ಆಲ್ದೂರು: ಆಲ್ದೂರಿನ ಸಂತೆ ಮೈದಾನದಲ್ಲಿ ಸಂತೆ ನಡೆಸಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರಿಂದ ಶನಿವಾರ ಪಟ್ಟಣದ ಮುಖ್ಯ ರಸ್ತೆ ಬದಿಯಲ್ಲೇ ಸಂತೆ ನಡೆಯಿತು. ಸಂತೆ ಗಲಾಟೆ ನಡುವೆಯೇ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಕರೊನಾ ಹಿನ್ನಲೆಯಲ್ಲಿ ಸರ್ಕಾರ ಸಂತೆ ರದ್ದು ಮಾಡಿದೆ. ಆದರೂ ಪ್ರತಿ ಶನಿವಾರ ಆಲ್ದೂರಲ್ಲಿ ಸಂತೆ ನಡೆಯುತ್ತಿದೆ. ಅದರಂತೆ ಈ ವಾರವೂ ತರಕಾರಿ ಮಾರಾಟಕ್ಕೆ ನೂರಾರು ವಾಹನಗಳು ಬಂದಿವೆ. ಸಂತೆ ಮೈದಾನದ ನಿವಾಸಿಗಳು ವಾಹನಗಳನ್ನು ತಡೆದು ವಾಪಸ್ ಕಳಿಸಿದ್ದಾರೆ. ಆದರೂ 11 ಗಂಟೆ ನಂತರ ಪಟ್ಟಣದ ಮುಖ್ಯ ರಸ್ತೆಯ ಎರಡೂ ಬದಿ ಅಂಗಡಿ ಹಾಕಿ ವ್ಯಾಪಾರ ನಡೆಸಲಾಗಿದೆ. ಇದರಿಂದ ಟ್ರಾಫಿಕ್ ಜಾಮ್ ಆಗಿ ಪಾದಚಾರಿಗಳು, ವಾಹನ ಸವಾರರು ತೊಂದರೆ ಅನುಭವಿಸಿದರು. ಮುಖ್ಯ ರಸ್ತೆ ಸಮೀಪದಲ್ಲೇ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರ ಇರುವುದರಿಂದ ವಿದ್ಯಾರ್ಥಿಗಳು ಗದ್ದಲದ ನಡುವೆ ಪರೀಕ್ಷೆ ಬರೆದರು.
ಸಂತೆ ನಿಷೇಧವಿದ್ದರೂ ಅಂಗಡಿ ಹಾಕಿ ವ್ಯಾಪಾರ ಮಾಡುತ್ತಿದ್ದಾರೆ. ಈ ಬಗ್ಗೆ ಡಿಸಿ, ಪೊಲೀಸ್, ಆಲ್ದೂರು ಗ್ರಾಪಂಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಕಳೆದ ವಾರ ಸಂತೆ ತ್ಯಾಜ್ಯ ಈವರೆಗೂ ತೆರವುಗೊಳಿಸಿಲ್ಲ ಎಂದು ಸಂತೆ ಮೈದಾನದ ವಾಸಿಗಳು ದೂರಿದ್ದಾರೆ.