ಮಂಗಳೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿ ಬಿಜೆಪಿ ಪಕ್ಷದ ಪರ ಪ್ರಚಾರಾರ್ಥ ಪ್ರಧಾನಿ ನರೇಂದ್ರ ಮೋದಿ ಎ.14ರಂದು ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಭದ್ರತೆಯ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೋಡ್ ಶೋ ನಡೆಸಲಿರುವ ಪ್ರದೇಶದಲ್ಲಿರುವ ಜೇನುಗೂಡುಗಳನ್ನು ತೆರವುಗೊಳಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಮೂಲಕ ನಿರ್ದೇಶನ ನೀಡಿದ್ದಾರೆ.
ಗುರುವಾರ ಹೊರಡಿಸಲಾದ ಈ ಆದೇಶದ ವಿರುದ್ಧ ಪರಿಸರವಾದಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯೂ ನಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ನಾರಾಯಣ ಗುರು ವೃತ್ತ (ಲೇಡಿಹಿಲ್)ದಿಂದ ನವಭಾರತ ವೃತ್ತದವರೆಗೆ ರೋಡ್ ಶೋ ನಡೆಸಲಿದ್ದಾರೆ. ಹಾಗಾಗಿ ರೋಡ್ ಶೋ ನಡೆಯುವ ಸ್ಥಳ, ಪಾರ್ಕಿಂಗ್ ಸ್ಥಳ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೋಡ್ಶೋ ನಡೆಯುವ ಸ್ಥಳದ ಆಸುಪಾಸಿನ ಎಲ್ಲಾ ಕಟ್ಟಡಗಳು, ಸೇಫ್ಹೌಸ್ ಮತ್ತು ಸೇಫ್ ಆಸ್ಪತ್ರೆಗಳಾದ ಎಜೆ ಆಸ್ಪತ್ರೆ, ವೆನ್ಲಾಕ್ ಆಸ್ಪತ್ರೆ, ಕೆಎಂಸಿ ಆಸ್ಪತ್ರೆ, ಮಂಗಳೂರು ನಗರ ಪಾಲಿಕೆಯ ಆಯುಕ್ತರ ಕಚೇರಿ, ಎಸ್ಡಿಎಂ ಕಾನೂನು ಕಾಲೇಜು, ಸರ್ಕ್ಯೂಟ್ ಹೌಸ್ ಮತ್ತಿತರ ಕಡೆಗಳಲ್ಲಿನ ಜೇನುಗೂಡುಗಳನ್ನು ತೆರವುಗೊಳಿಸಲು ಸೂಚನೆ ನೀಡಿದ್ದಾರೆ.
*ಪರಿಸರ ಪ್ರೇಮಿಗಳಿಂದ ಆಕ್ರೋಶ
ಜೇನುಗಳ ಸಮೂಹ ನಾಶ ಮಾಡಲು ನಮಗೆ ಯಾವ ಹಕ್ಕೂ ಇಲ್ಲ. ವನ್ಯಜೀವಿ ಕಾಯ್ದೆಯ ಪ್ರಕಾರ ಜೇನು ಹುಳಗಳಿಗೆ ರಕ್ಷಣೆ ನೀಡಬೇಕು. ಆದರೆ ಇವುಗಳ ಬಗ್ಗೆ ಅರಿವು ಇಲ್ಲದ ಅಧಿಕಾರಿಗಳು ಜೇನು ಗೂಡುಗಳನ್ನು ತೆರವುಗೊಳಿಸಲು ಮುಂದಾಗಿರುವುದು ಖಂಡನೀಯ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹವಾಮಾನ ಬದಲಾವಣೆಯಿಂದಾಗಿ ಈಗಾಗಲೇ ಜೇನು ಸಂತತಿ ವಿನಾಶದ ಹಾದಿಯಲ್ಲಿದೆ. ಜೇನು ಇಲ್ಲದಿದ್ದರೆ ಪರಾಗ ಸ್ಪರ್ಶವಾಗದು. ಮುಂದೆ ಆಹಾರ ಬೆಳೆಯಲು ಕಷ್ಟವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಬರುವುದು, ಅವರನ್ನು ಕಣ್ತುಂಬುವುದು ನಮಗೂ ಇಷ್ಠ. ಆದರೆ ಜೇನು ಸಂತತಿಗೆ ಹಾನಿ ಮಾಡುವುದು ಸರಿಯಲ್ಲ.
ಮುಗ್ಧ ಜೀವಿಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಹಕ್ಕು.
ದಿನೇಶ್ ಹೊಳ್ಳ, ಪರಿಸರ ಹೋರಾಟಗಾರರು