More

    ಕಾಡಿನವರಲ್ಲ, ನಗರ ನಕ್ಸಲರದ್ದೇ ದೊಡ್ಡ ಸಮಸ್ಯೆ!

    ಕಾಡಿನವರಲ್ಲ, ನಗರ ನಕ್ಸಲರದ್ದೇ ದೊಡ್ಡ ಸಮಸ್ಯೆ!1967ರಲ್ಲಿ ನಕ್ಸಲ್​ಬರಿ ಹೋರಾಟ ಜೋರಾದಾಗಿನಿಂದ ಇವರೆಲ್ಲರ ವರಸೆಗಳು ಬದಲಾಗುತ್ತಿರುವುದು ಕಾಣುತ್ತಲೇ ಇವೆ. ಚುನಾವಣೆಯ ಕಾದಾಟ ನಡೆಸಿದ ಕಮ್ಯುನಿಸ್ಟ್ ಪಾರ್ಟಿಯ ತುಂಡುಗಳೆಲ್ಲವೂ ಚೀನಾದ ಕಲ್ಪನೆಯಿಂದ ಹೊರಹೋದಂತವೇ. ಚೀನಾಕ್ಕೆ ಬಂಗಾಳ, ಕೇರಳದ ಮೇಲೆ ಅಧಿಕಾರ ಸ್ಥಾಪಿಸಿ ಆಗಬೇಕಾದ್ದು ಏನಿಲ್ಲ. ಅದಕ್ಕೆ ಭಾರತವನ್ನೇ ಆಪೋಷನ ತೆಗೆದುಕೊಳ್ಳಬೇಕು ಎಂಬ ಹುಚ್ಚುಹಠ.

    ಛತ್ತೀಸ್​ಗಢದಲ್ಲಿ ಸೈನಿಕರ ಬರ್ಬರ ಹತ್ಯೆಯಾಯ್ತು. ನಕ್ಸಲರನ್ನು ಅರಸಿಕೊಂಡು ಹೋದ, ಸಮಾಜಕಂಟಕರಾದ ಅವರನ್ನು ಬಂಧಿಸಬೇಕು ಅಥವಾ ಸಮೂಲನಾಶ ಮಾಡಬೇಕೆಂದು ಹೊರಟಿದ್ದ ಸೈನಿಕರನ್ನು ಅವರು ಬರ್ಬರವಾಗಿ ಹತ್ಯೆ ಮಾಡಿಬಿಟ್ಟರು. ಕಳೆದ ಆರೇಳು ವರ್ಷಗಳಲ್ಲಿ ನಕ್ಸಲರ ಸಾಮರ್ಥ್ಯ ತುಂಬ ಕಡಿಮೆಯಾಗಿದೆ. ಸರ್ಕಾರವೇ ನೀಡಿರುವ ಮಾಹಿತಿಯ ಪ್ರಕಾರ ನರೇಂದ್ರ ಮೋದಿ ಅಧಿಕಾರಾವಧಿಯ ಐದು ವರ್ಷಗಳಲ್ಲಿ ಅದಕ್ಕೂ ಹಿಂದಿನ ಐದು ವರ್ಷಗಳ ಅವಧಿಗೆ ಹೋಲಿಸಿದರೆ ನಕ್ಸಲರ ಬಾಧೆ ಶೇಕಡ 50ರಷ್ಟು ಕಡಿಮೆಯಾಗಿದೆ. ಒಂದು ಕಾಲದಲ್ಲಿ ಇನ್ನೂರು ಜಿಲ್ಲೆಗಳಿಗೆ ಹಬ್ಬಿಕೊಂಡಿದ್ದರಲ್ಲ ನಕ್ಸಲರು, ಅವರೀಗ 60 ಜಿಲ್ಲೆಗಳಿಗೆ ಸೀಮಿತರಾಗಿದ್ದಾರೆ. ಅದರಲ್ಲೂ ಹತ್ತು ಜಿಲ್ಲೆಗಳಲ್ಲಿ ಅವರು ಪರಿಣಾಮಕಾರಿಯಾಗಿ ಸಮಾಜವನ್ನು ಎದುರು ಹಾಕಿಕೊಂಡಿದ್ದಾರೆ. ಸ್ಥಳೀಯ ಜನರೂ ಈಗ ಅವರಿಗೆ ಹೆದರುತ್ತಿಲ್ಲ. ಕಳೆದ ವರ್ಷ ಗಣರಾಜ್ಯೋತ್ಸವದ ದಿನದಂದು ಧ್ವಜ ಹಾರಿಸುವುದನ್ನು ವಿರೋಧಿಸಿದ ಮೋಸ್ಟ್ ವಾಂಟೆಡ್ ನಕ್ಸಲ್​ನೊಬ್ಬನನ್ನು ಮಲಕನಗಿರಿಯಲ್ಲಿ ಜನ ಬಡಿಬಡಿದೇ ಕೊಂದಿದ್ದರು. ಅವರಿಗೀಗ ಜನರ ಅನುಕಂಪ ಸಿಗುತ್ತಿಲ್ಲ, ಹಣವಿಲ್ಲ, ಕೊನೆಗೆ ಅವರ ಪಡೆಗೆ ಸೇರಿಕೊಳ್ಳುವ ತರುಣವರ್ಗವೂ ಇಲ್ಲ. ತೀರಾ ಇತ್ತೀಚೆಗೆ ಕಾಲೇಜಿನ ವಿದ್ಯಾರ್ಥಿಯನ್ನು ಅಪಹರಿಸಿಕೊಂಡು ಹೋಗಿ ಅವನನ್ನು ನಕ್ಸಲರನ್ನಾಗಿಸುವ ಪ್ರಯತ್ನ ಮಾಡಿ ತೊಂದರೆಗೆ ಸಿಕ್ಕುಹಾಕಿಕೊಂಡಿದ್ದರು. ಕಾಲೇಜು ವಿದ್ಯಾರ್ಥಿಗಳು ರೊಚ್ಚಿಗೆದ್ದು ಸಹಪಾಠಿಯನ್ನು ಬಿಡುಗಡೆ ಮಾಡದಿದ್ದರೆ ಪರಿಸ್ಥಿತಿ ನೆಟ್ಟಗಾಗಿರುವುದಿಲ್ಲ ಎಂದು ಹೆದರಿಸಿದ ಬಳಿಕ ತರಾತುರಿಯಲ್ಲಿ ಆ ವಿದ್ಯಾರ್ಥಿಯನ್ನು ಬಿಟ್ಟೆರು.

    ಒಂದೆಡೆ ಅವರಿಗೆ ಆಜ್ಞೆ ನೀಡುವ ಚೀನಾ ತಾನೇ ತೊಂದರೆಯಲ್ಲಿ ಸಿಕ್ಕುಹಾಕಿಕೊಂಡಿದ್ದರೆ, ಸಹಾಯ ಮಾಡಲಾಗದ ದೈನೇಸಿ ಸ್ಥಿತಿಯಲ್ಲಿ ಇಲ್ಲಿ ಅವರ ಸೇವಕರಿದ್ದಾರೆ. ಹೀಗಾಗಿಯೇ ಭಾರತವನ್ನು ಸಂಕಟಕ್ಕೆ ಸಿಲುಕಿಸಿ ಚೀನಾದ ಕೈ ಮೇಲಾಗುವಂತೆ ಮಾಡುವ ತುರ್ತಿಗೆ ಅವರೀಗ ಬಿದ್ದಿದ್ದಾರೆ. ಅದಕ್ಕೇ ಈ ಬಗೆಬಗೆಯ ಪ್ರಯಾಸಗಳು. ಅದರಲ್ಲೂ ಬಂಗಾಳದ ಚುನಾವಣೆಯಲ್ಲಿ ಭಾಜಪ ಗೆಲ್ಲುತ್ತದೆ ಎಂದಾಗಿಬಿಟ್ಟರೆ ಅಲ್ಲಿಗೆ ಕಮ್ಯುನಿಸ್ಟರ ಕಥೆ ಮುಗಿದಂತೆ. ಮಮತಾ ಬ್ಯಾನರ್ಜಿಯ ಮುಸ್ಲಿಂ ತುಷ್ಟೀಕರಣ ಒಂದು ಹಂತದಲ್ಲಿ ಭಾರತ ವಿರೋಧಿಯೇ. ಚೀನಾಕ್ಕೆ ಕಮ್ಯುನಿಸ್ಟರು ಅಧಿಕಾರದಲ್ಲಿ ಇರದೇ ಹೋದರೂ ಚಿಂತೆ ಇಲ್ಲ, ಮಮತಾ ಇದ್ದರಾದರೂ ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳುವ ಅವಕಾಶವಿರುತ್ತದೆ. ಆದರೆ ಈ ಬಾರಿ ಹಾಗಾಗುತ್ತಿಲ್ಲ.

    ಇಷ್ಟಕ್ಕೂ ನಕ್ಸಲರು ಹುಟ್ಟಿದಂದಾಗಿನಿಂದಲೂ ಆಜ್ಞೆ ಪಡೆದಿರುವುದು ಚೀನಾದಿಂದಲೇ. ಈ ಹೋರಾಟದ ಜನಕರೆಂದೇ ಬಿಂಬಿಸಲ್ಪಡುವ ಚಾರು ಮಜುಂದಾರ್, ಕನು ಸನ್ಯಾಲ್​ರೆಲ್ಲ ‘ಚೀನಾದ ಅಧ್ಯಕ್ಷನೇ ನಮ್ಮ ಅಧ್ಯಕ್ಷ, ಚೀನಾದ ಮಾರ್ಗವೇ ನಮ್ಮ ಮಾರ್ಗ’ ಎಂದು ಮುಲಾಜಿಲ್ಲದೇ ಹೇಳಿಕೊಂಡವರು.

    1925ರಲ್ಲಿ ಆರಂಭವಾದ ಕಮ್ಯುನಿಸ್ಟ್ ಪಕ್ಷ ಮೊದಲು ಮಾರ್ಕ್ಸ್​ನ ಚಿಂತನೆಗಳನ್ನು ಅನುಸರಿಸಿ, ಆನಂತರ ಲೆನಿನ್​ನನ್ನೂ ಸೇರಿಸಿಕೊಂಡು, ಕೊನೆಗೆ ಮಾವೊವಾದಿಯಾಗಿ ರೂಪುಗೊಳ್ಳುವವರೆಗೆ ಅವರ ಯಾತ್ರೆ ಬಲುರೋಚಕ. ಆದರೆ 1967ರಲ್ಲಿ ನಕ್ಸಲ್​ಬರಿ ಹೋರಾಟ ಜೋರಾದಾಗಿನಿಂದ ಇವರೆಲ್ಲರ ವರಸೆಗಳು ಬದಲಾಗುತ್ತಿರುವುದು ಕಾಣುತ್ತಲೇ ಇವೆ. ಹಾಗೆ ನೋಡಿದರೆ ಪ್ರತೀ ಹಂತದಲ್ಲೂ ಚುನಾವಣೆಯ ಕಾದಾಟ ನಡೆಸಿದ ಕಮ್ಯುನಿಸ್ಟ್ ಪಾರ್ಟಿಯ ತುಂಡುಗಳೆಲ್ಲವೂ ಚೀನಾದ ಕಲ್ಪನೆಯಿಂದ ಹೊರಹೋದಂತವೇ. ಚೀನಾಕ್ಕೆ ಬಂಗಾಳದ ಮೇಲೋ ಕೇರಳದ ಮೇಲೋ ಅಧಿಕಾರ ಸ್ಥಾಪಿಸಿ ಆಗಬೇಕಾದ್ದು ಏನೂ ಇಲ್ಲ. ಅದಕ್ಕೆ ಇಡಿಯ ಭಾರತವನ್ನೇ ಆಪೋಷನ ತೆಗೆದುಕೊಳ್ಳಬೇಕು. ಅದಕ್ಕಾಗಿಯೇ ಅದು ಹೆಣಗಾಡುತ್ತಿರೋದು. ಆರಂಭದ ದಿನಗಳಲ್ಲಿ ಜವಾಹರ್​ಲಾಲ್ ನೆಹರು ಈ ಸಿದ್ಧಾಂತದ ಆರಾಧಕರೇ ಆಗಿದ್ದವರು. ಆದರೆ ಅವರಿಗೆ ಕೆಟ್ಟ ಹೆಸರು ತಂದುಕೊಟ್ಟ ಭಾರತ-ಚೀನಾ ಯುದ್ಧದ ನಂತರ ಅವರು ಕಮ್ಯುನಿಸ್ಟರೆಂದರೆ ಉರಿದು ಬೀಳುತ್ತಿದ್ದರು. ಮುಲಾಜಿಲ್ಲದೆ ಅವರನ್ನು ಮಟ್ಟಹಾಕಿ ಎನ್ನುವಷ್ಟರಮಟ್ಟಿಗೆ.

    ಕಮ್ಯುನಿಸ್ಟರು ಜನರ ಬಡತನ, ನಿರುದ್ಯೋಗವನ್ನು ಬಂಡವಾಳವನ್ನಾಗಿಸಿಕೊಂಡು ಸಿರಿವಂತರ ಫೋಟೊ ತೋರಿಸಿಯೇ ಆಂದೋಲನಕ್ಕೆ ಜನರನ್ನು ಸೆಳೆದುಕೊಂಡುಬಿಡುತ್ತಾರೆ. ‘ಸ್ಟ್ರಾಟೆಜಿ ಆಂಡ್ ಟ್ಯಾಕ್ಟಿಕ್ಸ್ ಆಫ್ ಇಂಡಿಯನ್ ರೆವಲ್ಯೂಷನ್’ ಎಂಬ ಪ್ರಬಂಧದಲ್ಲಿ ಹೋರಾಟದ ಹಾದಿಯನ್ನು ಸ್ಪಷ್ಟವಾಗಿ ಅವರು ನಮೂದಿಸಿದ್ದಾರೆ. ಮೊದಲು ಸುದೀರ್ಘವಾದ ಹೋರಾಟಕ್ಕೆ ಬೇಕಾದ ಸ್ಥಳವನ್ನು ಆಯ್ದುಕೊಳ್ಳುತ್ತಾರೆ. ಸಾಧಾರಣವಾಗಿ ಈ ಪ್ರದೇಶಗಳು ಗುಡ್ಡಗಾಡಿನವೇ ಆಗಿದ್ದು ಸರ್ಕಾರದ ಯಾವ ಯೋಜನೆಗಳೂ ತಲುಪಲಾರದ ಸ್ಥಿತಿ ಇರುತ್ತವೆ. ಇಂಥ ಪ್ರದೇಶಗಳಲ್ಲಿ ಸರ್ಕಾರದಿಂದ ತಾವು ದೂರವಿದ್ದೇವೆ ಎಂಬ ಅರಿವನ್ನು ತರುವ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಜನ ಆಕ್ರೋಶಗೊಳ್ಳುತ್ತಾರಲ್ಲ ಅವರ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿಸುತ್ತಾರೆ. ತಮ್ಮದ್ದೇ ಮಾಧ್ಯಮದವರ ಮೂಲಕ ಇದು ವರದಿಯಾಗುವಂತೆ ನೋಡಿಕೊಳ್ಳುತ್ತಾರೆ. ಸರ್ಕಾರ ತಲೆಕೆಡಿಸಿಕೊಳ್ಳುವುದಿಲ್ಲವೆಂದಾದರೆ ಈ ಪ್ರತಿಭಟನಾನಿರತ ಜನರನ್ನು ಪ್ರಚೋದಿಸುವುದು ಇವರಿಗೆ ಇನ್ನೂ ಸುಲಭ. ಇವರಲ್ಲಿ ಸಮರ್ಥರಾದ ವ್ಯಕ್ತಿಗಳನ್ನು ಗುರುತಿಸಿ ಅವರ ಕೈಗೆ ಚೀನಾದಿಂದ ಕಳ್ಳತನದಲ್ಲಿ ಸಾಗಿಸಿದ ಶಸ್ತ್ರಗಳನ್ನು ಕೊಡುತ್ತಾರೆ. ಅಲ್ಲಿಂದಾಚೆಗೆ ಶಸ್ತ್ರಸಜ್ಜಿತ ಹೋರಾಟ ಆರಂಭ. ಆನಂತರ ಎಲ್ಲ ಅಧಿಕಾರವನ್ನು ಕೈಗೆ ತೆಗೆದುಕೊಂಡು ರಾಷ್ಟ್ರವನ್ನೇ ತಮ್ಮ ತಾಳಕ್ಕೆ ಕುಣಿಯುವಂತೆ ಮಾಡಿಬಿಡುತ್ತಾರೆ. ಹೀಗೆ ಮಾಡಿ ಮಾಡಿಯೇ ಒಂದು ಹಂತದಲ್ಲಿ ದೇಶದ ಇನ್ನೂರು ಜಿಲ್ಲೆಗಳಿಗೆ ವಿಸ್ತಾರವಾಗಿದ್ದು.

    ಕರ್ನಾಟಕದ ಶೃಂಗೇರಿಯೂ ಅವರ ಅಡ್ಡ ಆಗಿದ್ದ ಕಾಲವಿತ್ತು. ಮಲೆನಾಡಿನ ಕಾಡುಗಳು ಹಸಿರಿನಿಂದ ಕೆಂಪಾಗುವುದಕ್ಕೆ ಬಹಳ ಸಮಯ ಬೇಕಿರಲಿಲ್ಲ. ಆದರೆ ಆ ಹೊತ್ತಿಗೆ ಸರಿಯಾಗಿ ಮನಮೋಹನ ಸಿಂಗರು ‘ದೇಶ ಇದುವರೆಗೂ ಎದುರಿಸಿರುವ ಏಕೈಕ ಆಂತರಿಕ ಸುರಕ್ಷತೆಯ ಸವಾಲು ಇದ್ದರೆ ಅದು ನಕ್ಸಲಿಸಂ’ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಭಾರತ ಅದನ್ನು ಸಹಿಸಿಕೊಳ್ಳಲು ಸಿದ್ಧವಿಲ್ಲ ಎಂಬ ಸಂದೇಶವನ್ನು ಕೊಟ್ಟಿದ್ದರು. ಆನಂತರ ನಕ್ಸಲರ ಮೇಲೆ ಭಾರತೀಯ ಭದ್ರತಾಪಡೆ ಮುಗಿಬಿತ್ತು. 70ರ ದಶಕದಲ್ಲಿ ಹರಿದು ಹಂಚಿಹೋಗಿದ್ದ ನಕ್ಸಲರನ್ನು ಮಟ್ಟಹಾಕಿ ಮುಗಿಸಿಬಿಟ್ಟಿದ್ದರಲ್ಲ ಈಗ ಅಷ್ಟು ಸಲೀಸಿರಲಿಲ್ಲ. ಏಕೆಂದರೆ ಆಂಧ್ರದ ‘ಪೀಪಲ್ಸ್ ವಾರ್ ಗ್ರೂಪ್’ ಮತ್ತು ಬಂಗಾಳದ ‘ಕಮ್ಯುನಿಸ್ಟ್ ಸೆಂಟರ್’ ದೇಶದಾದ್ಯಂತ ಹರಿದು ಹಂಚಿಹೋಗಿದ್ದ ಇತರೆಲ್ಲ ಕಮ್ಯುನಿಸ್ಟ್ ಚಳವಳಿಗಳು ಒಂದಾಗಿ ಮಾವೊವಾದಿ ಕಮ್ಯುನಿಸ್ಟ್ ಪಂಥ ರಚಿಸಿಕೊಂಡವು ಮತ್ತು ಕಂಡ-ಕಂಡಲ್ಲಿ ದೇಶವಿರೋಧಿ ಕೃತ್ಯಗಳ ಮೂಲಕ ಸರ್ಕಾರದ ನಿದ್ದೆ ಕೆಡಿಸುವ ನಿಶ್ಚಯ ಮಾಡಿಕೊಂಡಿದ್ದವು. ಜನರ ಅಪಹರಣ, ಕೊಲೆ, ಅವರಿಗೆ ಸರ್ವೆಸಾಮಾನ್ಯವಾಗಿತ್ತು. ಯಾರಾದರೂ ಒಬ್ಬ ವ್ಯಕ್ತಿಯನ್ನು ಊರಿನ ನಡುವೆ ಕೊಂದುಹಾಕಿ ಆತ ಪೋಲಿಸರಿಗೆ ಮಾಹಿತಿ ಕೊಡುತ್ತಿದ್ದ ಎಂದು ಹೇಳಿಬಿಡುತ್ತಿದ್ದರು. ಜನರಿರಲಿ,

    ಪೊಲೀಸರೂ ನಕ್ಸಲರೆಂದರೆ ಹೆದರುವಂಥ ಕಾಲ ಅದು. ಆಂಧ್ರಪ್ರದೇಶದ ರಾಜಕಾರಣಿಗಳನ್ನು ಅವರು ಕೊಲ್ಲುವ ಹಂತಕ್ಕೆ ಬಂದಿದ್ದಲ್ಲದೆ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ಕೂದಲೆಳೆ ಅಂತರದಲ್ಲಿ ಬಚಾವಾಗಿಬಿಟ್ಟಿದ್ದರು. ಅದಾದ ಮೇಲೆ ಅವರು ಗ್ರೇಹೌಂಡ್ಸ್ ಎಂಬ ವಿಶೇಷ ತರಬೇತು ಪಡೆದ ಪೊಲೀಸ್ ಪಡೆಯನ್ನು ರಚಿಸಿ ನಕ್ಸಲರನ್ನು ಮುಗಿಸುವ ನಿಶ್ಚಯ ಕೈಗೊಂಡರು. ಅಲ್ಲಿಂದಾಚೆಗೆ ಆಂಧ್ರದಲ್ಲಿ ಅವರು ಉಸಿರೆತ್ತಲು ಸಾಧ್ಯವಾಗಲಿಲ್ಲ.

    ಮುಂದೇನಾಯ್ತು ಗೊತ್ತೇ? ಆಂಧ್ರದ ಈ ಯೋಜನೆಯನ್ನು ನಕ್ಸಲರಿಂದ ಬಾಧಿತವಾಗಿದ್ದ ಇತರ ರಾಜ್ಯಗಳು ಪ್ರೀತಿಯಿಂದಲೇ ಅಪ್ಪಿಕೊಂಡವು. ಒಡಿಶಾ, ಜಾರ್ಖಂಡ್​ಗಳು ನಕ್ಸಲರನ್ನು ಮಟ್ಟ ಹಾಕಿದವು. ಕರ್ನಾಟಕವೂ ಅಷ್ಟೇ. ಈಗ ನಕ್ಸಲರಿಗೆ ಕೆಲಸ ಮಾಡುವುದು ಸುಲಭವಿರಲಿಲ್ಲ. ಅವರ ಪರವಾಗಿ ಮಾತನಾಡುವಂಥ ಒಂದಷ್ಟು ಜನ ಅವರಿಗೆ ನಗರದಲ್ಲೀಗ ಬೇಕಾಗಿತ್ತು. ಆಗಲೇ ಹುಟ್ಟಿಕೊಂಡಿದ್ದು ನಗರ ನಕ್ಸಲರು. ಹಾಗಂತ ಇವರು ಹೊಸಬರೆಂದು ಭಾವಿಸಬೇಡಿ. ಕಮ್ಯುನಿಸ್ಟ್ ಚಿಂತನೆಯಿಂದ ಪ್ರಭಾವಿತಗೊಂಡ ಕೆಲ ಪತ್ರಕರ್ತರು, ವಿಶ್ವವಿದ್ಯಾಲಯದ ಕೆಲ ಪ್ರೊಫೆಸರ್​ಗಳು, ಲೇಖಕರು, ಸಾಹಿತಿಗಳು ಎಲ್ಲೆಡೆ ಹಬ್ಬಿಕೊಂಡಿದ್ದಾರೆ. ಅವರು ನಮಗೂ ನಿಮಗೂ ಅರಿವಾಗದಂತೆಯೇ ನಮ್ಮ ನಡುವೆ ಇರುತ್ತಾರೆ. ನಕ್ಸಲರು ಸೈನಿಕರನ್ನು ಕೊಂದಾಗ ಸಣ್ಣದೊಂದು ಲೇಖನವನ್ನು ಪ್ರಮುಖ ಪತ್ರಿಕೆಯಲ್ಲಿ ಬರೆದು ‘ಸೈನಿಕರು ಹಳ್ಳಿಯ ಹೆಣ್ಣುಮಕ್ಕಳ ಮೇಲೆ ಮುಗಿಬೀಳುತ್ತಿದ್ದರಾದ್ದರಿಂದ ಅವರನ್ನು ಕೊಲ್ಲಲಾಯ್ತು’ ಎಂದು ಬರೆದುಬಿಡುತ್ತಾರೆ. ಆದರೆ ಇದೇ ಪ್ರೊ್ರೆಸರ್​ಗಳು ಕಾಲೇಜಿನ ಹೆಣ್ಣುಮಕ್ಕಳೊಂದಿಗೆ ಹೇಗೆ ನಡೆದುಕೊಂಡಿದ್ದರು ಎಂಬ ಸತ್ಯವನ್ನು ಮರೆಮಾಚಿಬಿಡುತ್ತಾರೆ. ಕರ್ನಾಟಕದ ಕೆಲವು ಯುನಿವರ್ಸಿಟಿಗಳಂತೂ ಇಂಥ ವಿಚಾರಗಳಲ್ಲಿ ಸಾಕಷ್ಟು ಕುಖ್ಯಾತಿಯನ್ನೇ ಸಂಪಾದಿಸಿವೆ.

    ಈಗ ಆಲೋಚನೆ ಮಾಡಿ. ಒಬ್ಬ ಈ ಬಗೆಯ ನಗರ ನಕ್ಸಲ್ ತನ್ನ ಜೀವಿತಾವಧಿಯಲ್ಲಿ ಎಷ್ಟು ಶಿಷ್ಯರನ್ನು ಸೃಷ್ಟಿಸಬಲ್ಲ! ಈ ಶಿಷ್ಯರು ಸಮಾಜದ ಆಯಕಟ್ಟಿನ ಜಾಗಗಳನ್ನು ಆವರಿಸಿಕೊಂಡು ಆ ಮೂಲಕ ಜನರನ್ನು ಪ್ರಭಾವಿಸುತ್ತಾರೆ. ಅವರು ಶಿಕ್ಷಕರಾದರೆ ವಿದ್ಯಾರ್ಥಿಗಳ ತಲೆಕೆಡಿಸುವ ಮೂಲಕ, ಸಮಾಜಕರ್ವಿುಗಳಾದರೆ ಜನಸಾಮಾನ್ಯರ ಚಿಂತನೆಯನ್ನೇ ಬದಲಿಸುವ ಮೂಲಕ ನಿರಂತರ ಕೆಲಸ ಮಾಡುತ್ತಿರುತ್ತಾರೆ!

    ಈಗಿನ ಕೇಂದ್ರ ಸರ್ಕಾರ ಇಂಥ ಚಟುವಟಿಕೆಗಳ ಮೇಲೆ ಒಂದು ವಿಶೇಷ ಕಣ್ಣಿಟ್ಟಿದೆ. ಈ ಹಿಂದೆ 40 ನಕ್ಸಲರನ್ನು ಸಂಹರಿಸಿದ್ದ ಭಾರತೀಯ ಸೈನಿಕರ ವಿರುದ್ಧವಾಗಿ ಪುಣೆಯ ಪತ್ರಕರ್ತನೊಬ್ಬ, ‘40ನ್ನು ಕೊಂದರೇನು? ಸದ್ಯದಲ್ಲೇ ನಿಮ್ಮಲ್ಲಿ 400 ಮಂದಿಯನ್ನು ಕೊಲ್ಲುತ್ತಾರೆ ನೋಡುತ್ತಿರಿ’ ಎಂದು ಬರೆದುಕೊಂಡು ಸಿಕ್ಕಿಹಾಕಿಕೊಂಡಿದ್ದ. ಭೀಮಾ ಕೋರೆಗಾಂವ್ ಗಲಾಟೆಯಲ್ಲಿ ಮರಾಠಿಗರನ್ನು, ದಲಿತರನ್ನು ಹೊಡೆದಾಟಕ್ಕೆ ತಳ್ಳುವ ಮೂಲಕ ರಾಷ್ಟ್ರಕಂಟಕ ಕೃತ್ಯಕ್ಕೆ ಕೈ ಹಾಕಿದ್ದ ಐವರನ್ನು ಬಂಧಿಸಲಾಗಿದೆ. ಅವರನ್ನು ಸಮರ್ಥಿಸಿಕೊಂಡು ಬಿಡುಗಡೆಗೆ ಪ್ರಯತ್ನ ಮಾಡಲು ಉಳಿದೆಲ್ಲ ನಗರ ನಕ್ಸಲರು ಹೆಣಗುತ್ತಿದ್ದಾರೆ. ಆದರೆ ಅವರೆಲ್ಲರಿಗೂ ಸ್ಪಷ್ಟವಾಗಿರುವ ಒಂದು ಸಂಗತಿ ಎಂದರೆ ಮೋದಿ ಸರ್ಕಾರ ಜಗ್ಗುತ್ತಿಲ್ಲ ಎನ್ನೋದು. ಅವರು ಯಾವುದಕ್ಕೂ ಮುಲಾಜು ನೋಡುತ್ತಿಲ್ಲ. ಎಲ್ಲರಿಗೂ ತಕ್ಕ ಪಾಠ ಕಲಿಸಿ ಭಾರತವನ್ನು ಉಳಿಸಿಕೊಳ್ಳಲು ಸಂಕಲ್ಪಬದ್ಧರಾಗಿದ್ದಾರೆ. ಹಾಗೆಂದೇ ಈ ಬಾರಿ ನಕ್ಸಲರು ಪೊಲೀಸರನ್ನು ಹತ್ಯೆ ಮಾಡಿದಾಗ ಇಡಿಯ ದೇಶ ನಕ್ಸಲರ ವಿರುದ್ಧ ಮಾತನಾಡುತ್ತಿತ್ತಲ್ಲ, ಒಬ್ಬನಾದರೂ ‘ನಗರ ನಕ್ಸಲ್’ ನಕ್ಸಲರ ಪರವಾಗಿ ಮಾತನಾಡುವ ಧೈರ್ಯ ತೋರಲಿಲ್ಲ. ಒಳ್ಳೆಯ ಬೆಳವಣಿಗೆಯೇ. ‘ನಾನು ನಗರ ನಕ್ಸಲ್’ ಎಂದು ಎದೆಮೇಲೆ ಬೋರ್ಡ ತೂಗು ಹಾಕಿಕೊಂಡಿದ್ದವರೆಲ್ಲ ಮೌನಕ್ಕೆ ಜಾರಿದ್ದಾರೆ.

    ಛತ್ತೀಸ್​ಗಢದ ದುರದೃಷ್ಟಕರ ಘಟನೆ, ಸೈನಿಕರ ಬಲಿದಾನ ಮರೆಯಲು ಸಾಧ್ಯವೇ ಇಲ್ಲ. ಭಾರತೀಯ ಸೇನೆ ಪ್ರತೀಕಾರ ತೆಗೆದುಕೊಳ್ಳಲು ಸದಾ ಸಮರ್ಥವಾಗಿದೆ. ಆದರೆ ನಾವು ಎಚ್ಚರಿಕೆಯಿಂದ ಗಮನಿಸಬೇಕಾಗಿರುವುದು ಈ ನಗರದೊಳಗಿರುವ ನಕ್ಸಲರನ್ನೇ. ಇವರು ನಮ್ಮ ನಡುವೆಯೇ ಇರುತ್ತಾರೆ, ಯಾರ ಸರ್ಕಾರ ಇದ್ದರೂ ಅಧಿಕಾರಕ್ಕಾಗಿ ಹಪಹಪಿಸುತ್ತಿರುತ್ತಾರೆ. ಕೊನೆಗೆ ಸೂಕ್ತ ಸಮಯ ಬಂದಾಗ ಸಿಡಿಯುತ್ತಾರೆ. ಆದರೆ ಇನ್ನು ಅವರು ಸಿಡಿಯದಂತೆ ಮಾಡುವ ಸಾಮರ್ಥ್ಯ ನಮಗೆ ಬೇಕು ಅಷ್ಟೇ!

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts