More

    ಕಾಶಿಯ ಜ್ಞಾನವಾಪಿ ಮಸೀದಿಯೊಳಗೆ ಮೂರು ದಶಕದ ನಂತರ ಮೊದಲ ಪೂಜೆ!

    ವಾರಣಾಸಿ: ಕಾಶಿಯ ಜ್ಞಾನವಾಪಿ ಮಸೀದಿಯ ವ್ಯಾಸ ಮಹರ್ಷಿ ನೆಲಮಾಳಿಗೆಯಲ್ಲಿರುವ ವಿಗ್ರಹಗಳಿಗೆ ಪೂಜೆ ಸಲ್ಲಿಸಲು ಸ್ಥಳೀಯ ನ್ಯಾಯಾಲಯ ಅನುಮತಿ ನೀಡಿದ 8 ಗಂಟೆಯೊಳಗೆ ಪೂಜೆ ಆರಂಭವಾಗಿದೆ.

    ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ವ್ಯಾಸ ಮಹರ್ಷಿ ನೆಲಮಾಳಿಗೆ: ಪುರಾತತ್ವ ಇಲಾಖೆ ಹೇಳುವುದೇನು? ಈ ಕುರಿತು ಇನ್ನಷ್ಟು ಮಾಹಿತಿ..

    ಜ್ಞಾನವಾಪಿ ಆವರಣದಲ್ಲಿ ಮಧ್ಯರಾತ್ರಿಯಲ್ಲಿ ಧಾರ್ಮಿಕ ಸಮಾರಂಭಗಳನ್ನು ನಡೆಸಲಾಯಿತು. ಬಳಿಕ ನೆಲಮಾಳಿಗೆಯಲ್ಲಿರುವ ವಿಗ್ರಹಕ್ಕೆ ಬುಧವಾರ ರಾತ್ರಿ 11 ಗಂಟೆಗೆ ಪೂಜೆ ನಡೆಸಲಾಗಿದೆ. ಪೂಜೆಯ ನಂತರ ಮಂಗಳಾರತಿಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು. ಈ ಮೂಲಕ ಜ್ಞಾನವಾಪಿಯಲ್ಲಿ 31 ವರ್ಷದ ಬಳಿಕ ಪೂಜೆ ನಡೆದಿದೆ. ಪೂಜೆ ವೇಳೆ ಮಸೀದಿಯ ಆವರಣದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು.

    ನಡೆದಿದ್ದು ಇಷ್ಟು: ಬುಧವಾರ ಮಧ್ಯಾಹ್ನ 3 ಗಂಟೆಗೆ ಜ್ಞಾನವಾಪಿ ನೆಲಮಾಳಿಗೆಯಲ್ಲಿ ಪೂಜೆಗೆ ವಾರಣಾಸಿ ಕೋರ್ಟ್ ಅನುಮತಿಸಿದ್ದು, ಸಂಜೆ 5 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಸ್.ರಾಜಲಿಂಗಂ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಬಳಿಕ ರಾತ್ರಿ 7 ಗಂಟೆಗೆ ನಡೆದ ಸಭೆಯಲ್ಲಿ ಜ್ಞಾನವಾಪಿ ಪರಿಸರದಲ್ಲಿ ಭದ್ರತೆ ಹೆಚ್ಚಳಕ್ಕೆ ಸೂಚನೆ ನೀಡಲಾಯಿತು.

    ರಾತ್ರಿ 8.15ಕ್ಕೆ ಜಿಲ್ಲಾಧಿಕಾರಿ, ಮತ್ತಿತರ ಅಧಿಕಾರಿಗಳು ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿ, ರಾತ್ರಿ 9 ಗಂಟೆಗೆ ದೇಗುಲದ 5 ಅರ್ಚಕರನ್ನು ಬರಮಾಡಿಕೊಂಡು ರಾತ್ರಿ‌ 10.30ಗಂಟೆಗೆ ಬ್ಯಾರಿಕೇಡ್ ತೆರವು ಸೇರಿದಂತೆ ಕಾಶಿ ವಿಶ್ವನಾಥ ಟ್ರಸ್ಟ್ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ ಮಾಡಿಸಲಾಯಿತು. ಬಳಿಕ ಅರ್ಚಕರು ರಾತ್ರಿ 11ಗಂಟೆಗೆ ಪೂಜಾ ಸಾಮಗ್ರಿಯೊಂದಿಗೆ ತೆರಳಿ ಮಸೀದಿಯ ನೆಲಮಾಳಿಗೆಯಲ್ಲಿ ಸ್ವಚ್ಛತಾ ಕಾರ್ಯದ ಬಳಿಕ ಪೂಜೆ ನಡೆಸಿದರು.

    ಮೊದಲು ಗಣೇಶ, ಲಕ್ಷ್ಮಿ ದೇವಿಗೆ ಆರತಿ ಬೆಳಗಲಾಯಿತು. ಗೋಡೆಯಲ್ಲಿದ್ದ ಶಿವಲಿಂಗ, ಧಾರ್ಮಿಕ ಚಿಹ್ನೆಗಳಿಗೂ ಪೂಜೆ ಸಲ್ಲಿಸಲಾಯಿತು.

    ಜ್ಞಾನವಾಪಿ ಮಸೀದಿಯೊಳಗೆ ಪೂಜೆ ಸಲ್ಲಿಸಲು ಅನುಮತಿ ಪಡೆದಿರುವ ವ್ಯಾಸ್ ಕುಟುಂಬದ ಸದಸ್ಯ ಜಿತೇಂದ್ರ ನಾಥ್ ವ್ಯಾಸ್ ಪ್ರತಿಕ್ರಿಯಿಸಿದ್ದು, ನಮಗೆ ಅಲ್ಲಿ ಪೂಜೆಯನ್ನು ಮತ್ತೆ ಆರಂಭಿಸಲು ಅನುಮತಿ ಸಿಕ್ಕಿರುವುದು ತುಂಬಾ ಸಂತೋಷವಾಗಿದೆ. ಬುಧವಾರ ರಾತ್ರಿ ಪೂಜೆಯ ಸಮಯದಲ್ಲಿ ದೇಗುಲದ ಟ್ರಸ್ಟ್‌ನ ಐವರು ಅರ್ಚಕರು, ವ್ಯಾಸ್ ಕುಟುಂಬದ ಸದಸ್ಯರು, ವಾರಣಾಸಿ ಜಿಲ್ಲಾ ಮೆಜಸ್ಟ್ರೇಟ್​, ಆಯುಕ್ತರು ಉಪಸ್ಥಿತರಿದ್ದರು ಎಂದು ವಿವರಿಸಿದರು.

    ಈ ಸಂಬಂಧ ಭಕ್ತರೊಬ್ಬರು ಪ್ರತಿಕ್ರಿಯಿಸಿ, ನಾವೆಲ್ಲರೂ ಪ್ರತಿದಿನ ಮುಂಜಾನೆ 3:30ರ ಸುಮಾರಿಗೆ ದರ್ಶನಕ್ಕಾಗಿ ಇಲ್ಲಿಗೆ ಬರುತ್ತೇವೆ. ಇದೀಗ ನ್ಯಾಯಾಲಯದ ಆದೇಶದಿಂದ ನಾವು ಅತ್ಯಂತ ಸಂತೋಷ ಮತ್ತು ಭಾವನಾತ್ಮಕವಾಗಿದ್ದೇವೆ ಎಂದು ತಿಳಿಸಿದ್ದಾರೆ.

    ವಕೀಲ ಸೋಹನ್ ಲಾಲ್ ಆರ್ಯ ಮಾತನಾಡಿ, ಇಂದು ನಾವು ತುಂಬಾ ಹೆಮ್ಮೆಪಡುತ್ತೇವೆ. ನಿನ್ನೆ ನ್ಯಾಯಾಲಯದ ತೀರ್ಪು ಅಭೂತಪೂರ್ವವಾಗಿದೆ. ವ್ಯವಸ್ಥೆಗಳನ್ನು ಮಾಡಲಾಗಿದೆ ಆದರೆ ಅದನ್ನು (ವ್ಯಾಸ್ ಕಾ ತೆಖಾನಾ) ಭಕ್ತರಿಗೆ ಇನ್ನೂ ತೆರೆಯಲಾಗಿಲ್ಲ ಎಂದು ಹೇಳಿದ್ದಾರೆ.

    ಕೋರ್ಟ್‌ ಅನುಮತಿ: ಪುರಾತತ್ವ ಇಲಾಖೆ ನಡೆಸಿದ ವೈಜ್ಞಾನಿಕ ಸಮೀಕ್ಷೆಯಲ್ಲಿ ಮಸೀದಿ ನಿರ್ಮಾಣ ಆಗಿರುವುದು ಮಂದಿರದ ಮೇಲೆ ಎಂಬ ಸತ್ಯ ಬಯಲಾದ ಬೆನ್ನಲ್ಲೇ ಹಿಂದೂಗಳಿಗೆ ಈಗ ಪೂಜಾಧಿಕಾರ ದಕ್ಕಿದೆ. ಈ ಪ್ರಾರ್ಥನಾ ಮಂದಿರದಲ್ಲಿ ಸೀಲ್ ಮಾಡಿರುವ ಬೇಸ್‌ಮೆಂಟ್‌ನಲ್ಲಿ ಇರುವ ಹಿಂದೂ ವಿಗ್ರಹಗಳಿಗೆ ಪೂಜೆ ಮಾಡಲು ವಾರಣಾಸಿ ಕೋರ್ಟ್ ಅನುಮತಿ ನೀಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts