ಮೈಸೂರು: ಜಿಲ್ಲೆಯ ಚುನಾವಣಾ ರಾಯಭಾರಿಗಳು ಶುಕ್ರವಾರ ನಗರದ ವಿವಿಧ ಮತಗಟ್ಟೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.
ಕುವೆಂಪುನಗರದ ಜ್ಞಾನಗಂಗಾ ಶಾಲೆ ಮತಗಟ್ಟೆಯಲ್ಲಿ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಟು ಹಾಗೂ ಚುನಾವಣಾ ರಾಯಭಾರಿಯಾಗಿರುವ ಜಾವಗಲ್ ಶ್ರೀನಾಥ್, ಗೋಕುಲಂ ನಿರ್ಮಲ ಕಾನ್ವೆಂಟ್ ಮತಗಟ್ಟೆಯಲ್ಲಿ ಗ್ರೀನ್ ಆಸ್ಕರ್ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಮತ್ತು ಸೇನಾನಿ ಮತದಾನ ಮಾಡಲಿದ್ದಾರೆ.
ಕೆ.ಆರ್. ಮೊಹಲ್ಲಾದ ಗಾಡಿಚೌಕದ ಸರ್ಕಾರಿ ವಿಭಜಿತ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಈಜುಪಟು ಮಧುಸೂದನ್, ಶ್ರೀರಾಂಪುರದ ಬೆಮೆಲ್ ಬಡಾಣೆಯ ಮಹಾವೀರ್ ವಿದ್ಯಾಮಂದಿರ ಮತಗಟ್ಟೆಯಲ್ಲಿ ದೃಷ್ಟಿಹೀನರಾದ ಅನಘ, ಶ್ರೀರಾಂಪುರ ಮುಖ್ಯ ರಸ್ತೆಯ ಆರ್ಯನ್ ಕಿಡ್ ಮತಗಟ್ಟೆಯಲ್ಲಿ ‘ಮಿಸ್ ಕರ್ನಾಟಕ’ ತನಿಷ್ಕಾ ಮೂರ್ತಿ, ನಾರಾಯಣಶಾಸ್ತ್ರಿ ರಸ್ತೆಯ ಸದ್ವಿದ್ಯಾ ಶಾಲೆ ಮತಗಟ್ಟೆಯಲ್ಲಿ ವಿಶೇಷಚೇತನ ಆನಂದ್ ರೂನವಾಲ್ ತಮ್ಮ ಹಕ್ಕು ಚಲಾಯಿಸುವರು.
ನಂಜನಗೂಡು ತಾಲೂಕಿನ ಕಪ್ಪಸೋಗೆ ಸರ್ಕಾರಿ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಪ್ಯಾರ ಅಥ್ಲೇಟ್ ಮಹೇಂದ್ರ, ಹುಣಸೂರು ತಾಲೂಕಿನ ನಂಜಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಶ್ರೀನಿವಾಸ್, ಗೋಕುಲಂನ ನಿರ್ಮಲ ಕಾನ್ವೆಂಟ್ ಮತಗಟ್ಟೆಯಲ್ಲಿ ಶ್ರೀದೇವಿ ಅನ್ನಪೂರ್ಣ ಮತ ಚಲಾಯಿಸುವರು.