ನವದೆಹಲಿ: ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಇತ್ತೀಚೆಗೆ ಸ್ವಾಂತಂತ್ರ್ಯ ಹೋರಾಟಗಾರರ ಬಗ್ಗೆ ಆಡಿದ ಮಾತುಗಳು ವಿಪರೀತ ವಿವಾದ ಸೃಷ್ಟಿಸಿದೆ.
ಮಹಾತ್ಮ ಗಾಂಧೀಜಿಯವರನ್ನು ಅನಂತ್ಕುಮಾರ್ ಹೆಗಡೆ ಅವಹೇಳನ ಮಾಡಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಸೇರಿ ಹಲವರು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ ಅವರಿಗೆ ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್ ನೀಡಿತ್ತು.
ಅದಕ್ಕೆ ಉತ್ತರಿಸಿದ್ದ ಅನಂತ್ಕುಮಾರ್ ಹೆಗಡೆ, ನಾನು ಗಾಂಧಿಯ ಹೆಸರನ್ನು ಉಲ್ಲೇಖಿಸಿಲ್ಲ, ಅವರಿಗೆ ಅವಮಾನ ಆಗುವ ಮಾತುಗಳನ್ನು ಭಾಷಣದಲ್ಲಿ ಎಲ್ಲಿಯೂ ಹೇಳಿಲ್ಲ ಎಂದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಉತ್ತರಿಸಿದ್ದರು.
ಆದರೆ ಪ್ರತಿಪಕ್ಷಗಳು ಮಾತ್ರ ಅನಂತ್ ಕುಮಾರ್ ಹೆಗಡೆ ಮಹಾತ್ಮಾ ಗಾಂಧಿಯನ್ನು ಅವಮಾನಿಸಿದ್ದಾರೆ ಪ್ರತಿಭಟಿಸುತ್ತಲೇ ಇದೆ. ಹೆಗಡೆ ಬೇಷರತ್ ಕ್ಷಮೆ ಕೋರಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಹಾಗೇ ಇಂದೂ ಕೂಡ ಸಂಸತ್ತಿನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಿದಾಗ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
ಮೊದಲಿಗೆ ಪ್ರತಿಪಕ್ಷದವರ ಬಳಿ, ನಿಮ್ಮ ಆರೋಪಗಳು ಮುಗಿದವಾ? ಇನ್ನೇನಾದರೂ ಇದೆಯಾ ಎಂದು ಮೋದಿಯವರು ಪ್ರಶ್ನಿಸಿದರು. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮೋದಿಯವರಿಗೆ ಉತ್ತರ ನೀಡುತ್ತ, ಇದಿನ್ನೂ ಟ್ರೇಲರ್ ಅಷ್ಟೇ..ಉಳಿದಿದ್ದು ಇನ್ನೂ ಇದೆ ಎಂದು ಹೇಳಿದರು.
ಮೋದಿ ಮಾತನಾಡಲು ಎದ್ದು ನಿಲ್ಲುತ್ತಲೇ ವಿಪಕ್ಷಗಳ ಕಡೆಯಿಂದ ಮಹಾತ್ಮ ಗಾಂಧಿ ಅಮರ್ ರಹೇ ಎನ್ನುವ ಘೋಷಣೆಗಳು ಹೆಚ್ಚಾದವು.
ರಂಜನ್ ಚೌಧರಿ ಅವರ ಉತ್ತರಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಮೋದಿಯವರು, ಮಹಾತ್ಮ ಗಾಂಧಿ ನಿಮಗೆಲ್ಲ ಟ್ರೇಲರ್ ಆಗಿರಬಹುದು. ಆದರೆ ನಮಗೆ ಅವರೇ ಜೀವನ ಎಂದು ಹೇಳಿದರು.
ಅದಾದ ಬಳಿಕ ಮೋದಿಯವರು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಳೆದ ಲೋಕಸಭಾ ಚುನಾವಣೆಯ ಸೋಲನ್ನು ನೆನಪಿಸಿದರು.(ಏಜೆನ್ಸೀಸ್)