ನವದೆಹಲಿ: ರಾಷ್ಟ್ರಪತಿ ಅಭ್ಯರ್ಥಿ ಯಾರಾಗಬಹುದು ಎಂಬ ಬಗ್ಗೆ ಕಳೆದ ಕೆಲವು ದಿನಗಳಿಂದ ದೇಶದ ಜನರ ಕುತೂಹಲ ಕೆರಳಿಸಿದ್ದ ಸಂಗತಿಗೆ ಇಂದು ಒಂದುಮಟ್ಟಿಗೆ ತೆರೆ ಬಿದ್ದಿದೆ. ಏಕೆಂದರೆ ಯುಪಿಎ ಹಾಗೂ ಎನ್ಡಿಎ ಇಬ್ಬರ ಕಡೆಯಿಂದಲೂ ಇಂದು ರಾಷ್ಟ್ರಪತಿ ಅಭ್ಯರ್ಥಿಯ ಘೋಷಣೆ ಆಗಿದೆ.
ಬಿಜೆಪಿ ನೇತೃತ್ವದ ಎನ್ಡಿಎ ಕಡೆಯಿಂದ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಹಾಗೂ ಯುಪಿಎ ಕಡೆಯಿಂದ ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿದ್ದಾರೆ. ಎನ್ಡಿಎ ಕಡೆಯಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಲಾಗಿದೆ ಎಂಬುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅಧಿಕೃತ ಘೋಷಣೆ ಮಾಡಿದ್ದಾರೆ. ಆದಿವಾಸಿ ಮಹಿಳೆಯೊಬ್ಬರಿಗೆ ಇದೇ ಮೊದಲ ಸಲ ರಾಷ್ಟ್ರಪತಿ ಚುನಾವಣೆಗೆ ಆದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಪ್ರತಿಪಕ್ಷಗಳು ಜಂಟಿಯಾಗಿ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದ್ದರು. ಈ ನಿಟ್ಟಿನಲ್ಲಿ ಮೊದಲಿಗೆ ಸೂಚಿಸಲಾಗಿದ್ದ ಶರದ್ ಪವಾರ್, ತಾವು ಸ್ಪರ್ಧಿಸುವುದಿಲ್ಲ ಎಂದು ನಿರಾಕರಿಸಿದ್ದರು. ಆಮೇಲೆ ಗೋಪಾಲಕೃಷ್ಣ ಗಾಂಧಿ ಹಾಗೂ ಫಾರೂಕ್ ಅಬ್ದುಲ್ಲಾ ಅವರನ್ನು ಸಂಭಾವ್ಯ ಅಭ್ಯರ್ಥಿಗಳಾಗಿ ಮಮತಾ ಬ್ಯಾನರ್ಜಿ ಉಲ್ಲೇಖಿಸಿದ್ದರು. ಬಳಿಕ ಅವರೂ ಸ್ಪರ್ಧೆ ಮಾಡಲು ಹಿಂಜರಿದಿದ್ದರು.
ಇದೀಗ ಅಂತಿಮವಾಗಿ ಕೇಂದ್ರದ ಮಾಜಿ ವಿತ್ತ ಸಚಿವ, ತೃಣಮೂಲ ಕಾಂಗ್ರೆಸ್ನ ಉಪಾಧ್ಯಕ್ಷ ಯಶವಂತ್ ಸಿನ್ಹಾ ಅವರ ಹೆಸರನ್ನು ಯುಪಿಎ ಕಡೆಯಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಕಾಂಗ್ರೆಸ್, ಎನ್ಸಿಪಿ, ಟಿಎಂಸಿ, ಸಿಪಿಐ-ಎಂ, ಸಮಾಜವಾದಿ ಪಕ್ಷ, ಎಐಎಂಐಎಂ, ಆರ್ಜೆಡಿ ಮುಂತಾದ 13 ಪ್ರತಿಪಕ್ಷಗಳು ಸಿನ್ಹಾ ಹೆಸರನ್ನು ಅನುಮೋದಿಸಿವೆ.
ದೀರ್ಘ ಕಾಲ ಗೈರಾಗಿದ್ದ ತಂದೆ ಕೆಲಸದಿಂದ ವಜಾ, ‘ಅಪ್ಪನಿಗೆ ಕೆಲ್ಸ ಕೊಡಿ’ ಎಂಬ ಪುತ್ರಿಯ ಕೋರಿಕೆಗೆ ಮರುಗಿ ಉದ್ಯೋಗ ಕೊಟ್ಟ ಅಧಿಕಾರಿ