ಬೆಂಗಳೂರು: ಪೆರೋಲ್ ಮೇಲೆ ಹೊರಬಂದು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಜೀವಾವಧಿ ಕೈದಿಯನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ನಿವಾಸಿ ಸುಹೇಲ್ ಬಂಧಿತ. ತನ್ನ ಹೆಸರನ್ನು ಮೊಹಮ್ಮದ್ ಅಯಾಜ್ ಎಂದು ಬದಲಿಸಿಕೊಂಡು ‘ಸಾಗರ ಎಂಟರ್ಪ್ರೈಸಸ್’ ಹೆಸರಿನ ಆಯುರ್ವೇದ ಔಷಧ ಮಾರಾಟದಲ್ಲಿ ತೊಡಗಿಸಿಕೊಂಡು ಜೀವನ ಸಾಗಿಸುತ್ತಿದ್ದ. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಕೈದಿ ಸುಹೇಲ್ ಮತ್ತು ಐವರು ಸಹಚರರು 22 ವರ್ಷಗಳ ಹಿಂದೆ ರಾಬರಿ, ಸುಲಿಗೆಯಲ್ಲಿ ತೊಡಗಿದ್ದರು. ಹೊಸೂರು ರಸ್ತೆಯಲ್ಲಿ ಲಾರಿ ಚಾಲಕನನ್ನು ಕೊಲೆ ಮಾಡಿ ದರೋಡೆ ಮಾಡಿದ್ದರು. ಮಡಿವಾಳ ಠಾಣೆ ಪೊಲೀಸರು ಕೈದಿಗಳಾದ ಸುಹೇಲ್, ಶಂಕರ್, ಸಲೀಂ, ಚಾಂದ್ಪಾಶಾ, ವೇಣುಗೋಪಾಲ್ ಎಂಬವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ತನಿಖೆ ಪೂರ್ಣಗೊಳಿಸಿ ಕೋರ್ಟ್ಗೆ ಆರೋಪಪಟ್ಟಿ ಸಲ್ಲಿಸಿದ್ದರು. 2004ರಲ್ಲಿ ಆರೋಪಿಗಳಾದ ಸುಹೇಲ್, ಶಂಕರ್ ಮತ್ತು ಸಲೀಂಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 2007ರಲ್ಲಿ ಸುಹೇಲ್ 30 ದಿನ ಪೆರೋಲ್ ರಜೆ ಪಡೆದು ಹೊರಗೆ ಬಂದ ಮೇಲೆ ತಲೆಮರೆಸಿಕೊಂಡಿದ್ದ.
ಕುಟುಂಬ ಸದಸ್ಯರನ್ನು ಭೇಟಿ ಆಗದೆ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಿ ಹೆಸರು ಬದಲಾಯಿಸಿಕೊಂಡು ಅನಾಥ ಎಂದು ಹೇಳಿಕೊಂಡು ಮದುವೆ ಆಗಿ, ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ. ಈ ಬಗ್ಗೆ ಜೈಲು ಅಧಿಕಾರಿಗಳು ಮಡಿವಾಳ ಠಾಣೆಗೆ ದೂರು ನೀಡಿದ್ದರು.
ಇತ್ತೀಚೆಗೆ ಸಬ್ ಇನ್ಸ್ಪೆಕ್ಟರ್ ಬಿ.ಟಿ. ಕಿಶೋರ್ ನೇತೃತ್ವದ ತಂಡಕ್ಕೆ ಕೈದಿ ಪತ್ತೆ ಜವಾಬ್ದಾರಿ ವಹಿಸಲಾಗಿತ್ತು. ಹಳೇ ದಾಖಲೆ ದಾಖಲೆ ಪರಿಶೀಲನೆ ವೇಳೆ ಶಂಕರ್ ಸಹ ಪೆರೋಲ್ ಮೇಲೆ ಬಂದು ವಾಪಸ್ ಜೈಲಿಗೆ ಹೋಗದೆ ಅನಾರೋಗ್ಯದಿಂದ ಸಾವಿಗೀಡಾಗಿದ್ದ. ಈ ಬಗ್ಗೆ ಠಾಣೆಗೆ ದೂರು ನೀಡಿದ್ದ ವ್ಯಕ್ತಿಯನ್ನು ವಿಚಾರಣೆ ನಡೆಸಿದಾಗ, ಶಂಕರ್ ದಕ್ಷಿಣಕನ್ನಡ ಜಿಲ್ಲೆಗೆ ಹೋಗಿ ಸಾಗರ್ ಎಂಟರ್ಪ್ರೈಸಸ್ ಅಂಗಡಿಗೆ ಹೋಗಿ ಹಣ ಪಡೆಯುತ್ತಿದ್ದ ಎಂಬ ಸುಳಿವು ನೀಡಿದ್ದ. ಅಂಗಡಿಯ ಜಿಎಸ್ಟಿ ನೋಂದಣಿ ದಾಖಲೆ ಪರಿಶೀಲನೆ ವೇಳೆ ಸುಹೇಲ್, ಫೋಟೋ ಅಪ್ಡೇಟ್ ಆಗಿತ್ತು. ಆ ಪೋಟೋ ಸಂಗ್ರಹಿಸಿ ಸಹ ಕೈದಿಗಳಿಗೆ ಮತ್ತು ಕುಟುಂಬ ಸದಸ್ಯರಿಗೆ ತೋರಿಸಿದಾಗ ಹೋಲಿಕೆ ಆಗುತ್ತಿರುವುದಾಗಿ ಸುಳಿವು ನೀಡಿದರು.
ಇದಾದ ಮೇಲೆ ಬೆಳ್ತಂಗಡಿಗೆ ಹೋಗಿ 2 ದಿನ ಸುಹೇಲ್, ವಾಸ ಇರುವ ಮನೆ ಸುತ್ತಮುತ್ತ ಗುಪ್ತವಾಗಿ ಮಾಹಿತಿ ಕಲೆ ಹಾಕಿದಾಗ ಬೆಂಗಳೂರಿನಿಂದ ಸುಹೇಲ್ ಬಂದು ಅನಾಥ ಎಂದು ಹೇಳಿಕೊಂಡು ಜೀವನ ಸಾಗಿಸುತ್ತಿದ್ದಾನೆ ಎಂದು ಸ್ಥಳೀಯರು ಖಚಿತಪಡಿಸಿದರು. ಅಂತಿಮವಾಗಿ ರಾತ್ರಿ ವೇಳೆ ಸುಹೇಲ್ ಮನೆ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಅಭಿಮಾನಿಗಳ ಅತಿರೇಕ: ಎಲ್ಲ ಫ್ಯಾನ್ಸ್ಗೆ ನಟಿ ರಮ್ಯಾ ಕಿವಿಮಾತು, ನಟರಿಗೆ ಸಲಹೆ; ಕೆಲ ಖಾತೆಗಳ ಬ್ಲಾಕ್ ಮಾಡಲು ಮನವಿ