ಮಂಗಳೂರು: ಈತ ಸ್ವಘೋಷಿತ ಸಾಮಾಜಿಕ ಕಾರ್ಯಕರ್ತ. ಹೆಲ್ಪ್ ಇಂಡಿಯಾ ಫೌಂಡೇಶನ್ ಎಂಬುದೊಂದು ಎನ್ಜಿಒ ಹುಟ್ಟು ಹಾಕಿಕೊಂಡಿದ್ದ ಅನಾಥರ ಸೇವೆ ಮಾಡುವಂತೆ ಪೋಸ್ ಕೊಡುತ್ತಿದ್ದ.
ಇದೇ ಸೋಗಿನಲ್ಲೇ ಪ್ರಭಾವಿಗಳ ಸಖ್ಯ ಬೆಳೆಸಿಕೊಂಡಿದ್ದಲ್ಲದೆ ಶಾಸಕ ಯು.ಟಿ.ಖಾದರ್, ಮಂಗಳೂರು ಕಮಿಷನರ್ ಶಶಿಕುಮಾರ್ ಜೊತೆಗೂ ಫೊಟೊ ತೆಗೆಸಿಕೊಳ್ಳುತ್ತಿದ್ದ. ಈಗ ಮಾತ್ರ ಅಪ್ರಾಪ್ತ ವಯಸ್ಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಅರೆಸ್ಟ್ ಆಗಿದ್ದಾನೆ. ಈತನ ಹೆಸರು ಉಳ್ಳಾಲದ ರಾಝಿಕ್ ಉಳ್ಳಾಲ ಯಾನೆ ರಫೀಕ್ ಉಳ್ಳಾಲ.
ನಗರದ ನಂದಿಗುಡ್ಡೆಯ ಫ್ಲ್ಯಾಟ್ವೊಂದರಲ್ಲಿ ನಡೆಯುತ್ತಿದ್ದ ಅಪ್ರಾಪ್ತ ಬಾಲಕಿಯರ ಹಾಗೂ ಯುವತಿಯರ ಮಾನವ ಕಳ್ಳ ಸಾಗಾಣಿಕೆ, ವೇಶ್ಯಾವಾಟಿಕೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬಂಧಿಸಲ್ಪಟ್ಟಿರುವ 16ನೇ ಆರೋಪಿ ಈತ. ಇಬ್ಬರು ಅಪ್ರಾಪ್ತ ಬಾಲಕಿಯವರು ನೀಡಿದ ದೂರಿನಂತೆ ಮಂಗಳೂರು ಸಿಸಿಬಿ ಪೊಲೀಸರು ತನಿಖೆಯನ್ನು ಕೈಗೊಂಡಿದ್ದು, ಅಪ್ರಾಪ್ತ ಬಾಲಕಿಯರಿಗೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ರಾಝಿಕ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ 10 ಪ್ರಕರಣಗಳು ದಾಖಲಾಗಿದ್ದು, ಎಲ್ಲ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.