ರಾಯಚೂರು: ಪ್ರತಿ 12 ವರ್ಷಗಳಿಗೊಮ್ಮೆ ಆಗಮಿಸುವ ತುಂಗಭದ್ರಾ ಪುಷ್ಕರಕ್ಕೆ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಹಿಂಭಾಗದಲ್ಲಿರುವ ತುಂಗಭದ್ರಾ ನದಿಗೆ ಪೂಜೆ ಸಲ್ಲಿಸುವ ಮೂಲಕ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶುಕ್ರವಾರ ಚಾಲನೆ ನೀಡಿದರು.
ಶ್ರೀಮಠದ ಪ್ರಾಕಾರದಲ್ಲಿ ರಾಯರ ಉತ್ಸವ ಮೂರ್ತಿ ಪ್ರಹ್ಲಾದರಾಜರಿಗೆ ಶ್ರೀಗಳು ಪೂಜೆ ಸಲ್ಲಿಸಿದ ನಂತರ ಚಂಡೆಮದ್ದಲೆ, ಮಂಗಳವಾದ್ಯಗಳೊಂದಿಗೆ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ತುಂಗಭದ್ರಾ ನದಿ ತೀರಕ್ಕೆ ತರಲಾಯಿತು. ದಂಡೋದಕ ಸ್ನಾನ ಹಾಗೂ ಪುಣ್ಯಸ್ನಾನ ನೆರವೇರಿಸಿದ ಶ್ರೀಗಳು, ನದಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ‘ಪುಷ್ಕರ ಆರಂಭವಾಯಿತು’ ಎಂದು ಘೋಷಣೆ ಮಾಡಿದರು. ಇದಾದ ಮೇಲೆ ನದಿ ತೀರದಲ್ಲಿ ಪ್ರತಿಷ್ಠಾಪಿಸಿರುವ ತಾಯಿ ತುಂಗಭದ್ರೆ ಮೂರ್ತಿಯನ್ನು ಶ್ರೀಗಳು ಅನಾವರಣಗೊಳಿಸಿದರು.
ಶ್ರೀಮಠದ ಆಡಳಿತಾಧಿಕಾರಿ ರೊದ್ದಂ ಪ್ರಭಾಕರರಾವ್, ಸಹಾಯಕ ಆಡಳಿತಾಧಿಕಾರಿ ಮಾಧವ ಶೆಟ್ಟಿ, ವ್ಯವಸ್ಥಾಪಕ ವೆಂಕಟೇಶ ಜೋಷಿ, ಸಹಾಯಕ ವ್ಯವಸ್ಥಾಪಕ ಐ.ಪಿ.ನರಸಿಂಹಾಚಾರ್ ಇತರರು ಇದ್ದರು.