ಮಂಗಳೂರು: ಕರಾವಳಿ, ಮಲೆನಾಡಿನಲ್ಲಿ ಬಾಳೆಕಾಯಿ ಹುಡಿ(ಬಾಕಾಹು) ಕ್ರಾಂತಿ ಆಗಿರುವುದು ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ಕೂಡಾ ಬಂದಿದೆ.
ಆಕಾಶವಾಣಿಯ ತಮ್ಮ ಮನ್ ಕೀ ಬಾತ್ ಸರಣಿಯಲ್ಲಿ ಈ ಭಾನುವಾರ ಮೋದಿ ಮಹಿಳೆಯರು ಯಾವ ರೀತಿ ಈ ಬಾಕಾಹುವಿನಂದಾಗಿ ತಮ್ಮ ಆದಾಯ ಹೆಚ್ಚಿಸಿಕೊಳ್ಳುವುದು ಸಾಧ್ಯವಾಗಿದೆ ಎಂಬುದನ್ನು ವಿವರಿಸಿದ್ದಾರೆ.
ದೋಸೆ, ಗುಲಾಬ್ಜಾಮೂನ್ ಕೂಡಾ ಮಾಡುತ್ತಿರುವುದು ಗಮನಾರ್ಹ. ಅದರಲ್ಲೂ ಕರೊನಾ ವೇಳೆಯಲ್ಲೇ ಈ ಕೆಲಸ ಶುರುವಾಗಿದೆ. ಮಹಿಳೆಯರು ಬಾಕಾಹು ಹುಡಿಯ ದೋಸೆ, ಸಿಹಿತಿಂಡಿ ತಯಾರಿಸಿದ್ದೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅದರ ಫೊಟೊ ಶೇರ್ ಮಾಡಿದ್ದು, ಇದರಿಂದ ಬಹಳಷ್ಟು ಬೇಡಿಕೆ ಏರಿಕೆಯಾಗಿದೆ. ಈ ಹೊಸ ಆವಿಷ್ಕಾರವನ್ನು ಮಾಡುವಲ್ಲಿ ಮಹಿಳೆಯರೇ ಮುಂದಿರುವುದು ಅನೇಕರಿಗೆ ಪ್ರೇರಣೆಯಾಗಲಿದೆ ಎಂದು ಮೋದಿ ಹೇಳಿಕೊಂಡಿದ್ದಾರೆ.
ಕೇರಳದಲ್ಲಿ ಮಕ್ಕಳ ಪೌಷ್ಠಿಕ ಆಹಾರಕ್ಕೆ ಮಾತ್ರ ಬಳಕೆಯಾಗುತ್ತಿದ್ದ ಬಾಳೆಕಾಯಿ ಹುಡಿಯನ್ನು ಕರಾವಳಿಯಲ್ಲಿ ಪಸರಿಸುವುದಕ್ಕೆ ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆಯವರ ಅಭಿಯಾನ ಕಾರಣವಾಗಿತ್ತು. ಅವರು ಈ ಹುಡಿ ಮಾಡುವ ಕ್ರಮವನ್ನು ಕೇರಳದ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳಿಂದ ಪಡೆಯಲು ತುಮಕೂರಿನ ನಯನಾ ಆನಂದ್ ಎನ್ನುವ ಮಹಿಳೆಗೆ ಪ್ರೇರಣೆಯಾಗಿದ್ದರು. ಆ ಬಳಿಕ ನಯನಾ ಯಶಸ್ವಿಯಾಗಿ ಬಾಕಾಹು ತಯಾರಿಸಿದ್ದೇ ಅಲ್ಲದೆ ಅದರಿಂದ ಹಲವು ವಿಧದ ತಿಂಡಿ ತಯಾರಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಿ ಈಗ ಮಲೆನಾಡು ಕರಾವಳಿಯ ಹಲವೆಡೆ ಮಹಿಳೆಯರು ಬಾಕಾಹು ತಯಾರಿಸುವಂತಾಗಿದೆ.
ಈ ಬೆಳವಣಿಗೆ ಬಗ್ಗೆ ವಿಜಯವಾಣಿ ಸಹಿತ ಹಲವು ಮಾಧ್ಯಮಗಳು ಲೇಖನ, ಸುದ್ದಿ ಪ್ರಕಟಿಸಿವೆ.