ವಿಜಯಪುರ: ಹೊಸವರ್ಷದಂದು ಕೊಲೆ ಮಾಡಿ ಮೃತದೇಹವನ್ನು ಬೆಂಗಳೂರಿನ ದೇವನಹಳ್ಳಿಯಲ್ಲಿ ಎಸೆದು ಹೋಗಿದ್ದರು. ಎಷ್ಟರ ಮಟ್ಟಿಗೆ ಇವರು ಕ್ರೂರತನ ತೋರಿಸಿದ್ದರು ಎಂದರೆ ಮುಖದ ಗುರುತೇ ಸಿಗಬಾರದು ಎಂದು ಮುಖವನ್ನು ಕೊಚ್ಚಿ ಹಾಕಿ ವಿರೂಪಗೊಳಿಸಿದ್ದರು.
ಮೃತ ವ್ಯಕ್ತಿಯ ಬಗ್ಗೆ ಯಾರಿಗೂ ಮಾಹಿತಿ ಸಿಗಬಾರದು ಎಂದು ಆತನನ್ನು ಬೆತ್ತಲೆ ಮಾಡಿ ಶವವನ್ನು ದೇವನ ಹಳ್ಳಿಯಲ್ಲಿ ಎಸೆದು ಹೋಗಿದ್ದರು. ಆದರೆ ಈ ಪ್ರಕರಣವನ್ನು ಪೊಲೀಸರು 20 ದಿನಗಳ ಒಳಗಾಗಿ ಭೇದಿಸಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ.
ಆಂಧ್ರದ ಅನಂತಪುರ ಮೂಲದ ಮುತ್ಯಾಲಪ್ಪ(40) ಎನ್ನುವಾತ ಕೊಲೆಯಾಗಿದ್ದ ಮೃತ ದುರ್ದೈವಿ. ಜಮೀನು ವ್ಯಾಜ್ಯ ಇದ್ದ ಹಿನ್ನೆಲೆಯಲ್ಲಿ ತಲೆ ಮತ್ತು ಕೈ ಬೆರಳುಗಳನ್ನ ಜಜ್ಜಿ ಆರೋಪಿಗಳು ಕೊಲೆ ಮಾಡಿದ್ದರು. ಆಧಾರ್ ಕಾರ್ಡಿನಲ್ಲೂ ಮೃತನ ಗುರುತು ಸಿಗದಂತೆ ಈ ಖದೀಮರು ಮುಖ ತಲೆ ಬೆರಳುಗಳನ್ನ ಜಜ್ಜಿದ್ದರು.
ಆಂಧ್ರದ ಅನಂತಪುರದಲ್ಲಿ ಕೊಲೆ ಮಾಡಿ ನಂತರ ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ ಬಳಿ ಮುತ್ಯಾಲಪ್ಪರ ಮೃತದೇಹವನ್ನು ಈ ಪಾಪಿಗಳು ಎಸೆದು ಹೋಗಿದ್ದರು. ಮೃತದೇಹ ಪತ್ತೆಯಾದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸಾಕಷ್ಟು ಆಯಾಮಗಳಲ್ಲಿ ತನಿಖೆ ನಡೆಸಿ ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ಮಾಡಿ ಆರೋಪಿಗಳನ್ನು ಗುರುತಿಸಿದ ದೇವನಹಳ್ಳಿ ತಾಲೂಕಿನ ವಿಜಯಪುರ ಠಾಣೆಯ ಪೊಲೀಸರು ಇದೀಗ ಆಂಧ್ರದಿಂದ ಆರೋಪಿಗಳನ್ನ ಬಂಧಿಸಿ ಕರೆತಂದಿದ್ದಾರೆ.
ಕೊಲೆ ನಡೆದದ್ದು ಹೇಗೆ?
ಜಮೀನು ವಿವಾದ ಸಂಬಂಧ ಮಾತುಕತೆಗೆ ಎಂದು ಆರೋಪಿಗಳು ತಮ್ಮ ಚಿಕ್ಕಪ್ಪನನ್ನ ಕರೆದಿದ್ದರು. ಈ ವೇಳೆ ಜಮೀನು ವಿವಾದದ ಮಾತುಕತೆ ವಿಕೋಪಕ್ಕೆ ತಿರುಗಿದ್ದು ಮಾತಿನ ಚಕಮಕಿ ಶುರುವಾಗಿದೆ. ಆಗ ಸಿಟ್ಟಿಗೆದ್ದ ಆರೋಪಿಗಳು ತಮ್ಮ ಚಿಕ್ಕಪ್ಪ ಮುತ್ಯಾಲಪ್ಪನ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ.
ನಾಗೇಶ್ ಸೋಮಶೇಖರ್ ಮತ್ತು ಓರ್ವ ಬಾಲಪರಾಧಿ ಸೇರಿ ಮೂವರು ಕೊಲೆ ಮಾಡಿದ್ದಾರೆ. ಹತ್ಯೆ ಮಾಡಿದ ನಂತರ ಮೃತದೇಹ ಗುರುತು ಸಿಗಬಾರದು ಎಂದು ತಲೆ ಕೈ ಕಾಲು ಜಜ್ಜಿ ವಿಕೃತಿ ಮೆರೆದಿದ್ದಾರೆ. ನಂತರ ಕಾರಿನಲ್ಲಿ ಆಂಧ್ರದಿಂದ ದೇವನಹಳ್ಳಿ ಬಳಿಗೆ ಕರೆತಂದು ನಿರ್ಜನ ಪ್ರದೇಶದಲ್ಲಿ ಮೃತದೇಹವನ್ನು ಆರೋಪಿಗಳು ಎಸೆದಿದ್ದಾರೆ.
ನಾವು ಯಾವುದೇ ಸಾಕ್ಷ್ಯ ಉಳಿಸಿಲ್ಲ. ಹೀಗಾಗಿ ಪೊಲೀಸರಿಂದ ಪತ್ತೆ ಮಾಡಲು ಆಗಲ್ಲ ಅಂತ ಆರೋಪಿಗಳು ಅಂದುಕೊಂಡಿದ್ದರು ಕಾಣುತ್ತೆ. ಆದರೆ ಚಾಣಾಕ್ಷ ಪೋಲೀಸರು ಕೊಲೆ ನಡೆದ 20 ದಿನಗಳಲ್ಲೆ ಹಂತಕರ ಹೆಡೆಮುರಿ ಕಟ್ಟಿ ಅಂದರ್ ಮಾಡಿದ್ದಾರೆ.