ಹೊಳೆನರಸೀಪುರ: ತಾಲೂಕಿನ ಹೊನ್ನಾವರ ಗ್ರಾಮದ ಪ್ರಭಾವಿ ಕುಟುಂಬವೊಂದು ಸರ್ಕಾರಿ ಗೋಮಾಳವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಶೆಡ್ ಅನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.
ಬೇರೆ ಊರಿನಿಂದ ಬಂದು ಇಲ್ಲಿ ಸೇರಿಕೊಂಡಿರುವ ಒಂದೇ ಕುಟುಂಬದವರಾದ ವಕೀಲ, ಪಿಡಿಒ ಹಾಗೂ ಸರ್ಕಾರಿ ಇಂಜಿನಿಯರ್ ಒಟ್ಟಾಗಿ ಸೇರಿ ನಮ್ಮ ಗ್ರಾಮದ 5.25 ಎಕರೆ ಗೋಮಾಳದಲ್ಲಿ ಈಗಾಗಲೇ 1 ಎಕರೆ ಒತ್ತುವರಿ ಮಾಡಿಕೊಂಡು ಮನೆಗಳನ್ನು ಅಕ್ರಮವಾಗಿ ಕಟ್ಟಿಕೊಂಡಿದ್ದಾರೆ. ಈಗ ಮತ್ತೆ ಕನಕ ಭವನ ಹಾಗೂ ಬಸವೇಶ್ವರ ಭವನಕ್ಕೆ ಮೀಸಲಿಟ್ಟಿದ್ದ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿ ಸಂಪೂರ್ಣ ಗೋಮಾಳವನ್ನೆಲ್ಲ ಕಬಳಿಸಲು ಯತ್ನಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
ಗೋಮಾಳದಲ್ಲಿ ಶೆಡ್ ನಿರ್ಮಿಸಿದ್ದಾರೆ. ಹುಲ್ಲಿನ ಮೆದೆ ಇಟ್ಟಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಇದನ್ನು ಪ್ರಶ್ನಿಸಿದರೆ, ಸರ್ಕಾರಿ ಜಾಗ, ನೀವ್ಯಾರು ಕೇಳೋಕೆ ಎಂದು ಬೆದರಿಸುತ್ತಾರೆ. ಈ ಬಗ್ಗೆ ನಾವು ತಹಸೀಲ್ದಾರ್ ಹಾಗೂ ಪೊಲೀಸರಿಗೆ ದೂರು ನೀಡಿದ್ದೇವೆ. ಕೂಡಲೇ ಒತ್ತುವರಿಯಾಗಿರುವ ಗೋಮಾಳವನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ದಯಾನಂದ, ಶಂಕರೇಗೌಡ, ವಿಶಾಲಾಕ್ಷಿ, ರಾಮೇಗೌಡ, ಕುಮಾರ್, ರಘು, ಗಂಗಮ್ಮ ಇತರರಿದ್ದರು.