ನವದೆಹಲಿ: ಕರೊನಾ ಮಹಾಮಾರಿ ವಿರುದ್ಧದ ಜಗತ್ತಿನ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಚಾಲನೆ ನೀಡಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಲಸಿಕೆ ಅಭಿಯಾನ ಉದ್ಘಾಟಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಇಡೀ ವಿಶ್ವವೇ ಇಂದು ಭಾರತದ ಕಡೆ ತಿರುಗಿ ನೋಡುತ್ತಿದೆ. ಲಸಿಕೆ ಯಾವಾಗ ದೊರೆಯುತ್ತದೆ ಎಂದು ಎಲ್ಲರೂ ಕೇಳುತ್ತಿದ್ದರು. ಇದೀಗ ಅದು ದೊರೆತಿದೆ. ಈ ಸಂದರ್ಭದಲ್ಲಿ ದೇಶವಾಸಿಗಳಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.
ಸಾಮಾನ್ಯವಾಗಿ ಒಂದು ಲಸಿಕೆ ಕಂಡುಹಿಡಿಯಲು ಹಲವು ವರ್ಷಗಳು ಬೇಕಾಗುತ್ತಿತ್ತು. ಆದರೆ, ಕೆಲವೇ ಸಮಯದಲ್ಲಿ ಒಂದಲ್ಲ, ಎರಡು ದೇಶಿ ನಿರ್ಮಿತ (ಮೇಡ್ ಇನ್ ಇಂಡಿಯಾ) ಲಸಿಕೆಗಳು ತಯಾರಾಗಿವೆ. ಇದೇ ವೇಳೆ ಇತರೆ ಲಸಿಕೆಗಳ ಅಭಿವೃದ್ಧಿ ವೇಗವಾಗಿ ನಡೆಯುತ್ತಿದೆ ಎಂದು ಪ್ರಧಾನಿ ತಿಳಿಸಿದರು.
ಎರಡು ಡೋಸ್ ಕರೊನಾ ಲಸಿಕೆ ತುಂಬಾ ಪ್ರಮುಖವಾದದ್ದು ಎಂದು ದೇಶದ ಜನತೆಗೆ ನೆನಪು ಮಾಡಲು ಬಯಸುತ್ತೇನೆ. ಎರಡು ಲಸಿಕೆಗಳನ್ನು ಒಂದು ತಿಂಗಳ ಅಂತರದಲ್ಲಿ ತೆಗೆದುಕೊಳ್ಳಲು ತಜ್ಞರು ಸಲಹೆ ನೀಡಿದ್ದಾರೆ. ಮೊದಲ ಡೋಸ್ ಪಡೆದ ಬಳಿಕ ಮಾಸ್ಕ್ ತೆಗೆಯುವುದಾಗಲಿ ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವ ತಪ್ಪನ್ನು ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಏಕೆಂದರೆ ಎರಡನೇ ಡೋಸ್ ತೆಗೆದುಕೊಂಡ ಬಳಿಕ ಇಮ್ಯುನಿಟಿ ಬೆಳವಣಿಗೆಯಾಗುತ್ತದೆ ಎಂದು ಪ್ರಧಾನಿ ಹೇಳಿದರು.
ಇತಿಹಾಸದಲ್ಲೇ ಇಂತಹ ಅತಿದೊಡ್ಡ ಲಸಿಕೆ ಅಭಿಯಾನವನ್ನು ಎಂದಿಗೂ ಮಾಡಿರಲಿಲ್ಲ. ಮೂರು ಕೋಟಿಗಿಂತ ಕಡಿಮೆ ಜನಸಂಖ್ಯೆ ಇರುವ 100ಕ್ಕೂ ಹೆಚ್ಚು ದೇಶಗಳಿವೆ. ಆದರೆ, ಭಾರತ ಮೊದಲ ಹಂತದಲ್ಲೇ ಮೂರು ಕೋಟಿ ಜನರಿಗೆ ಲಸಿಕೆ ನೀಡುತ್ತಿದೆ. ಎರಡನೇ ಹಂತದಲ್ಲಿ 30 ಕೋಟಿ ಜನರಿಗೆ ನೀಡಲಾಗುವುದು ಎಂದರು.
ಇಂದು ನಾವು ಕಳೆದ ವರ್ಷವನ್ನು ನೋಡಿದಾಗ, ಒಬ್ಬ ವ್ಯಕ್ತಿಯಾಗಿ, ಕುಟುಂಬವಾಗಿ ಮತ್ತು ರಾಷ್ಟ್ರವಾಗಿ ನಾವು ಬಹಳಷ್ಟು ಕಲಿತಿದ್ದೇವೆ ಎಂದು ನಮಗೆ ತಿಳಿದಿದೆ. ಈ ರೋಗ ಜನರನ್ನು ಅವರ ಕುಟುಂಬದಿಂದ ದೂರ ಇಟ್ಟಿತು. ತಾಯಂದಿರು ದೂರವಿದ್ದ ತಮ್ಮ ಮಕ್ಕಳಿಗಾಗಿ ಕಣ್ಣೀರು ಸುರಿಸಿದರು. ಆಸ್ಪತ್ರೆಗೆ ದಾಖಲಾದ ಹಿರಿಯರನ್ನು ಭೇಟಿ ಮಾಡಲು ಕೆಲವರಿಗೆ ಸಾಧ್ಯವಾಗಲಿಲ್ಲ. ಮೃತಪಟ್ಟವರ ಅಂತ್ಯಸಂಸ್ಕಾರವನ್ನು ವಿಧಿವಿಧಾನದಂತೆ ಮಾಡಲಾಗಲಿಲ್ಲ ಎಂದು ಪ್ರಧಾನಿ ಭಾವುಕರಾದರು.
ಕರೊನಾ ಸಾಂಕ್ರಮಿಕ ಸಮಯದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಕರೊನಾ ವಿರುದ್ಧ ಮುಂಚೂಣಿಯಲ್ಲಿ ಹೋರಾಡಿದವರು ಎದುರಿಸಿದ ಕಷ್ಟಗಳನ್ನು ನೆನೆದು ಪ್ರಧಾನಿ ಮೋದಿ ಭಾವುಕರಾದರು.
#WATCH | PM Narendra Modi gets emotional while talking about the hardships faced by healthcare and frontline workers during the pandemic. pic.twitter.com/B0YQsqtSgW
— ANI (@ANI) January 16, 2021
ಕರೊನಾ ವಿರುದ್ಧ ಹೋರಾಟದ ಅನೇಕ ಹಂತಗಳಲ್ಲಿ ನಾವು ಜಗತ್ತಿಗೆ ಉದಾಹರಣೆಯಾಗಿ ನಿಂತಿದ್ದೇವೆ. ಕರೊನಾ ಉಚ್ಛ್ರಾಯ ಸ್ಥಿತಿಯಲ್ಲಿರುವಾಗ ತಮ್ಮ ದೇಶದ ಪ್ರಜೆಗಳನ್ನು ಚೀನಾದಿಂದ ವಾಪಸ್ಸು ಕರೆಸಿಕೊಳ್ಳಲು ಇತರೆ ದೇಶಗಳು ಚಿಂತಿಸುತ್ತಿದ್ದಾಗ ನಾವು ವಂದೇ ಭಾರತ್ ಮಿಷನ್ ಅಡಿಯಲ್ಲಿ ನಮ್ಮ ಪ್ರಜೆಗಳನ್ನು ಮಾತ್ರವಲ್ಲದೇ ಇತರೆ ದೇಶದ ಪ್ರಜೆಗಳನ್ನು ಕರೆತಂದವು ಎಂದರು.