ಮೈಸೂರು: ಭಿಕ್ಷುಕಿಯ ಕೈಯಲ್ಲಿ ಪೊಲೀಸರ ಕಡತ ಸಿಕ್ಕಿ ಬೀದಿಪಾಲಾಗಿದ್ದು, ಹಲವಾರು ಅನುಮಾನಗಳನ್ನು ಮೂಡಿಸಿದೆ. ಮೈಸೂರಿನ ಅಶ್ವಾರೋಹಿ ದಳ ಕಮಾಂಡೆಂಟ್ ಕಚೇರಿಯ ಕಡತಗಳು ಹೀಗೆ ಬೀದಿಗೆ ಬಂದಿದ್ದು, ಅಲ್ಲಿನ ಭ್ರಷ್ಟಾಚಾರದ ಕರ್ಮಕಾಂಡವೊಂದರ ಅನಾವರಣ ಆದಂತಾಗಿದೆ.
ಅಶ್ವಾರೋಹಿ ದಳ ಕಮಾಂಡೆಂಟ್ ಕಚೇರಿಯ ಕಡತಗಳನ್ನು ಭಿಕ್ಷುಕಿಯೊಬ್ಬಳು ಹಿಡಿದುಕೊಂಡು ಬಂದು ಟ್ರಿಣ್ ಟ್ರಿಣ್ ಸೈಕಲ್ ಸ್ಟ್ಯಾಂಡ್ನಲ್ಲಿ ಇರಿಸಿಹೋಗುವ ದೃಶ್ಯಾವಳಿ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನ. 7ರಂದು ಈ ಘಟನೆ ನಡೆದಿದ್ದು, ಟ್ರಿಣ್ ಟ್ರಿಣ್ ಸಿಬ್ಬಂದಿ ಅದನ್ನು ಮರಳಿಸಿದ್ದಾರೆ.
ಇವು ಹೆಡ್ ಕಾನ್ಸ್ಟೆಬಲ್ ಮಲ್ಲಿಕಾರ್ಜುನ್, ಕಾನ್ಸ್ಟೆಬಲ್ಗಳಾದ ರಾಜೇಗೌಡ ಮತ್ತು ಮಲ್ಲಣ್ಣ ಅವರಿಗೆ ಸಂಬಂಧಿತ ಕಡತಗಳು. ಕೆಳ ಹಂತದ ಸಿಬ್ಬಂದಿಯ ಬಡ್ತಿ ತಪ್ಪಿಸಲು ಕಡತ ಕಳೆದು ಹಾಕಲು ಯತ್ನಿಸಲಾಗಿದೆ ಎನ್ನಲಾಗಿದೆ. ಈ ಕುರಿತು ಕಮಾಂಡೆಂಟ್ ನಾಗರಾಜ್, ಸಹಾಯಕ ಆಡಳಿತಾಧಿಕಾರಿ ಭೋಪಣ್ಣ ಮೇಲೆ ಅನುಮಾನ ಮೂಡಿದ್ದು, ಭ್ರಷ್ಟಾಚಾರ ಪ್ರಕರಣವೊಂದನ್ನು ಮುಚ್ಚಿ ಹಾಕುವ ಸಂಚಿನ ಆರೋಪ ಕೇಳಿಬಂದಿದೆ.