ಗುಂಡ್ಲುಪೇಟೆ: ತಾಲೂಕಿನ ಭೀಮನಬೀಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ತಾಲೂಕು ಪಂಚಾಯಿತಿ ಅಧ್ಯಕ್ಷ ಎಸ್.ಎಸ್.ಮಧುಶಂಕರ್ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ದಿಢೀರ್ ಭೇಟಿ ನೀಡಿ ಮಕ್ಕಳ ಕಲಿಕೆ ಹಾಗೂ ಹಾಜರಾತಿ ಬಗ್ಗೆ ಮಾಹಿತಿ ಪಡೆದರು.
ಹಾಜರಾತಿ ಬಗ್ಗೆ ವಿಚಾರಿಸಿದಾಗ 31 ಮಕ್ಕಳು ನಿರಂತರವಾಗಿ ಶಾಲೆಗೆ ಗೈರಾಗುತ್ತಿರುವುದು ಕಂಡುಬಂತು. ಈ ಬಗ್ಗೆ ವಿಚಾರಣೆ ನಡೆಸಿದಾಗ ಗ್ರಾಮದಲ್ಲಿ ಕೈ ತುಂಬಾ ಕೂಲಿ ಸಿಗದ ಹಿನ್ನೆಲೆಯಲ್ಲಿ ಬಹುತೇಕ ಕಾರ್ಮಿಕರು ಕೇರಳಕ್ಕೆ ಹೋಗುತ್ತಿದ್ದಾರೆ. ಈ ವೇಳೆ ಮಕ್ಕಳನ್ನು ನೋಡಿಕೊಳ್ಳುವವರು ಇಲ್ಲದಿರುವುದರಿಂದ ತಮ್ಮ ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ನಂತರ ತಾಪಂ ಅಧ್ಯಕ್ಷ ಮಧುಶಂಕರ, ಮಕ್ಕಳ ಮನೆಗಳಿಗೆ ತೆರಳಿ ಪಾಲಕರನ್ನು ಮನವೊಲಿಸಲು ಮುಂದಾದರು. ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಲಾಗುತ್ತಿದೆ. ಜಾಬ್ಕಾರ್ಡ್ ಮಾಡಿಸಿಕೊಂಡರೆ ಕೆಲಸ ನೀಡುವುದಾಗಿ ಭರವಸೆ ನೀಡಿದರು.
ನಾವು ಈಗಾಗಲೇ ಜಾಬ್ಕಾರ್ಡ್ ಹೊಂದಿದ್ದು, ನರೇಗಾದಲ್ಲಿ ಕೆಲಸ ಮಾಡಿದರೆ 10-15 ದಿನಗಳಾದರೂ ಹಣ ಸಿಗುವುದಿಲ್ಲ. ಅಲ್ಲದೆ, ನಮ್ಮ ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿಯೂ ಇಲ್ಲ. ಕೇರಳದಲ್ಲಿ ಹೆಚ್ಚಿನ ಕೂಲಿ ದೊರಕುತ್ತಿದೆ. ಆದ್ದರಿಂದ ಮೂರು ತಿಂಗಳು ಅಲ್ಲಿಗೆ ಹೋಗಬೇಕಾಗುವುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಆಗುತ್ತಿಲ್ಲ ಎಂದು ಪಾಲಕರು ಆಳಲು ತೊಂಡಿಕೊಂಡರು.
ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಹತ್ತಿರದ ವಸತಿ ನಿಯಲಗಳಿಗೆ ದಾಖಲಿಸಲು ವ್ಯವಸ್ಥೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದು ಬೇಡ ಎಂದು ಮಧುಶಂಕರ ಮನವೊಲಿಸಿದರು.
ಬಿಆರ್ಸಿ ನಂದೀಶ್, ಗ್ರಾಮ ಪಂಚಾಯಿತಿ ಸದಸ್ಯ ವೀರನಪುರ ಗುರು ಮತ್ತಿತರರು ಹಾಜರಿದ್ದರು.