ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದೇ ತಡ, ಭಾರತೀಯ ಸಿನಿಮಾರಂಗ ಶಾಕ್ನಲ್ಲಿದೆ. ಅವರ ಆತ್ಮಹತ್ಯೆ ವಿಚಾರ ಬೇರೆ ಬೇರೆ ಮಗ್ಗುಲಿಗೆ ಹೊರಳುತ್ತಿದೆ. ಒಂದಿಷ್ಟು ಮಂದಿ ಇದು ಪೂರ್ವನಿಯೋಜಿತ ಕೊಲೆ ಎಂದರೆ, ಮತ್ತೆ ಕೆಲವರು ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಎಂದೂ ಆಗ್ರಹಿಸಿದ್ದಾರೆ. ಇದೆಲ್ಲದರ ನಡುವೆ, ಬಾಲಿವುಡ್ ಸಿನಿಮಾರಂಗದ ಕೆಲ ಸ್ಟಾರ್ ನಟ, ನಟಿ ಮತ್ತು ನಿರ್ಮಾಪಕರ ಸ್ವಜನಪಕ್ಷಪಾತವೂ ಇದೀಗ ಮುನ್ನೆಲೆಗೆ ಬಂದಿದೆ. ಆ ಧೋರಣೆಯಿಂದಲೇ ಸುಶಾಂತ್ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನೇರವಾಗಿ ಆರೋಪಿಸುತ್ತಿದ್ದಾರೆ. ಅಷ್ಟೇ ಅಲ್ಲ ಸುಶಾಂತ್ ಹುಟ್ಟೂರು ಪಾಟ್ನಾದಲ್ಲಿ ಅವರ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಬಾಲಿವುಡ್ನಲ್ಲಾಗುತ್ತಿರುವ ನೆಪೊಟಿಸಂ ವಿರುದ್ಧ ಧಿಕ್ಕಾರ ಮೊಳಗಿಸುತ್ತಿದ್ದಾರೆ.
ಇದನ್ನೂ ಓದಿ: ಆಮೀರ್ ಖಾನ್ ಜತೆ ‘ಮಹಾಭಾರತ’ ಸಿನಿಮಾನಾ? ನೋ ವೇ.. ಚಾನ್ಸೇ ಇಲ್ಲ!
ಜಾಲತಾಣಗಳಲ್ಲಿ ಸುಶಾಂತ್ ಸಿಂಗ್ ಅವರನ್ನು ನಿಂದಿಸಿದ್ದ ಒಂದಷ್ಟು ವಿಡಿಯೋಗಳು ಎಲ್ಲರ ಕಣ್ಣಿಗೆ ಬಿದ್ದಿವೆ. ಆ ವಿಡಿಯೋಗಳೇ ಇದೀಗ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದ್ದು, ಕರಣ್ ಜೋಹರ್, ಸಲ್ಮಾನ್ ಖಾನ್ ಮತ್ತು ಆಲಿಯಾ ಭಟ್ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪಾಟ್ನಾದಲ್ಲಿ ಸುಶಾಂತ್ ಸಾವು ಖಂಡಿಸಿ ಕರಣ್, ಸಲ್ಮಾನ್ ಮತ್ತು ಆಲಿಯಾ ಫೋಟೋಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅದು ಕೊಲೆ ಎಂದು ಆರೋಪಿಸುತ್ತಿದ್ದಾರೆ. ಸದ್ಯ ಪ್ರತಿಭಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಪಡೆ ನಿಯೋಜಿಸಲಾಗಿದೆ.
ಇದನ್ನೂ ಓದಿ: ವಿಡಿಯೋ ಸಂದೇಶದ ಮೂಲಕ ಪರಿಪರಿಯಾಗಿ ಬೇಡಿಕೊಂಡ ಅರ್ಜುನ್ ಸರ್ಜಾ
ಅಷ್ಟಕ್ಕೂ ಸಲ್ಮಾನ್ ಖಾನ್ ವಿರುದ್ಧ ಪ್ರತಿಭಟನಾಕಾರರ ಕೋಪವೇಕೆ? ನಟ ಕಮಲ್ ಆರ್ ಖಾನ್ ಮಂಗಳವಾರವಷ್ಟೇ ಬಾಲಿವುಡ್ ಆಳುತ್ತಿರುವ ಕೆಲ ನಿರ್ಮಾಣ ಕಂಪನಿಗಳ ಬಗ್ಗೆ ಟ್ವಿಟ್ ಮಾಡಿದ್ದರು. ಅದರಲ್ಲಿ ಸಲ್ಮಾನ್ ಖಾನ್ ಫಿಲಂಸ್, ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್ ಮತ್ತು ಯಶ್ ರಾಜ್ ಫಿಲಂಸ್ ಕಂಪನಿಗಳು ಸುಶಾಂತ್ ಸಿಂಗ್ ಸಿನಿಮಾ ಬ್ಯಾನ್ ಮಾಡಿದ್ದವು. ಇದನ್ನೇ ಗುರುಯಾಗಿಸಿ ಇಟ್ಟುಕೊಂಡು, ಪ್ರತಿಭಟನಾಕಾರರು ಸಲ್ಮಾನ್ ವಿರುದ್ಧವೂ ತಿರುಗಿ ಬಿದ್ದಿದ್ದಾರೆ.
ಇದನ್ನೂ ಓದಿ: ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದರೆ, ದಿನಕ್ಕೆ 100 ಜನ ಸಾಯುತ್ತಿದ್ದರು
ಇನ್ನು ಸುಶಾಂತ್ ಸಾವಿನ ಬಗ್ಗೆ ತನಿಖೆ ನಡೆದಿದ್ದು, ಮಾಹಿತಿ ಕಲೆಹಾಕುವ ಕೆಲಸ ಪ್ರಗತಿಯಲ್ಲಿದೆ. ಭಾನುವಾರ (ಜೂ 14) ಮುಂಬೈನ ಬಾಂದ್ರಾ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ ಮೃತ ದೇಹ ಪತ್ತೆಯಾಗಿತ್ತು. ಸೋಮವಾರ ಅಂತಿಮಸಂಸ್ಕಾರ ಪ್ರಕ್ರಿಯೆ ನೆರವೇರಿತ್ತು. (ಏಜೆನ್ಸೀಸ್)
ಅಪ್ಪ-ತಾತನ ಹೆಸರು ಗೊತ್ತಿದ್ದರೆ, ಅವರ ಬಗ್ಗೆಯೂ ಆರೋಪ ಮಾಡುತ್ತಿದ್ದರೇನೋ?