್ಷೇತ್ರವಲ್ಲ. ಗ್ರಾಮೀಣ, ಸಣ್ಣ ಪಟ್ಟಣ, ನಗರ ಪ್ರದೇಶಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್​ಗಳು ಮಾಡದ ಸೇವೆಯನ್ನು ನಾವು ಮಾಡುತ್ತಿದ್ದೇವೆ. ಜನರಿಗೆ ಸುಲಭದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಆದರೂ ನಮ್ಮ ಮೇಲೆ ವಿವಿಧ ಕಾಯ್ದೆಗಳ ಮೂಲಕ ಕೇಂದ್ರ ಸರ್ಕಾರ ಬರೆ ಎಳೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

    ನೋಟ್​ಬ್ಯಾನ್ ಆಗಿ 3 ವರ್ಷ ಕಳೆದ ನಂತರ ಇದೀಗ ಸಹಕಾರ ಸಂಸ್ಥೆಗಳಲ್ಲಿ ನೋಟ್ ಬದಲಾವಣೆಗೆ ಸಂಬಂಧಿಸಿದಂತೆ ನೋಟಿಸ್ ನೀಡಿ ಶೇ. 60ರಷ್ಟು ತೆರಿಗೆ, ಶೇ. 10ರಷ್ಟು ದಂಡವನ್ನು ಪಾವತಿಸುವಂತೆ ಬೆದರಿಸಲಾಗುತ್ತಿದೆ. ಸಹಕಾರಿ ಸಂಸ್ಥೆಗಳು ಕಳ್ಳ ಮಾರ್ಗದಲ್ಲಿ ಹಳೆಯ ನೋಟುಗಳನ್ನು ಬದಲಾಯಿಸಿಲ್ಲ. ಪ್ರತಿಯೊಂದಕ್ಕೂ ಲೆಕ್ಕವಿದೆ. ಯಾವುದೋ ಒಂದೆರಡು ಸಂಸ್ಥೆಗಳು ತಪ್ಪು ಮಾಡಿದರೆ ಅವುಗಳ ಮೇಲೆ ಕ್ರಮ ಕೈಗೊಳ್ಳಲಿ ಆದರೆ, ಎಲ್ಲರ ಮೇಲೇಕೆ ಕಾಯ್ದೆಯ ಬ್ರಹ್ಮಾಸ್ತ್ರ ಪ್ರಯೋಗ ಎಂದು ಅವರು ಆಕ್ರೋಶವ್ಯಕ್ತಪಡಿಸಿದರು.

    ರಾಜ್ಯ ಸಹಕಾರಿ ಮಹಾಮಂಡಳದ ನಿರ್ದೇಶಕ ಡಾ. ಸಂಜಯ ಹೊಸಮಠ, ತಮ್ಮಣ್ಣ ಕೆಂಚರಡ್ಡಿ, ಉಮೇಶ ಬಾಳಿ, ಜಿಲ್ಲೆಯ ವಿವಿಧ ಸಹಕಾರಿ ಸಂಘಗಳ ಪ್ರಮುಖರಾದ ಬಸವರಾಜ ಬೆಳವಡಿ, ಎಸ್.ಎನ್. ಹಿರೇಮಠ, ಸಿ.ಎಸ್. ಮಠದ, ಮಂಜುಳಾ ಬಾಳಿಕಾಯಿ, ರತ್ನಾ ಭೀಮಕ್ಕನವರ ಇನ್ನಿತರರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts