ಚಾಮರಾಜನಗರ: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿ ಸದಸ್ಯ ಪ್ರವೀಣ್ ನೆಟ್ಟಾರೆ ಕೊಲೆಯಿಂದ ತೀವ್ರ ಬೇಸರಕ್ಕೀಡಾಗಿರುವ ಗುಂಡ್ಲುಪೇಟೆಯ ಕೆಲವು ಕಾರ್ಯಕರ್ತರು ಪಕ್ಷದ ಜವಾಬ್ದಾರಿಯಿಂದ ವಿಮುಕ್ತರಾಗಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಂಡ್ಲುಪೇಟೆ ಮಂಡಲ ಕಾರ್ಯದರ್ಶಿ ಶಾಂತಪ್ಪ ದೊಡ್ಡತುಪ್ಪೂರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ತನ್ನ ೇಸ್ಬುಕ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ‘ನಮಗೆ ರಕ್ಷಣೆ ಇಲ್ಲದ ವ್ಯವಸ್ಥೆಯಲ್ಲಿ ಮುಂದುವರೆಯಲು ಸಾಧ್ಯವಿಲ್ಲ. ನಾನು ಕೂಡ ಪಕ್ಷದ ಜವಾಬ್ದಾರಿಯಿಂದ ವಿಮುಕ್ತನಾಗಿದ್ದೇನೆ’ ಎಂದು ಬರೆದಿದ್ದಾರೆ. ಇದೇ ರೀತಿ ನಮೋ ಸುರೇಶ್ ಕಲೀಗೌಡನಹಳ್ಳಿ ಕೂಡ ಬರೆದುಕೊಂಡಿದ್ದಾರೆ. ಯುವ ಮೋರ್ಚಾ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ವಿಶು ಪವರ್ ಘೋಷಿಸಿದ್ದಾರೆ.
ಮಹದೇವಸ್ವಾಮಿ ಎಂಬುವವರು ಗುಂಡ್ಲುಪೇಟೆ ತಾಲೂಕು ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯತ್ವಕ್ಕೆ ಲಕ್ಕೂರು ನಾಗೇಂದ್ರ ರಾಜೀನಾಮೆ ನೀಡಲಿದ್ದಾರೆ ಎಂದು ಫೇಸ್ಬುಕ್ನಲ್ಲಿ ಹಾಕಿದ್ದು, ಬಿಜೆಪಿ ಹಿಂದು ಕಾರ್ಯಕರ್ತರ ಕೊಲೆ ಪ್ರಕರಣದಲ್ಲಿ ರಾಜ್ಯದಾದ್ಯಂತ ಎಲ್ಲ ನಿಷ್ಠಾವಂತ ಯುವ ಮೋರ್ಚಾದವರು ರಾಜೀನಾಮೆ ನೀಡಿ ಹೊರಬರುತ್ತಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ನಿಷ್ಠಾವಂತ ಯುವ ಮೋರ್ಚಾದವರು ರಾಜೀನಾಮೆ ನೀಡಿ ಹೊರಬನ್ನಿ. ಇವರಿಗೆ ಸರಿಯಾಗಿ ಪಾಠ ಕಲಿಸೋಣ. ನಿನ್ನೆ ಹರ್ಷ, ಇಂದು ಪ್ರವೀಣ್, ನಾಳೆ ನೀವು ಇಲ್ಲ ನಾವೂ..? ಎಂದು ಒಕ್ಕಣಿ ಬರೆದಿದ್ದಾರೆ. ಸಾಮೂಹಿಕ ರಾಜೀನಾಮೆ ನೀಡುವುದನ್ನು ಜಾಲತಾಣಗಳಲ್ಲಿ ಅಭಿಯಾನವಾಗಿ ಮಾರ್ಪಡುತ್ತಿದ್ದು, ಪ್ರವೀಣ್ ನೆಟ್ಟಾರೆ ಹತ್ಯೆ ಖಂಡಿಸಿ ಪಕ್ಷದ ಜವಾಬ್ದಾರಿಗೆ ರಾಜೀನಾಮೆ ನೀಡುತ್ತಿರುವವರ ಪತ್ರಗಳನ್ನು ಶೇರ್ ಮಾಡಲಾಗುತ್ತಿದೆ.