ಬೆಂಗಳೂರು: ‘ನನ್ನ ಪ್ರಕಾರ’ ಎಂಬ ಚಿತ್ರದ ನಂತರ ಪ್ರಿಯಾಮಣಿ ಅಭಿನಯದ ಯಾವೊಂದು ಕನ್ನಡ ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಅಷ್ಟೇ ಅಲ್ಲ, ಆಕೆ ಯಾವೊಂದು ಹೊಸ ಚಿತ್ರವನ್ನು ಒಪ್ಪಿದ ಸುದ್ದಿಯೂ ಇರಲಿಲ್ಲ. ಇದೀಗ ಪ್ರಿಯಾಮಣಿ ಹೊಸದೊಂದು ಚಿತ್ರವನ್ನು ಒಪ್ಪಿದ್ದು, ಸದ್ಯದಲ್ಲೇ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.
ಇದನ್ನೂ ಓದಿ: ರಾಕ್ಲೈನ್ ಸ್ಟುಡಿಯೋದಲ್ಲಿ ಕುಂಬಳಕಾಯಿ ಒಡೆದು ಶೂಟಿಂಗ್ ಮುಗಿಸಿದ ‘ಫ್ಯಾಂಟಸಿ’ ತಂಡ
ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಗೌತಮ್. ಕನ್ನಡದಲ್ಲಿ ‘ಆಪ್ತಮಿತ್ರ’, ‘ಆಪ್ತರಕ್ಷಕ’ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ಕೊಟ್ಟಿರುವ ಜನಪ್ರಿಯ ನಿರ್ದೇಶಕ ಪಿ. ವಾಸು ಅವರ ಸಹೋದರ ಪಿ. ವಿಮಲ್ ಅವರ ಮಗ ಈ ಗೌತಮ್. ಇದೀಗ ಅವರು ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ‘ಕೈಮರ’ ಎಂಬ ಹೆಸರನ್ನು ಇಡಲಾಗಿದ್ದು, ಬುಧವಾರ ಚಿತ್ರದ ಹೆಸರನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗುತ್ತಿದೆ.
ನಟ ಉಪೇಂದ್ರ, ಸಂಗೀತ ನಿರ್ದೇಶಕ ಗುರುಕಿರಣ್ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ, ಚಿತ್ರದ ಹೆಸರನ್ನು ಬಿಡುಗಡೆ ಮಾಡಲಿದ್ದಾರೆ. ಗುರುಕಿರಣ್ ಈ ಕಾರ್ಯಕ್ರಮದ ಮುಖ್ಯ ಅತಿಥಿಯಷ್ಟೇ ಅಲ್ಲ, ಚಿತ್ರಕ್ಕೆ ಸಂಗೀತವನ್ನೂ ಅವರೇ ಸಂಯೋಜಿಸುತ್ತಿದ್ದಾರೆ.
ಪ್ರಿಯಾಮಣಿ ಒಬ್ಬರೇ ಅಲ್ಲ, ಇದೊಂದು ಮಹಿಳಾ ಪ್ರಧಾನ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು ಅವರ ಜತೆಗೆ ಪ್ರಿಯಾಂಕಾ ಉಪೇಂದ್ರ ಮತ್ತು ಛಾಯಾ ಸಿಂಗ್ ಸಹ ನಟಿಸುತ್ತಿದ್ದಾರಂತೆ.
ಇದನ್ನೂ ಓದಿ: ಮಂಗಳವಾರದಂದೇ ‘ಮಂಗಳವಾರ ರಜಾ ದಿನ’ ಚಿತ್ರದ ಹಾಡು
ಇನ್ನು ಈ ಚಿತ್ರವನ್ನು ಎಕ್ಸೆಟ್ರಾ ಎಂಟರ್ಟೈನ್ಮೆಂಟ್ ಸಂಸ್ಥೆಯಡಿ ವಿ. ಮತಿಯಾಲಗಾನ್ ಎಂಬುವವರು ನಿರ್ಮಾಣ ಮಾಡುತ್ತಿದ್ದಾರೆ.