ಬೆಂಗಳೂರು: ಸಿಎಎ ವಿರೋಧಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಅವಧಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಯುವತಿಯರಿಬ್ಬರು ತೋರಿದ ದೇಶದ್ರೋಹಿ ನಡವಳಿಕೆ ವ್ಯಾಪಕ ಟೀಕೆ ಮತ್ತು ಚರ್ಚೆಗೆ ಒಳಗಾಗಿದೆ. ಈ ನಡುವೆ, ಯುವತಿಯರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಒಪ್ಪಿಸಿದೆ.
ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಮತ್ತು ಬಹಿರಂಗವಾಗಿ ಅಮೂಲ್ಯ ನೀಡಿದ ಹೇಳಿಕೆ ಆಧರಿಸಿ ಅವರ ಬಳಿ ಆ ಕೆಲಸ ಮಾಡಿಸಿದವರ ಪತ್ತೆ ಮತ್ತು ಒಟ್ಟಾರೆ ಪ್ರಕರಣದ ಆಮೂಲಾಗ್ರ ವಿಚಾರಣೆಗಾಗಿ ಪೊಲೀಸ್ ಇಲಾಖೆ ವಿಶೇಷ ತನಿಖಾ ತಂಡ (ಎಸ್ಐಟಿ)ವನ್ನು ರಚಿಸಿದೆ. ಡಿಸಿಪಿ ರಮೇಶ್ ಬಾನೋಟ್ ಈ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಚಿಕ್ಕಪೇಟೆ ಎಸಿಪಿಗೆ ತನಿಖೆಯ ನೇತೃತ್ವ ವಹಿಸಿದ್ದಾರೆ. ಈ ತಂಡದಲ್ಲಿ ಎಸಿಪಿಗೆ ನಾಲ್ವರು ಇನ್ಸ್ಪೆಕ್ಟರ್ಗಳು ನೆರವಾಗಲಿದ್ದಾರೆ.
ತನಿಖೆಯಲ್ಲಿ ಎಲ್ಲ ಆಯಾಮಗಳಿಗೂ ಒತ್ತು ನೀಡುವಂತೆ ಸೂಚಿಸಲಾಗಿದೆ. ಪ್ರಮುಖವಾಗಿ ಅಮೂಲ್ಯ, ಆರುದ್ರಾಳಂತಹ ಯುವತಿಯರು ಯಾಕೆ ಎಡಪಂಥೀಯ ವಿಚಾರಧಾರೆಯ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಅಲ್ಲದೆ, ದೇಶದ್ರೋಹದ ಚಿಂತನೆ ಮತ್ತು ಹೇಳಿಕೆಗಳನ್ನು ಕೊಡುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಪಡೆಯುವ ಪ್ರಯತ್ನ ಈ ತನಿಖೆ ಮೂಲಕ ಆಗಲಿದೆ. ಪಾಕ್ ಪರ ಘೋಷಣೆ ಕೂಗಿದ, ಪ್ಲಕಾರ್ಡ್ ಹಿಡಿದ ಯುವತಿಯರ ಹಿಂದೆ, ಜತೆಗೆ ಯಾರೆಲ್ಲ ಇದ್ದಾರೆ, ಯಾವೆಲ್ಲ ಸಂಘಟನೆಗಳು ಇವೆ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ.
ಈ ಯುವತಿಯರನ್ನು ಪ್ರಚೋದಿಸುವವರು ಯಾರು? ಅವರಿಗೆ ಇದಕ್ಕೆ ಕುಮ್ಮಕ್ಕು ಎಲ್ಲಿಂದ? ಸಂಘಟನೆಗಳಾಗಿದ್ದರೆ, ವ್ಯಕ್ತಿಗಳಾಗಿದ್ದರೆ ಅವರಿಗೆ ಈ ಎಲ್ಲ ಪ್ರತಿಭಟನೆಗಳನ್ನು ಆಯೋಜಿಸುವುದಕ್ಕೆ ಹಣ ಎಲ್ಲಿಂದ ಬರುತ್ತಿದೆ ಎಂಬಿತ್ಯಾದಿ ಅಂಶಗಳೂ ತನಿಖೆಯಲ್ಲಿ ಒಳಗೊಂಡಿರುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಿನ್ನೆ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ,.. ಇಂದು ಫ್ರೀ ಕಾಶ್ಮೀರ ಪ್ಲಕಾರ್ಡ್ ಹಿಡಿದ ಆರುದ್ರಾ… ಯಾರಿವರೆಲ್ಲ?