ನವದೆಹಲಿ: ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಆರಂಭಕ್ಕೂ ಮುನ್ನವೇ ಕೋವಿಡ್ ಕಾಟ ಎದುರಾಗಿದೆ. ಭಾರತದ ಅನುಭವಿ ಷಟ್ಲರ್ ಬಿ.ಸಾಯಿ ಪ್ರಣೀತ್ ಹಾಗೂ ಇಂಗ್ಲೆಂಡ್ ತಂಡದ ಇಬ್ಬರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ‘ನನಗೆ ಕೋವಿಡ್ ಕಾಣಿಸಿಕೊಂಡಿದ್ದು, ಆರ್ಟಿ-ಪಿಸಿಆರ್ ಪರೀಕ್ಷೆಯಿಂದ ತಿಳಿದು ಬಂತು. ನಿನ್ನೆಯಿಂದ ಶೀತ, ಕೆಮ್ಮು ಇತ್ತು. ಮನೆಯಲ್ಲೇ ಐಸೋಲೇಷನ್ಗೆ ಒಳಗಾಗಿರುವೆ’ ಎಂದು ಪ್ರಣೀತ್ ತಿಳಿಸಿದ್ದಾರೆ. ಭಾರತದ ಡಬಲ್ಸ್ ವಿಭಾಗದ ಆಟಗಾರ ಧ್ರುವ್ ರಾವತ್ಗೂ ಕೋವಿಡ್ ಕಾಣಿಸಿಕೊಂಡಿದೆ. ಕೆಡಿ ಜಾಧವ್ ಒಳಾಂಗಣ ಹಾಲ್ನಲ್ಲಿ ಮಂಗಳವಾರದಿಂದ ಟೂರ್ನಿ ಆರಂಭಗೊಳ್ಳುತ್ತಿದೆ. ಕಳೆದ ವರ್ಷ ಕೋವಿಡ್ನಿಂದಾಗಿಯೇ ಟೂರ್ನಿ ಮುಂದೂಡಿಕೆಯಾಗಿತ್ತು.
* ಸಿಂಧು, ಶ್ರೀಕಾಂತ್ಗೆ ಅಗ್ರಶ್ರೇಯಾಂಕ
ನವದೆಹಲಿ: ಮಾಜಿ ಚಾಂಪಿಯನ್ಗಳಾದ ಕೆ.ಶ್ರೀಕಾಂತ್ ಹಾಗೂ ಪಿವಿ ಸಿಂಧು, ಇಂಡಿಯಾ ಓಪನ್ ಬ್ಯಾಡ್ಮಿಂಟನ್ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಅಗ್ರಶ್ರೇಯಾಂಕ ಪಡೆದಿದ್ದಾರೆ. ಕೋವಿಡ್ನಿಂದಾಗಿ ಮುಂದೂಡಿಕೆಯಾಗಿದ್ದ ಟೂರ್ನಿಯೂ ಎರಡು ವರ್ಷಗಳ ಬಳಿಕ ನಡೆಯುತ್ತಿದೆ. ವಿಶ್ವ ಚಾಂಪಿಯನ್ ಬೆಳ್ಳಿ ಪದಕ ವಿಜೇತ ಕೆ.ಶ್ರೀಕಾಂತ್ಗೆ ಭಾರತದವರೇ ಆದ ವಿಶ್ವ ಚಾಂಪಿಯನ್ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್, ವಿಶ್ವ ಚಾಂಪಿಯನ್ ಲೊಹ ಕೀನ್ ಯೆವ್ ಅವರಿಂದ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆಗಳಿವೆ. 2017ರ ಚಾಂಪಿಯನ್ ಪಿವಿ ಸಿಂಧುಗೆ ಎರಡು ಬಾರಿ ಚಾಂಪಿಯನ್ ಸೈನಾ ನೆಹ್ವಾಲ್, ಥಾಯ್ಲೆಂಡ್ನ ಬುಸಾನನ್ ಒಂಗ್ಬಾರುಂಗನ್ ಹಾಗೂ ಸಿಂಗಾಪುರದ ಜಿಯಾ ಮಿನ್ ಯಿಯೋ ಸವಾಲು ಎದುರಾಗಲಿದೆ.