More

    ಅಮೆರಿಕದಲ್ಲಿ ಉದ್ಯೋಗ, ಕೋಟಿ ರೂ. ಸಂಬಳ: ಲಕ್ಷುರಿ ಲೈಫ್ ಬಿಟ್ಟು ಸನ್ಯಾಸತ್ವ ಬಯಸಿದ ಭಾರತದ ಯುವ ವಿಜ್ಞಾನಿ

    ಭೋಪಾಲ್​: ಅಮೆರಿಕದಲ್ಲಿ ಉದ್ಯೋಗ, ವರ್ಷಕ್ಕೆ ಒಂದು ಕೋಟಿಗೂ ಅಧಿಕ ಸಂಬಳ, ಐಷಾರಾಮಿ ಜೀವನ ಹಾಗೂ ಬಿಂದಾಸ್​ ಬದುಕು… ಜೀವನದಲ್ಲಿ ಇದಕ್ಕಿಂತ ಇನ್ನೇನು ಬೇಕು? ಜೀವನವನ್ನು ನಮಗನಿಸಿದ ಹಾಗೇ ಎಂಜಾಯ್​ ಮಾಡಲು ಇಷ್ಟಿದ್ದರೆ ಸಾಕಲ್ಲವೆ? ಆದರೆ, ಇಂತಹ ಅವಕಾಶ ಎಲ್ಲರಿಗೂ ಬರುವುದಿಲ್ಲ. ಹಾಗೆಯೇ ಇಂತಹ ಜೀವನ ಸಿಕ್ಕರೆ ಯಾರೊಬ್ಬರು ಕೂಡ ಬಿಟ್ಟುಕೊಡುವುದಿಲ್ಲ. ಆದರೆ, ಜೀವನದಲ್ಲಿ ಇಷ್ಟೆಲ್ಲ ಇದ್ದು, ಎಲ್ಲವನ್ನು ತೊರೆಯುತ್ತಾರೆ ಅಂದರೆ ನೀವು ನಂಬುತ್ತೀರಾ? ಈ ಸುದ್ದಿಯನ್ನು ಓದಿದ ಮೇಲೆ ನೀವು ನಂಬಲೇಬೇಕು.

    ಹೌದು, ಮಧ್ಯಪ್ರದೇಶದ ಮೂಲದ 28 ವರ್ಷದ ಯುವಕ ಎಲ್ಲವನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸುವ ಮೂಲಕ ಎಲ್ಲರನ್ನು ಚಕಿತಗೊಳಿಸಿದ್ದಾನೆ. ಈ ಕಾಲದಲ್ಲೂ ಇಂತಹ ಜನರು ಇದ್ದಾರಾ? ಇದು ಕೇಳುವುದಕ್ಕೆ ವಿಚಿತ್ರ ಎನಿಸಿದರೂ ಇದು ನಿಜ. ಯುವಕನೊಬ್ಬ ಎಂಜಾಯ್​ ಮಾಡಬೇಕಾದ ಸಮಯದಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದಾನೆ.

    ಯುವಕನ ಹೆಸರು ಪ್ರನ್ಸುಖ್​ ಕಾಂತೇಡ್​. ವಯಸ್ಸು 28. ಮಧ್ಯಪ್ರದೇಶ ಮೂಲದ ಈತ ಇಂಜಿನಿಯರಿಂಗ್​ ಮುಗಿಸಿದ ಬಳಿಕ ಅಮೆರಿಕಕ್ಕೆ ತೆರಳಿದ. ಅಲ್ಲಿ ಡೇಟಾ ಸೈನ್ಸ್​ನಲ್ಲಿ ಉನ್ನತ ಶಿಕ್ಷಣ ಮುಗಿಸಿ, ವಾರ್ಷಿಕ 1.5 ಕೋಟಿ ರೂ. ಸಂಬಳದ ಉದ್ಯೋಗ ಸೇರಿಕೊಂಡ. ಇಂತಹ ಅವಕಾಶ ಸಿಕ್ಕಾಗ ಎಲ್ಲರೂ ಏನೋ ಸಾಧನೆ ಮಾಡಿದ ರೀತಿ ವರ್ತಿಸುತ್ತಾರೆ. ಆದರೆ, ಕಾಂತೇಡ್​ಗೆ ಆ ಕೆಲಸ ತೃಪ್ತಿ ತರಲಿಲ್ಲ. ಇದು ತಾನು ಬಯಸಿದ ಜೀವನವಲ್ಲ ಅನಿಸಿತು. ಕೋಟಿ ಸಂಬಳದ ಉದ್ಯೋಗವಿದ್ದರೂ ಸಂತೋಷ ಮಾತ್ರ ಇರಲಿಲ್ಲ. ಜೀವನದಲ್ಲಿ ನೆಮ್ಮದಿ ಸಿಗುತ್ತಿಲ್ಲ ಎಂದು ಅಭಿಪ್ರಾಯಪಟ್ಟ. ಹಣದಿಂದ ಬರುವ ಐಷಾರಾಮಿ ಜೀವನದಿಂದ ವಿಮುಖರಾಗುವ ನಿರ್ಧಾರಕ್ಕೆ ಬಂದ.

    ಉದ್ಯೋಗ ಮತ್ತು ಕೈತುಂಬ ಸಂಬಳ ಆತನನ್ನ ಸಂತೋಷಗೊಳಿಸಲಿಲ್ಲ. ಈ ಕಾರಣದಿಂದ ಮಹತ್ವದ ನಿರ್ಧಾರ ತೆಗೆದುಕೊಂಡ ಕಾಂತೇಡ್​, ಕೋಟಿ ಸಂಬಳದ ಉದ್ಯೋಗದ ಜೊತೆಗೆ ಅಮೆರಿಕವನ್ನು ಬಿಟ್ಟು ಭಾರತಕ್ಕೆ ಮರಳಿದ. ಆಡಂಬರ ಮತ್ತು ಪ್ರಾಪಂಚಿಕ ಸಂತೋಷಗಳನ್ನು ತ್ಯಜಿಸಿದನು. ಅಹಿಂಸೆ ಬೋಧಿಸುವುದನ್ನು ಗುರಿಯಾಗಿಸಿಕೊಂಡ. ಮೋಕ್ಷಕ್ಕೆ ಇದೇ ಹಾದಿ ಅಂದುಕೊಂಡ. ಕ್ಷಣಿಕ ಬದುಕಿನಲ್ಲಿ ಆನಂದವೇ ಇಲ್ಲದಿರುವಾಗ, ಕೋಟಿಗಟ್ಟಲೆ ಸಂಪಾದಿಸಿದರೂ ನೆಮ್ಮದಿ ಇಲ್ಲದಿರುವಾಗ, ಸಂತನಾಗುವುದು ಅಥವಾ ಸನ್ಯಾಸಿಯಾಗಿ ಬಾಳುವುದೇ ಸರಿಯಾದ ದಾರಿ ಎಂದು ಕಾಂತೇಡ್​ ನಿರ್ಧರಿಸಿದ.

    ಕಳೆದ ವರ್ಷ ಭಾರತಕ್ಕೆ ಮರಳಿದ ಕಾಂತೇಡ್​, ಜೈನ ಸನ್ಯಾಸದಲ್ಲಿ ಆಸಕ್ತಿ ತೋರಿಸಿದನು. ಮುಂಬರುವ ಡಿಸೆಂಬರ್ 26 ರಂದು ಕಾಂತೇಡ್​ ಜೈನ ಸನ್ಯಾಸಿಯಾಗಲಿದ್ದು, ಜೈನ ಧಾರ್ಮಿಕ ಗುರು ಜಿನೇಂದ್ರ ಮುನಿಯಿಂದ ಸನ್ಯಾಸ ದೀಕ್ಷೆ ತೆಗೆದುಕೊಳ್ಳಲಿದ್ದಾರೆ. ಕಾಂತೇಡ್​ ಜತೆಗೆ ಇನ್ನಿಬ್ಬರು ಯುವಕರು ಕೂಡ ಸನ್ಯಾಸತ್ವ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ದೀಕ್ಷಾ ಕಾರ್ಯಕ್ರಮಕ್ಕೆ 50ಕ್ಕೂ ಹೆಚ್ಚು ಜೈನ ಸಂತರು ಆಗಮಿಸಲಿದ್ದಾರೆ.

    ಸಾಮಾನ್ಯವಾಗಿ ಅಮೆರಿಕದ ಉದ್ಯೋಗ ಮತ್ತು ಕೋಟಿಗಟ್ಟಲೆ ಸಂಬಳ ಬಿಟ್ಟು ಸನ್ಯಾಸ ಸ್ವೀಕರಿಸುತ್ತೇನೆ ಎಂದು ಕುಟುಂಬದ ಮುಂದೆ ಹೇಳಿದರೆ ಯಾರೂ ಕೂಡ ಒಪ್ಪುವುದಿಲ್ಲ. ಆದರೆ, ಕಾಂತೇಡ್​ ವಿಷಯದಲ್ಲಿ ಆ ರೀತಿ ಆಗಲಿಲ್ಲ. ಅವರ ಕುಟುಂಬಸ್ಥರೂ ಸನ್ಯಾಸಿಯಾಗಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದಲ್ಲದೆ, ಅವರ ನಿರ್ಧಾರದಿಂದ ಅವರೆಲ್ಲರೂ ಸಂತೋಷಪಟ್ಟಿದ್ದಾರೆ. (ಏಜೆನ್ಸೀಸ್​​)

    ದೇಶಕ್ಕೆ ಇಬ್ಬರು ರಾಷ್ಟ್ರಪಿತರು… ಪ್ರಧಾನಿ ಮೋದಿ ನವಭಾರತದ ಪಿತಾಮಹ: ಅಮೃತಾ ಫಡ್ನವಿಸ್​ ಹೇಳಿಕೆ

    ಬೇಕಂತಲೇ ಕರೊನಾ ಸೋಂಕು ಅಂಟಿಸಿಕೊಂಡ ಚೀನಾ ಗಾಯಕಿ! ಆಕೆ ಕೊಟ್ಟ ಕಾರಣ ಕೇಳಿದ್ರೆ ಬೆರಗಾಗ್ತೀರಾ

    ಸದನದ ರೂಟ್ ತಪ್ಪಿಸಿದ ಬಸ್ ಸಂಚಾರ: ವಿರೋಧ ಪಕ್ಷಗಳ ಧರಣಿ, ಸಚಿವರ ಕ್ಷಮೆಗೆ ಪಟ್ಟು; ಸ್ಪೀಕರ್ ಕಚೇರಿಯಲ್ಲಿ ರಾಜೀ, ಮತ್ತೆ ಸದನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts