ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಹಲವಾರು ಕಡೆಗಳಲ್ಲಿನ ಅತಿಥಿಗೃಹ, ಪೇಯಿಂಗ್ ಗೆಸ್ಟ್ ಇತ್ಯಾದಿಗಳಲ್ಲಿ ಜನರು ಸಿಲುಕಿಕೊಂಡಿದ್ದಾರೆ. ಕಾರ್ಯ ನಿಮಿತ್ತ ಬೇರೆ ಊರುಗಳಿಗೆ ಹೋಗಿರುವ ಹಲವಾರು ಮಂದಿಯ ಗೋಳು ಹೇಳತೀರದಾಗಿದೆ. ತಮ್ಮ ಊರಿಗೆ ವಾಪಸಾಗಲೂ ಆಗದೆ, ಇದ್ದಲ್ಲಿಯೇ ಉಳಿದುಕೊಳ್ಳಲೂ ಆಗದೆ ಕೆಲವರು ಸುಸ್ತಾಗಿದ್ದರೆ, ಅವರಿಂದ ಬಾಡಿಗೆ ಪಡೆಯಲು ಆಗದೇ ಓನರ್ಗಳು ಹೈರಾಣಾಗಿದ್ದಾರೆ!
ಯಾವುದ್ಯಾವುದೋ ಕೆಲಸಕ್ಕೆ ಬಂದು ಅನಿವಾರ್ಯವಾಗಿ ಸಿಲುಕಿಕೊಂಡರವರಿಂದ ಯಾವುದೇ ರೀತಿಯಲ್ಲಿ ಹಣ ಪಡೆಯಬಾರದು ಎಂದು ಸರ್ಕಾರ ಕಟ್ಟುನಿಟ್ಟಾಗಿ ಆದೇಶಿಸಿದೆ. ಲಾಕ್ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಜನರು ಮನೆಗೆ ಹೋಗಲಾಗದೇ ಪರದಾಡುತ್ತಿರುವ ಕಾರಣ, ಅವರು ಅತಿಥಿಗೃಹ, ಪೇಯಿಂಗ್ ಗೆಸ್ಟ್ ಇತ್ಯಾದಿಗಳಲ್ಲಿ ಉಳಿದುಕೊಂಡಿರುವ ಕಾರಣ ಅವರಿಂದ ಲಾಕ್ಡೌನ್ ಸಮಯದ ಬಾಡಿಗೆ ವಸೂಲು ಮಾಡುವಂತಿಲ್ಲ ಎಂದು ಆದೇಶ ಮಾಡಲಾಗಿದೆ. ಇದನ್ನು ಮೀರಿದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಬಗ್ಗೆಯೂ ಮಾಲೀಕರಿಗೆ ಈಗಾಗಲೇ ಎಚ್ಚರಿಕೆಯನ್ನೂ ನೀಡಲಾಗಿದೆ.
ಅದೇ ಇನ್ನೊಂದೆಡೆ, ಕಟ್ಟಡ ನಿರ್ವಹಣೆ, ಅಡುಗೆ, ಶುಚಿತ್ವ ಇತ್ಯಾದಿಗಳಿಗೆ ನಾವಂತೂ ಹಣ ಕೊಡಲೇಬೇಕು, ಬಾಡಿಗೆ ಪಡೆಯದಿದ್ದರೆ ನಾವೇನು ಮಾಡುವುದು ಎನ್ನುತ್ತಿದ್ದಾರೆ ಮಾಲೀಕರು.
ಆದರೆ ಸದ್ಯಕ್ಕಂತೂ ಮಾಲೀಕರು ಮಾತನಾಡುವಂತಿಲ್ಲ. ಏಕೆಂದರೆ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಿನಿಂದ ಪಾಲಿಸುವ ಅವಶ್ಯಕತೆ ಅವರಿಗಿದೆ. ಇಲ್ಲದಿದ್ದರೆ ಕೇಸ್ ಬೀಳೋದು ಗ್ಯಾರೆಂಟಿ. ಏಕೆಂದರೆ ಈಗಾಗಲೇ ಬೆಂಗಳೂರಿನಲ್ಲಿ ಆರು ಮಾಲೀಕರ ಮೇಲೆ ಕೇಸು ದಾಖಲು ಮಾಡಲಾಗಿದೆ.
ಲಾಕ್ಡೌನ್ನಿಂದ ಸಿಲುಕಿಕೊಂಡಿರುವ ಬಾಡಿಗೆದಾರರಿಂದ ಹಣ ವಸೂಲಿ ಮಾಡಲು ಮುಂದಾಗಿಯೋ ಅಥವಾ ನೀರು, ವಿದ್ಯುತ್, ಆಹಾರ ಇತ್ಯಾದಿ ಸೌಲಭ್ಯಗಳನ್ನು ನಿಲ್ಲಿಸಿ ಬಾಡಿಗೆದಾರರಿಗೆ ಕಿರುಕುಳ ನೀಡುತ್ತಿರುವ ಆರೋಪದ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ.
ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯ ನಿವಾಸಿ ತಪನ್ ಚಕ್ರವರ್ತಿ ಅವರು ಮಾರ್ಚ್ 15 ರಂದು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಬೆಂಗಳೂರಿನ ಕಾಡುಗೋಡಿಯ ಅತಿಥಿ ಗೃಹದಲ್ಲಿ ಉಳಿದುಕೊಂಡಿದ್ದರು. ಈಗ ಮನೆಗೆ ವಾಪಸಾಗುವಂತೆ ಇಲ್ಲ. ತಂದಿದ್ದ ದುಡ್ಡೆಲ್ಲಾ ಖಾಲಿಯಾಗಿದೆ. ಆದರೂ ಅತಿಥಿ ಗೃಹದ ಮಾಲೀಕ ದುಡ್ಡಿಯಾಗಿ ಪೀಡಿಸುತ್ತಿದ್ದಾರೆ ಎಂದು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಅತಿಥಿ ಗೃಹ ಮಾಲೀಕರು ಮತ್ತು ವ್ಯವಸ್ಥಾಪಕರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ ದಾಖಲಿಸಲಾಗಿದೆ.
ಇದೇ ರೀತಿ ಆರು ಪ್ರಕರಣ ದಾಖಲಾಗಿದ್ದು, ಹೆಚ್ಚಿನವು ವೈಟ್ಫೀಲ್ಡ್ ವಿಭಾಗದಲ್ಲಿ ದಾಖಲಿಸಲಾಗಿದೆ, ಬಾಡಿಗೆ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ತಮಗೆ ನೀರು, ವಿದ್ಯುತ್ ಮತ್ತು ಆಹಾರವನ್ನು ಸಹ ನೀಡುವುದನ್ನು ನಿಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಆದರೆ ಬಾಡಿಗೆದಾರರಿಗೆ ಇವುಗಳನ್ನು ಪೂರೈಸಲು ತಮಗೆ ದುಡ್ಡಿನ ಅವಶ್ಯಕತೆ ಇದೆ. ಪುಕ್ಕಟೆ ಹೇಗೆ ಪೂರೈಸುವುದು ಎಂದು ಮಾಲೀಕರು ಕೇಳುತ್ತಿದ್ದಾರೆ. (ಏಜೆನ್ಸೀಸ್)