ನವದೆಹಲಿ: ಲಾಕ್ಡೌನ್ ಎರಡನೇ ಅವಧಿ ಮೇ 3ಕ್ಕೆ ಮುಕ್ತಾಯ ಆಗಲಿದೆ. ಆದರೆ ದೇಶದಲ್ಲಿ ಇನ್ನೂ ಅನೇಕ ರಾಜ್ಯಗಳಲ್ಲಿ ಕರೊನಾ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಹೀಗಿರುವಾಗ ಲಾಕ್ಡೌನ್ ಮುಂದುವರಿಸಬೇಕಾ? ಇನ್ನೆಷ್ಟು ಸಡಿಲಿಕೆ ಮಾಡಬಹುದು ಎಂಬಿತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಇಂದು ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.
ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಇನ್ನುಳಿದ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಗೃಹ ಸಚಿವ ಅಮಿತ್ ಷಾ ಕೂಡ ಉಪಸ್ಥಿತರಿದ್ದರು.
ಈ ವೇಳೆ ನರೇಂದ್ರ ಮೋದಿಯವರು ಕರೊನಾ ಸೋಂಕು ನಿಯಂತ್ರಣಕ್ಕೆ ಲಾಕ್ಡೌನ್ನಿಂದ ತುಂಬ ಸಹಾಯವಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ, ಕರೊನಾ ವಿರುದ್ಧ ಹೋರಾಟದಲ್ಲಿ ಕೇಂದ್ರದೊಂದಿಗೆ ಎಲ್ಲ ರಾಜ್ಯಗಳೂ ಒಗ್ಗಟ್ಟಾಗಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹಾಗೇ ಆಯಾ ರಾಜ್ಯಗಳಲ್ಲಿ ಸಾರ್ವಜನಿಕರ ಆರೋಗ್ಯ, ಲಾಕ್ಡೌನ್ ಪರಿಸ್ಥಿತಿ ನಿಭಾಯಿಸುತ್ತಿರುವ ಎಲ್ಲ ಮುಖ್ಯಮಂತ್ರಿಗಳನ್ನೂ ಹೊಗಳಿದ್ದಾರೆ.
ಇನ್ನು ಈ ಸಭೆಯಲ್ಲಿ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್ಡೌನ್ ಮುಂದುವರಿಸಬೇಕು ಎಂದು ಮನವಿ ಮಾಡಿದ್ದಾರೆ. ಮೇ 16ರವರೆಗೆ ಲಾಕ್ಡೌನ್ ಇರಲಿ, ಆದರೆ ಮೇ 3ರ ಬಳಿಕ ಗ್ರೀನ್ ಜೋನ್ಗಳಲ್ಲಿ ಶೇ.50ರಷ್ಟು ಸಡಿಲಿಕೆ ಆದರೆ ಒಳಿತು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಲಾಕ್ಡೌನ್ ಮೇ 3ರ ನಂತರವೂ ಮುಂದುವರಿಯುವುದು ಬಹುತೇಕ ಖಚಿತ ಎನ್ನಲಾಗಿದೆ.