ಹಿರೇಕೆರೂರ: ತಾಲೂಕಿನ ನಿಡನೇಗಿಲು ಗ್ರಾಮದಲ್ಲಿರುವ ಎಂಎಸ್ಐಎಲ್ (ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್) ಮದ್ಯದ ಮಳಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಮಳಿಗೆ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಕೆಂಚಪ್ಪ ಕುರಿಯವರ ಮಾತನಾಡಿ, ಗ್ರಾಮದಲ್ಲಿ ಮದ್ಯ ಮಾರಾಟ ಮಳಿಗೆಯಿಂದಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮದ್ಯವ್ಯಸನಿಗಳಾಗಿದ್ದು, ಗಲಾಟೆಗಳು ನಡೆಯುತ್ತಿವೆ. ಗ್ರಾಮದಲ್ಲಿ ಅಶಾಂತಿ ಉಂಟಾಗಿದೆ. ಮಹಿಳೆಯರಿಗೆ, ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಜನನಿಬೀಡ ಪ್ರದೇಶದಲ್ಲಿರುವ ಈ ಮದ್ಯದ ಮಳಿಗೆಯನ್ನು ಸ್ಥಳಾಂತರಿಸಬೇಕು. ಈ ಬಗ್ಗೆ ಹಲವು ಬಾರಿ ಹೋರಾಟ ನಡೆಸಿದರೂ ಅಬಕಾರಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಅಬಕಾರಿ ಅಧಿಕಾರಿ ಸ್ಥಳಕ್ಕೆ ಬರುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.
ಸ್ಥಳಕ್ಕಾಗಮಿಸಿದ ರಾಣೆಬೆನ್ನೂರ ಅಬಕಾರಿ ಡಿವೈಎಸ್ಪಿ ಶೇಖರ, ಸಿಪಿಐ ಲಕ್ಷ್ಮೀಪತಿ, ಪಿಎಸ್ಐ ನೀಲಪ್ಪ ನರಲಾರ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಶುಕ್ರವಾರ ಅಬಕಾರಿ ಜಿಲ್ಲಾಧಿಕಾರಿಗಳನ್ನು ಸ್ಥಳಕ್ಕೆ ಕರೆಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು.
ಗ್ರಾಮಸ್ಥರಾದ ಜಿ.ಜಿ. ಪಾಟೀಲ, ಶಂಕ್ರಗೌಡ ಮುದಿಗೌಡ್ರ, ಎಸ್.ಎಚ್. ದೊಡ್ಡೇರಿ, ಸೇವ್ಯಾನಾಯ್ಕಾ ಲಮಾಣಿ, ಎಸ್.ಎಸ್. ನೂಲಗೇರಿ, ಬಿ.ಎಚ್. ಲಮಾಣಿ, ಮಂಜಪ್ಪ ವಡ್ಡರ ಹಾಗೂ ಗ್ರಾಮಸ್ಥರು ಇದ್ದರು.