ನವದೆಹಲಿ: ಚೀನಾದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಈವರೆಗೂ ಹತ್ತಿರ 50 ಸಾವಿರ ಪ್ರಕರಣಗಳು ದಾಖಲಾಗಿವೆ. ಈಗಾಗಲೇ ಭಾರತ ಕೊರೊನಾ ವೈರಸ್ ಹರಡದಂತೆ ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಪುನರುಚ್ಛರಿಸಿದ್ದಾರೆ.
ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ವಿಶ್ವಸಂಸ್ಥೆ ಘೋಷಿಸುವ ಮುನ್ನವೇ ಜನವರಿ 17ರ ಆರಂಭದಿಂದಲೂ ನಾವು ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ದೇಶಾದ್ಯಂತ ಪ್ರತ್ಯೇಕ ಬೆಡ್, ಮಾಸ್ಕ್ ಹಾಗೂ ವೆಂಟಿಲೇಟರ್ಗಳನ್ನು ತೆರೆಯುವಂತೆ ಆಯಾ ರಾಜ್ಯಗಳಿಗೆ ಸಲಹಾ ಸೂಚನೆ ನೀಡಲಾಗಿದೆ. ವೈರಸ್ ಹರಡಿದ ಬೆನ್ನಲ್ಲೇ ನಾವು ಪ್ರವಾಸ ಸಲಹೆಯನ್ನೂ ನೀಡಿದ್ದೇವೆ ಎಂದು ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈವರೆಗೂ ಚೀನಾದಲ್ಲಿ ವೈರಸ್ ಕಾರಣದಿಂದಾಗಿ 1,310 ಮಂದಿ ಸಾವಿಗೀಡಾಗಿದ್ದಾರೆ. ಹಾಂಕ್ಕಾಂಗ್ ಮತ್ತು ಫಿಲಿಪೈನ್ಸ್ಗಳಲ್ಲಿ ತಲಾ ಒಬ್ಬೊಬ್ಬರು ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಇದೆ. ಭಾರತದಲ್ಲೂ ಕೇರಳದಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿದ್ದು, ಅದೃಷ್ಟವಶಾತ್ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಧಾನಿ ಮೋದಿ ಅವರು ವೈಯಕ್ತಿಕವಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್ ಭೀಕರತೆ ಸೃಷ್ಟಿಸದಂತೆ ತಡೆಯಲು ಎಲ್ಲ ರೀತಿಯ ಮಾರ್ಗೊಪಾಯಗಳನ್ನು ಅನುಸರಿಸಲಾಗುತ್ತಿದೆ. ಚೀನಾ, ಥಾಯ್ಲೆಂಡ್, ಹಾಂಕ್ಕಾಂಗ್, ಸಿಂಗಪೊರ್, ಜಪಾನ್ ಮತ್ತು ದಕ್ಷಿಣ ಕೊರಿಯಾದಿಂದ ಬರುವ ಪ್ರಯಾಣಿಕರನ್ನು ದೇಶದ 21 ವಿಮಾನ ನಿಲ್ದಾಣಗಳಲ್ಲಿಯೂ ಪರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದರು.
ಸುಮಾರು 2.51 ಲಕ್ಷ ಮಂದಿಯನ್ನು ಈವರೆಗೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ಕೇವಲ 1,765 ಮಂದಿಯ ರಕ್ತದ ಮಾದರಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಅಂಶವನ್ನು ತೋರಿದೆ. ವೈರಸ್ ಹರಡಿದ ಬೆನ್ನಲ್ಲೇ ಚೀನಾದ ವುಹಾನ್ನಿಂದ ಭಾರತಕ್ಕೆ ಬಂದಿಳಿದಿರುವ 645 ಭಾರತೀಯರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೂ, ಅವರನ್ನು ಪರಿವೀಕ್ಷಣೆಯಲ್ಲಿ ಇಡಲಾಗಿದೆ. ಹಾಗೇ ಮಾನವೀಯ ದೃಷ್ಟಿಯಿಂದ ಚೀನಾಗೆ ಅಗತ್ಯವಾದ ನೆರವನ್ನು ಒದಗಿಸಲಿದ್ದೇವೆ ಎಂದು ಹೇಳಿದರು. (ಏಜೆನ್ಸೀಸ್)