ಬೆಂಗಳೂರು: ಶಿವರಾಜಕುಮಾರ್ ಮತ್ತು ‘ಡಾಲಿ’ ಧನಂಜಯ್ ಅಭಿನಯದಲ್ಲಿ ತಮಿಳಿನ ಖ್ಯಾತ ಛಾಯಾಗ್ರಾಹಕ ವಿಜಯ್ ಮಿಲ್ಟನ್ ಒಂದು ಹೊಸ ಚಿತ್ರವನ್ನು ನಿರ್ದೇಶಿಸುತ್ತಿರುವ ಸುದ್ದಿ ಗೊತ್ತೇ ಇದೆ. ಲಾಕ್ಡೌನ್ ಮುಗಿದ ತಕ್ಷಣವೇ ಈ ಚಿತ್ರದ ಘೋಷಣೆಯಾಗಿತ್ತು.
ಇದನ್ನೂ ಓದಿ: ಟೈಗರ್ ಶ್ರಾಫ್ ‘ಗಣಪತ್’ ಪಾರ್ಟ್ 1 ಫಸ್ಟ್ ಲುಕ್ ಬಹಿರಂಗ
ಇದೀಗ ಈ ಚಿತ್ರಕ್ಕೆ ಪೃಥ್ವಿ ಅಂಬರ್ ಸೇರ್ಪಡೆಯಾಗಿದೆ. ‘ದಿಯಾ’ ನಂತರ ಸಖತ್ ಬ್ಯುಸಿಯಾಗಿರುವ ಪೃಥ್ವಿ, ಈ ಹೆಸರಿಡ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಪೃಥ್ವಿ ಅವರ ಪಾತ್ರವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಚಿತ್ರದಲ್ಲಿ ಅವರಿಗೊಂದು ಒಳ್ಳೆಯ ಪಾತ್ರ ಸಿಕ್ಕಿದೆಯಂತೆ.
ಅಂದಹಾಗೆ, ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಇದೀಗ ಭರದಿಂದ ಸಾಗಿದ್ದು, ಸದ್ಯದಲ್ಲೇ ನವೆಂಬರ್ 19ರಂದು ಚಿತ್ರದ ಮುಹೂರ್ತವಾಗಲಿದೆ ಎಂದು ಹೇಳಲಾಗಿದೆ. ಈಗಾಗಲೇ ‘ಭಜರಂಗಿ 2’ ಚಿತ್ರೀಕರಣ ಮುಗಿಸಿರುವ ಶಿವರಾಜಕುಮಾರ್, ಮೊದಲಿಗೆ ಈ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರಂತೆ. ನಂತರದ ದಿನಗಳಲ್ಲಿ ಧನಂಜಯ್ ಮತ್ತು ಪೃಥ್ವಿ ಅಂಬರ್ ಚಿತ್ರೀಕರಣಕ್ಕೆ ಸೇರ್ಪಡೆಯಾಗಲಿದ್ದಾರೆ.
ಈ ಹೆಸರಿಡದ ಚಿತ್ರವನ್ನು ಕೃಷ್ಣಸಾರ್ಥಕ್ ನಿರ್ಮಿಸುತ್ತಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಈಗಾಗಲೇ ಕನ್ನಡದಲ್ಲಿ ‘ಅಟ್ಟಹಾಸ’, ‘ಪೊಗರು’ ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ವಿಲಯ್ ಮಿಲ್ಟನ್, ಈ ಚಿತ್ರಕ್ಕೂ ಛಾಯಾಗ್ರಹಣ ಮಾಡುತ್ತಿದ್ದಾರಂತೆ. ಈ ಚಿತ್ರದ ಉಳಿದ ಪಾತ್ರವರ್ಗ ಹಾಗೂ ತಂತ್ರಜ್ಱರ ಪಟ್ಟಿ ಸದ್ಯದಲ್ಲೇ ಫೈನಲ್ ಆಗಲಿದೆ.
ಇದನ್ನೂ ಓದಿ: ಈ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಪುಕ್ಕಟ್ಟೆಯಾಗಿ ನೋಡಬಹುದು …
ಪೃಥ್ವಿ ಅಂಬರ್ ಈಗಾಗಲೇ ‘ಲೈಫ್ ಈಸ್ ಬ್ಯೂಟಿಫುಲ್’ ಮತ್ತು ‘ಶುಗರ್ಲೆಸ್’ ಚಿತ್ರಗಳಲ್ಲಿ ನಟಿಸುತ್ತಿದ್ದು, ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ಇನ್ನು ‘ಫಾರ್ ರಿಜಿಸ್ಟ್ರೇಶನ್’ ಎಂಬ ಚಿತ್ರದಲ್ಲೂ ಅವರು ನಟಿಸುತ್ತಿದ್ದು, ಜತೆಗೆ ಶಿವರಾಜಕುಮಾರ್ ಅಭಿನಯದ ಈ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಇದಲ್ಲದೆ, ಇನ್ನೂ ಎರಡು ಹೊಸ ಚಿತ್ರಗಳನ್ನು ಪೃಥ್ವಿ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಚಿರಂಜೀವಿ ಕರೊನಾ ಗೆದ್ದು ಬರಲಿ: ದೇವಸ್ಥಾನ ಸುತ್ತುತ್ತಿರುವ ಅಭಿಮಾನಿ ಬಳಗ