ಬೆಂಗಳೂರು: ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡವರು ಇನ್ನು ಕಾನೂನುಕ್ರಮ ಎದುರಿಸುವುದು ಅನಿವಾರ್ಯವಾಗಲಿದೆ. ಆ ನಿಟ್ಟಿನಲ್ಲಿ ಹೊಸದೊಂದು ಸುತ್ತೋಲೆ ಹೊರಬಿದ್ದಿದ್ದು, ಎಲ್ಲ ವ್ಯಾಪ್ತಿಯ ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ಸೂಚನೆ ನೀಡಲಾಗಿದೆ.
ರಾಜಧಾನಿಯಲ್ಲಿ ಸಂಚಾರ ಸಮಸ್ಯೆ ನಿವಾರಣೆಗೆ ಹೊಸದಾಗಿ ಸರ್ಕಾರ ವಿಶೇಷ ಪೊಲೀಸ್ ಆಯುಕ್ತರ ಹುದ್ದೆಯನ್ನು ಸೃಜಿಸಿದ್ದಲ್ಲದೆ, ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿರುವ ಡಾ.ಎಂ.ಎ.ಸಲೀಂ ಅವರು ಸುಗಮ ಸಂಚಾರ ವ್ಯವಸ್ಥೆಗಾಗಿ ಕಳೆದ ಕೆಲವು ದಿನಗಳಿಂದ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಇನ್ನೊಂದು ಕ್ರಮಜರುಗಿಸಲು ಮುಂದಾಗಿದ್ದಾರೆ.
ಮನೆ, ಕಟ್ಟಡಗಳ ಮಾಲೀಕರು ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡಿರುವುದು ಮತ್ತು ವಾಹನ ಸವಾರರು ಪಾದಚಾರಿ ಮಾರ್ಗದಲ್ಲಿ ಪಾರ್ಕಿಂಗ್ ಮಾಡುವುದು ಮತ್ತು ವಾಹನ ಚಲಾಯಿಸುವುದನ್ನು ಮಾಡುತ್ತಿರುವುದೇ ನಗರದಲ್ಲಿ ಸಂಚಾರ ಸಮಸ್ಯೆ ಉಂಟಾಗಲು ಮುಖ್ಯ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಾತ್ರವಲ್ಲ, ಇದರಿಂದ ಸಾರ್ವಜನಿಕರು ರಸ್ತೆಗಿಳಿಯುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಆಗುತ್ತದೆ. ಬಹುಮುಖ್ಯವಾಗಿ ಮಕ್ಕಳು ಮತ್ತು ಹಿರಿಯ ನಾಗರಿಕರು ಓಡಾಡಲು ತೊಂದರೆ ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುತ್ತಿದ್ದರೆ, ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡಿದ್ದರೆ ಅದನ್ನು ತೆರವುಗೊಳಿಸಲು ಕಾನೂನಿನಲ್ಲಿ ಅವಕಾಶವಿದ್ದು, ಎಲ್ಲ ಪೊಲೀಸ್ ಇನ್ಸ್ಪೆಕ್ಟರ್ಗಳು ಈ ಬಗ್ಗೆ ಕ್ರಮಜರುಗಿಸಬೇಕು ಹಾಗೂ ಮುಂದಿನ ಸಭೆಯಲ್ಲಿ ಈ ಕುರಿತಂತೆ ಮಾಹಿತಿ ನೀಡಬೇಕು ಎಂದು ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಅಭಿಮಾನಿಗಳ ಅತಿರೇಕ: ಎಲ್ಲ ಫ್ಯಾನ್ಸ್ಗೆ ನಟಿ ರಮ್ಯಾ ಕಿವಿಮಾತು, ನಟರಿಗೆ ಸಲಹೆ; ಕೆಲ ಖಾತೆಗಳ ಬ್ಲಾಕ್ ಮಾಡಲು ಮನವಿ
ಹಳೇ ಪಿಂಚಣಿ ಪದ್ಧತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಹೋರಾಟ; ಚುನಾವಣಾ ಪ್ರಣಾಳಿಕೆಯಲ್ಲಿ ಒಪಿಎಸ್ ಭರವಸೆಗೆ ಒತ್ತಾಯ