ಮಂಡ್ಯ: ಅಂಡರ್ಪಾಸ್ ಬಳಿ ಮೇಲ್ಸೇತುವೆ ಮಾಡಿಕೊಡುವವರೆಗೂ ಕದಲಲ್ಲ ಎನ್ನುತ್ತಾ ಮೈಸೂರು-ಬೆಂಗಳೂರು ರಸ್ತೆಯನ್ನು ತಡೆದು ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಈ ನಡುವೆ ಪ್ರತಿಭಟನಾಕಾರರ ವಿರುದ್ಧ ಪ್ರಯಾಣಿಕರೂ ಆಕ್ರೋಷ ಹೊರಹಾಕುತ್ತಿದ್ದರು. ಏನೇ ಮಾಡಿ ಗ್ರಾಮಸ್ಥರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಜಗ್ಗಲ್ಲ ಎನ್ನುವಂತಹ ಪರಿಸ್ಥಿತಿ ಎದುರಾದಾಗ ಪೊಲೀಸರು ಲಘುವಾಗಿ ಲಾಠಿ ರುಚಿ ತೋರಿಸಿದ್ದಾರೆ.
ಮಂಡ್ಯದ ಹನಕೆರೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ ಆದ ಹಿನ್ನೆಲೆಯಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಪ್ರತಿಭಟನೆಯಿಂದಾಗಿ ಎರಡು ಗಂಟೆಗೂ ಹೆಚ್ಚು ಕಾಲ ಮೈಸೂರು-ಬೆಂಗಳೂರು ಹೆದ್ದಾರಿ ಬಂದ್ ಆಗಿತ್ತು.
ಕೊನೆಗೆ ಬಲವಂತವಾಗಿ ಪ್ರತಿಭಟನಕಾರರನ್ನು ಪೊಲೀಸರು ಎಬ್ಬಿಸಿದ್ದು ಲಘು ಲಾಠಿ ಪ್ರಹಾರ ಮಾಡಿ ಪ್ರತಿಭಟನಾಕಾರರನ್ನು ಸ್ಥಳದಿಂದ ತೆರವು ಮಾಡಿದ್ದಾರೆ. ಈ ಸಂದರ್ಭ ರೈತ ಸಂಘದ ಮುಖಂಡ ಮಧುಚಂದನ್ರನ್ನು ಪೊಲೀಸರು ಬಲವಂತವಾಗಿ ಹೊತ್ತೊಯ್ದಿದ್ದಾರೆ.
ಇದರಿಂದ ಸಿಟ್ಟಾದ ಗ್ರಾಮಸ್ಥರು ಪೊಲೀಸರು ಹಾಗೂ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆದಿತ್ತು.