ಅಮೇಠಿ: ಸ್ವಕ್ಷೇತ್ರ ಅಮೇಠಿಗೆ ಭೇಟಿ ನೀಡಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೋಮವಾರ ಕಾಂಗ್ರೆಸ್ ನಾಯಕರ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ಅಲ್ಲದೆ, ಕಾಂಗ್ರೆಸ್ ಅಧ್ಯಕ್ಷ ಪದವಿ ವಿಚಾರವಾಗಿ ಕಾಂಗ್ರೆಸ್ಸಿಗರ ಕಾಲೆಳೆದಿದ್ದಾರೆ.
ಸ್ವಕ್ಷೇತ್ರ ಪ್ರವಾಸದಲ್ಲಿದ್ದ ಸ್ಮೃತಿ ಇರಾನಿಯವರಲ್ಲಿ ಸ್ಥಳೀಯರು ಪ್ರಿಯಾಂಕಾ ಗಾಂಧಿ ವಾದ್ರಾ ಇತ್ತೀಚೆಗೆ ಬಹಳ ಸಕ್ರಿಯರಾಗಿರುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಮೃತಿ ಇರಾನಿ, ಕಾಂಗ್ರೆಸ್ ಅಧ್ಯಕ್ಷ ಗಾದಿ “ಫ್ಯಾಮಿಲಿ ಮ್ಯಾಟರು”ಎಂಬುದನ್ನಷ್ಟೇ ಹೇಳಲು ಸೋನಿಯಾ ಗಾಂಧಿ ಶಕ್ತರಾಗಬಹುದು ಎಂದು ಹೇಳಿದ್ದಾರೆ.
ರಾಜಸ್ಥಾನದ ಕೋಟಾ ಆಸ್ಪತ್ರೆಯಲ್ಲಿ ಮಕ್ಕಳ ಸಾವಿನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ವೈದ್ಯಕೀಯ ನೆರವು ಕೋರಿ ಜನ ಆಸ್ಪತ್ರೆಗೆ ಬರುತ್ತಾರೆ.ಸರ್ಕಾರದಿಂದ ಉತ್ತಮ ಆರೋಗ್ಯ ಸೇವೆ ಸಿಗಬಹುದೆಂಬ ನಿರೀಕ್ಷೆಯಲ್ಲಿ ಇರುತ್ತಾರೆ ಅವರು. ಇಂತಹ ಸೇವೆಗಳ ವಿಚಾರದಲ್ಲಿ ಸರ್ಕಾರ ಕ್ಷಿಪ್ರವಾಗಿ ಪ್ರತಿಕ್ರಿಯಿಸಬೇಕಾಗಿದ್ದು, ತುರ್ತು ನೆರವು ಒದಗಿಸಬೇಕು. ಈ ವಿಷಯವಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಧನಾತ್ಮಕವಾಗಿ ಪ್ರತಿಕ್ರಿಯೆಯನ್ನು ರಾಜಸ್ಥಾನ ಸರ್ಕಾರ ನೀಡಬೇಕು ಎಂದರು.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ನ ಪ್ರಾದೇಶಿಕ ಕೇಂದ್ರದ ಆವರಣದಲ್ಲಿ ಆಯ್ದ ಜನರ ಜತೆಗೆ ಸಂವಹನ ನಡೆಸಿದ ಸ್ಮೃತಿ ಇರಾನಿ, ಸಮಗ್ರ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರದ ಬಗ್ಗೆ ವಿವರಿಸಿದರು. ಇದಕ್ಕೂ ಮುನ್ನ ಅವರು, ಶಹಾಗಢದಲ್ಲಿ ಕಿಸಾನ್ ಕಲ್ಯಾಣ ಕೇಂದ್ರವನ್ನು ಉದ್ಘಾಟಿಸಿದ್ದರು. (ಏಜೆನ್ಸೀಸ್)