ನವದೆಹಲಿ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸದ್ಯದಲ್ಲೇ ನವದೆಹಲಿಯ ಸರ್ಕಾರಿ ಬಂಗಲೆಯ ಆಸರೆ ಕಳೆದುಕೊಳ್ಳಲಿದ್ದಾರೆ. ಇಲ್ಲಿಂದ ಅವರು ಎಲ್ಲಿಗೆ ತೆರಳಬಹುದು ಎಂಬ ಪ್ರಶ್ನೆಗೆ ಲಖನೌ ಎಂಬ ಉತ್ತರ ದೊರೆತಿದೆ.
ಎಸ್ಪಿಜಿ ಭದ್ರತೆಯುಳ್ಳ ಮುಖಂಡರಿಗೆ ಮೀಸಲಾಗಿರುವ ಲೋಧಿ ರಸ್ತೆಯ ಲುಟಯೆನ್ಸ್ ಬಂಗಲೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಆದರೆ, ಈಗ ಎಸ್ಪಿಜಿ ಭದ್ರತೆಯನ್ನು ಹಿಂಪಡೆದು Z+ ಭದ್ರತೆ ಒದಗಿಸುತ್ತಿರುವುದರಿಂದ, ಈ ಬಂಗಲೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಹಾಗಾಗಿ ಆ.1ರೊಳಗೆ ಬಂಗಲೆಯನ್ನು ತೆರವುಗೊಳಿಸಿ ಎಂದು ಕೇಂದ್ರ ಸರ್ಕಾರ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಬುಧವಾರ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರು ಬಂಗಲೆಯನ್ನು ತೆರವುಗೊಳಿಸಲು ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ.
ವಿಧಾನಸಭೆ ಚುನಾವಣೆ ಮೇಲೆ ಕಣ್ಣು: ಪ್ರಿಯಾಂಕಾ ಗಾಂಧಿ ವಾದ್ರಾ ಬಯಸಿದ್ದರೆ ನವದೆಹಲಿಯಲ್ಲೇ ಬೇರೊಂದು ಮನೆ ಹುಡುಕಿಕೊಂಡು ಅಲ್ಲಿಗೆ ಸ್ಥಳಾಂತರಗೊಳ್ಳಬಹುದಿತ್ತು. ಆದರೆ, ಅವರು ಹಾಗೆ ಮಾಡದೆ ಲಖನೌನತ್ತ ಮುಖ ಮಾಡಲು ನಿರ್ಧರಿಸಿದ್ದಾರೆ.
2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ವೇಳೆಗೆ ಕಾಂಗ್ರೆಸ್ಗೆ ಒಂದು ಬಲಿಷ್ಠವಾದ ತಳಹದಿ ನಿರ್ಮಿಸುವ ಉದ್ದೇಶದಿಂದ ಅವರು ಲಖನೌನತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಪೊಲೀಸರ ಡಬಲ್ ಸ್ಟ್ಯಾಂಡರ್ಡ್: ಹಿಂದುಗಳಿಗೊಂದು ನ್ಯಾಯ, ಮುಸ್ಲಿಮರಿಗೊಂದು ನ್ಯಾಯ
ಉತ್ತರ ಪ್ರದೇಶ ಕಾಂಗ್ರೆಸ್ನ ಉಸ್ತುವಾರಿಯನ್ನೂ ಹೊತ್ತಿರುವ ಅವರು, ಅಲ್ಲಿನ ರಾಜಕೀಯ ವಲಯದಲ್ಲಿ ನಿಧಾನವಾಗಿ ಅಂಬೆಗಾಲು ಊರಲು ಆರಂಭಿಸಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ಆಡಳಿತವನ್ನು ಟೀಕಿಸುತ್ತಾ, ಅದು ಕೈಗೊಳ್ಳುವ ನಿರ್ಧಾರಗಳನ್ನು ಪರಾಮರ್ಶೆಗೆ ಒಳಪಡಿಸುತ್ತಾ ಸಾಕಷ್ಟು ಮುಜುಗರ ಉಂಟು ಮಾಡುತ್ತಿದ್ದಾರೆ. ಕೋವಿಡ್-19 ಲಾಕ್ಡೌನ್ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ತೆರಳಲು ಬಸ್ಸಿನ ವ್ಯವಸ್ಥೆ ಮಾಡುವುದರಿಂದ ಹಿಡಿದು ಸೋನಭದ್ರಾ ಹತ್ಯಾಕಾಂಡದವರೆಗೆ ಅವರು ಟೀಕೆಗಳ ಸುರಿಮಳೆಯನ್ನೇ ಗೈದಿದ್ದಾರೆ.
ಇಂದಿರಾ ಅವರ ಮಾಮಿಯ ಮನೆಗೆ ಶಿಫ್ಟ್: ಲಖನೌಗೆ ಸ್ಥಳಾಂತರಗೊಳ್ಳಲು ಪ್ರಿಯಾಂಕಾ ಗಾಂಧಿ ನಿರ್ಧರಿಸಿದ್ದೇ ಆದಲ್ಲಿ ಇಲ್ಲಿ ಅವರಿಗೆ ಸರ್ಕಾರಿ ಬಂಗಲೆ ಏನೂ ಸಿಗುವುದಿಲ್ಲ. ಹಾಗಾಗಿ ಇಲ್ಲಿ ಉಳಿದುಕೊಳ್ಳಲು ಅವರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಅವರು ತಮ್ಮ ಅಜ್ಜಿ ಇಂದಿರಾ ಗಾಂಧಿ ಅವರ ಮಾಮಿ ಶೀಲಾ ಕೌಲ್ ಅವರಿದ್ದ ಗೋಖಲೆ ಮಾರ್ಗ್ನ ಕೌಲ್ ಹೌಸ್ನಲ್ಲಿ ನೆಲೆಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಪಕ್ಷದ ಕೆಲಸದ ಮೇಲೆ ಉತ್ತರ ಪ್ರದೇಶಕ್ಕೆ ಬಂದಾಗಲೆಲ್ಲ ಅವರು ಈ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಹಲವು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಈ ಮನೆಗೆ ಈಗ ಸುಣ್ಣಬಣ್ಣ ಬಳಿದು ಶೃಂಗಾರಗೊಳಿಸಲಾಗುತ್ತಿರುವುದು ಈ ಅನುಮಾನಕ್ಕೆ ಪುಷ್ಠಿ ನೀಡಿದೆ.
ಇಂದು ಡಿಕೆಶಿ ಪದಗ್ರಹಣ | ಮೂವರು ಕಾರ್ಯಾಧ್ಯಕ್ಷರಿಂದಲೂ ಅಧಿಕಾರ ಸ್ವೀಕಾರ