- ಚಿತ್ರ : ಪ್ರಾರಂಭ
- ನಿರ್ದೇಶನ: ಮನು ಕಲ್ಯಾಡಿ
- ನಿರ್ಮಾಣ: ಜಗದೀಶ್ ಕಲ್ಯಾಡಿ
- ತಾರಾಗಣ: ಮನೋರಂಜನ್, ಕೀರ್ತಿ ಕಲ್ಕೇರಿ, ಹನುಮಂತೇಗೌಡ ಮುಂತಾದವರು
| ಚೇತನ್ ನಾಡಿಗೇರ್ ಬೆಂಗಳೂರು
‘ನಿನಗೆ ಯಾವುದು ಬೇಕೋ ನೀನೇ ಆಯ್ಕೆ ಮಾಡ್ಕೋ …’
ಎಂದು ನೊಂದಿರುವ ಹುಡುಗನಿಗೆ ಯೋಗಾ ಮ್ಯಾಟ್ ಮತ್ತು ವಿಸ್ಕಿ ಬಾಟಲ್ ಎರಡನ್ನೂ ಕೊಡುತ್ತಾನೆ ಹುಡುಗಿಯ ಅಪ್ಪ. ಹುಡುಗನಿಗೆ ಮೊದಲೇ ಲವ್ ಫೇಲ್ಯೂರ್ ಆಗಿರುತ್ತದೆ. ಇಷ್ಟಪಟ್ಟ ಹುಡುಗಿ ಇನ್ನೊಬ್ಬನನ್ನು ಮದುವೆಯಾಗಿರುತ್ತಾಳೆ. ಅವಳನ್ನು ಮರೆಯೋಕೆ ಅವನು ವಿಸ್ಕಿ ಬಾಟಲ್ ಆಯ್ಕೆ ಮಾಡಿಕೊಳ್ಳುತ್ತಾನೆ. ಮುಚ್ಚಳ ತೆಗೆದು ಗಟಗಟ ಕುಡಿಯುತ್ತಾನೆ. ಇದು ಅವನ ಅಂತ್ಯವೋ, ಆರಂಭವೋ?
‘ಲವ್ ಫೇಲ್ಯೂರ್ ಆದರೆ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕೇ ಹೊರತು, ಕೆಟ್ಟದನ್ನಲ್ಲ…’ ಎಂಬ ಸಂಭಾಷಣೆಯೊಂದು ‘ಪ್ರಾರಂಭ’ ಚಿತ್ರದಲ್ಲಿದೆ. ಇದು ಬರೀ ಸಂಭಾಷಣೆಯಷ್ಟೇ ಅಲ್ಲ, ಚಿತ್ರದ ಆಶಯವೂ ಹೌದು. ಲವ್ ಫೇಲ್ಯೂರ್ ಆದ ಬಹಳಷ್ಟು ಹುಡುಗ-ಹುಡುಗಿಯರು ಆತ್ಮಹತ್ಯೆ ಮಾಡಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಆತ್ಮಹತ್ಯೆಯೊಂದೇ ಪರಿಹಾರವಲ್ಲ, ಹಳೆಯದನ್ನು ನೆನಪಿಸಿಕೊಂಡು ಕೊರಗುತ್ತಾ ಕೂರುವುದೇ ಜೀವನವಲ್ಲ, ಅದನ್ನೆಲ್ಲ ಮೀರಿ ಬದುಕಬೇಕು ಎಂಬ ಆಶಯ ಈ ಚಿತ್ರದ್ದು. ಆ ಆಶಯವನ್ನು ಮೂಲವಾಗಿಟ್ಟುಕೊಂಡು ಚಿತ್ರ ಮಾಡಿದ್ದಾರೆ ನಿರ್ದೇಶಕ ಮನು ಕಲ್ಯಾಡಿ. ನಿರ್ದೇಶಕರ ಉದ್ದೇಶವೇನೋ ಚೆನ್ನಾಗಿದೆ. ಆದರೆ, ಅದನ್ನು ಹೇಳುವ ರೀತಿಯಲ್ಲಿ ಇನ್ನಷ್ಟು ಚುರುಕುತನ ತೋರಿಸಿದ್ದರೆ ಚೆನ್ನಾಗಿರುತ್ತಿತ್ತು.
ಇಲ್ಲಿ ಕಥೆ ಇಷ್ಟೇ. ಹುಡುಗ-ಹುಡುಗಿ ಅಚಾನಕ್ ಆಗಿ ಭೇಟಿಯಾಗುತ್ತಾರೆ. ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆಯುತ್ತದೆ. ನಾಯಕಿಯ ಅಪ್ಪನ ಅಂತಸ್ತಿನ ಸವಾಲಿನಿಂದ ಇಬ್ಬರೂ ದೂರಾಗುತ್ತಾರೆ. ಇಬ್ಬರೂ ತಮ್ಮದೇ ರೀತಿಯಲ್ಲಿ ನರಳುತ್ತಾರೆ. ಆ ನರಳಾಟದಿಂದ ಹೇಗೆ ಹೊರಬರುತ್ತಾರೆ ಎಂಬುದ ಕಥೆ. ಈ ತರಹದ ಕಥೆಗಳು ಕನ್ನಡಿಗರಿಗೆ ವಿಶೇಷವಲ್ಲ. ಹಾಗಾಗಿ ಹೊಸತೆನಿಸುವುದಿಲ್ಲ. ಪ್ರಜ್ವಲ್ ಪೈ ಅವರ ಹಾಡುಗಳು ಇದ್ದುದರಲ್ಲೇ ಚಿತ್ರದ ಅಂದ ಹೆಚ್ಚಿಸುತ್ತವೆ. ಮಿಕ್ಕಂತೆ ಚಿತ್ರದಲ್ಲಿ ಹೆಕ್ಕಿ ಹೇಳುವ ವಿಶೇಷ ಅಂಶಗಳೇನಿಲ್ಲ. ಮನೋರಂಜನ್ ಕೆಲವು ದೃಶ್ಯಗಳಲ್ಲಿ ತಂದೆ ರವಿಚಂದ್ರನ್ ಅವರನ್ನು ನೆನಪಿಸುತ್ತಾರೆ. ಕೀರ್ತಿ ಕಲ್ಕೇರಿಗೆ ಹೆಚ್ಚು ಕೆಲಸವಿಲ್ಲ. ಹನುಮಂತೇಗೌಡ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
ಶಾಪಿಂಗ್ ಕಾಂಪ್ಲೆಕ್ಸ್ನಿಂದ ಕೆಳಕ್ಕೆ ಬಿದ್ದ ಪ್ರೇಮಿಗಳು; ಯುವತಿ ಸಾವು, ಯುವಕ ಬಚಾವ್!