ವಿಜಯಪುರ: ಅಲ್ಪಸಂಖ್ಯಾತರಿಗೆ ಮನ್ನಣೆ ಕೊಟ್ಟು ಜೆಡಿಎಸ್ ಟಿಕೇಟ್ ನೀಡಿದೆ. ಕಾಂಗ್ರೆಸ್ ಆ ಕೆಲಸ ಮಾಡಿಲ್ಲ. ಅಲ್ಪಸಂಖ್ಯಾತರ ಬಗ್ಗೆ ಅವರಿಗೆ ಕಾಳಜಿ ಇಲ್ಲ. ರಾಜ್ಯದಲ್ಲಿ ಇಂದು ಇರೋದು ನಕಲಿ ಕಾಂಗ್ರೆಸ್ ಎಂದು ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ಉಪಚುನಾವಣೆ ಎದುರಿಸುತ್ತಿರುವ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೀನಾಯಮಾನವಾಗಿದೆ ಎಂದರು. “ದೇಶದಲ್ಲಿ ಈಗ ಗಾಂಧೀಜಿ ಕಾಂಗ್ರೆಸ್ ಇಲ್ಲ, ನೆಹರೂ ಕಾಂಗ್ರೆಸ್ ಇಲ್ಲ. ಇದೀಗ ಇರೋದು ಡೂಪ್ಲಿಕೇಟ್ ಕಾಂಗ್ರೆಸ್. 280 ಸೀಟ್ ಇದ್ದ ಕಾಂಗ್ರೆಸ್ ಈಗ 40 ಸೀಟಿನ ಮಟ್ಟಕ್ಕೆ ಬಂದಿದೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಕಾಂಗ್ರೆಸ್ನ ಎಷ್ಟೋ ಅಭ್ಯರ್ಥಿಗಳಿಗೆ ಠೇವಣಿ ವಾಪಸ್ ಸಿಕ್ಕಿಲ್ಲ” ಎಂದು ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಿದರು.
ಇದನ್ನೂ ಓದಿ: ಆರ್ಡರ್ ಮಾಡಿದ್ದು ಐ-ಫೋನ್, ಬಂದಿದ್ದು ಪಾತ್ರೆ ಸೋಪು: ಇವರ ಫೋನ್ ಇನ್ನಾರದೋ ಕೈಯಲ್ಲಿ!
ಕೋಮುವಾದಿ ಬಿಜೆಪಿ ಸರ್ಕಾರ ಬರುವುದಕ್ಕೆ ಕಾಂಗ್ರೆಸ್ನವರೇ ಕಾರಣ. ಬಿಜೆಪಿ ಜೊತೆ ಸೇರಿಕೊಂಡು ಪ್ರಾದೇಶಿಕ ಪಕ್ಷವಾದ ಜೆಡಿಎಸ್ನ ಕೆಡವಲು ನೋಡುತ್ತಿದ್ದಾರೆ ಎಂದ ರೇವಣ್ಣ, “ಆರ್ಎಸ್ಎಸ್ ನನಗೆ ಗೊತ್ತಿಲ್ಲ. ಬೆಳಗ್ಗೆ ಎದ್ದ ಕೂಡಲೇ ರಾಗಿ ಮುದ್ದೆ ತಿನ್ನೋದು ಅಷ್ಟೇ ಗೊತ್ತು. ಜನರ ಸೇವೆ ಮಾಡೋದು ಅಷ್ಟೆ ನನಗೆ ಗೊತ್ತು” ಎಂದರು.
ಪೊಲೀಸ್ ಠಾಣೆ ಕೇಸರಿಮಯ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ರೇವಣ್ಣ, “ಕಾಂಗ್ರೆಸೇ ಕೇಸರಿಮಯ. ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಲು ಕಷ್ಟಪಟ್ಟವರು ಯಾರು ಹೇಳಿ…” ಎಂದು ಕೈ ನಾಯಕರ ವಿರುದ್ಧ ಕಿಡಿಕಾರಿದರು.
VIDEO| ಸ್ಕೂಟರಲ್ಲಿ ಹೋಗುತ್ತಿದ್ದ ಹುಡುಗಿಯನ್ನು ನಿಲ್ಲಿಸಿ ಬುರ್ಖಾ ತೆಗೆಸಿದರು! ವೈರಲ್ ಆಯ್ತು ವಿಡಿಯೋ