ನವದೆಹಲಿ : ಟ್ವಿಟರ್ ವಿರುದ್ಧ ಕೇಂದ್ರ ಸರ್ಕಾರ ಕೆಂಗಣ್ಣು ತೋರಿರುವ ಬೆನ್ನಲ್ಲೇ ದೆಹಲಿಯ ವಕೀಲರೊಬ್ಬರು ಟ್ವಿಟರ್ ಇಂಡಿಯಾ ಮತ್ತು ಟ್ವಿಟರ್ ಇಂಕ್ಗೆ ಭಾರತದ ಹೊಸ ಐಟಿ ನಿಯಮಗಳನ್ನು ಪಾಲಿಸುವಂತೆ ನಿರ್ದೇಶನ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಟ್ವಿಟರ್ ತನ್ನ ಬಳಕೆದಾರರ ದೂರುಗಳನ್ನು ನಿರ್ವಹಿಸಲು ಭಾರತದಲ್ಲೇ ವಾಸಿಸುವ ಅಧಿಕಾರಿಯೊಬ್ಬರನ್ನು ನೇಮಕಗೊಳಿಸಲು ಕೇಂದ್ರ ಸರ್ಕಾರ ಕೂಡಲೇ ಆದೇಶ ಹೊರಡಿಸಬೇಕೆಂದು ಸರ್ಕಾರವನ್ನೂ ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ಮಾಡಲಾಗಿದೆ.
ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವಕೀಲರಾದ ಅಮಿತ್ ಆಚಾರ್ಯ ಅವರು ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ, ಫೆಬ್ರವರಿ 25 ರಂದು ಕೇಂದ್ರ ಐಟಿ ಸಚಿವಾಲಯ ಜಾರಿಗೊಳಿಸಿದ ಇನ್ಫರ್ಮೇಷನ್ ಟೆಕ್ನಾಲಜಿ (ಇಂಟರ್ಮೀಡಿಯರಿ ಗೈಡ್ಲೈನ್ಸ್ ಅಂಡ್ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ರೂಲ್ಸ್, 2021 ಅನ್ನು ಟ್ವಿಟರ್ ಪಾಲಿಸುತ್ತಿಲ್ಲ ಎಂದು ಹೇಳಲಾಗಿದೆ. ಸ್ವತಃ ಟ್ವಿಟರ್ ಬಳಕೆದಾರರಾದ ಅರ್ಜಿದಾರರು ಇಬ್ಬರು ವ್ಯಕ್ತಿಗಳ ಮಾನಹಾನಿ ಮಾಡುವಂತಹ ಸುಳ್ಳು ಟ್ವೀಟ್ಗಳ ಬಗ್ಗೆ ದೂರು ನೀಡಲು ಪ್ರಯತ್ನಿಸಿದಾಗ, ಯಾವುದೇ ಅಧಿಕಾರಿಯ ವಿವರಗಳನ್ನು ಟ್ವಿಟರ್ ನೀಡಿಲ್ಲದಿರುವುದು ಕಂಡುಬಂತು ಎನ್ನಲಾಗಿದೆ.
ಇದನ್ನೂ ಓದಿ: ಸುಖಾಸುಮ್ಮನೆ ಮಾತನಾಡಬೇಡಿ, ದೇಶದ ಕಾನೂನು ಪಾಲಿಸಿ : ಟ್ವಿಟರ್ಗೆ ಸರ್ಕಾರದ ತಿರುಗೇಟು
ಟ್ವಿಟರ್ ಸಿಗ್ನಿಫಿಕೆಂಟ್ ಸೋಷಿಯಲ್ ಮೀಡಿಯ ಇಂಟರ್ಮೀಡಿಯರಿ (ಎಸ್ಎಸ್ಎಂಐ) ಆಗಿರುವ ಕಾರಣ ಕೇಂದ್ರ ಸರ್ಕಾರ ಮೇ 26 ರಂದು ಎಸ್ಎಸ್ಎಂಐಗಳಿಗೆ ಹೊಸ ಐಟಿ ನಿಯಮಗಳನ್ನು ಪಾಲಿಸುವಂತೆ ಜಾರಿ ಮಾಡಿರುವ ಆದೇಶವನ್ನು ಪಾಲಿಸಬೇಕು ಎಂದಿರುವ ಅರ್ಜಿದಾರರು, ನಿಯಮ 4(ಸಿ) ಅನ್ವಯ ಪ್ರತಿ ಎಸ್ಎಸ್ಎಂಐ ಓರ್ವ ರೆಸಿಡೆಂಟ್ ಗ್ರೀವೆನ್ಸ್ ಆಫೀಸರ್ಅನ್ನು ಬಳಕೆದಾರರ ದೂರುಗಳನ್ನು ಕೇಳಿ ಇತ್ಯರ್ಥ ಮಾಡಲು ನೇಮಕ ಮಾಡಬೇಕು. ಆದರೆ ಟ್ವಿಟರ್ ಇಂಡಿಯಾ ಈ ಅಧಿಕಾರಿಯನ್ನಾಗಲೀ, ನಿಯಮಗಳು ಹೇಳುವಂತೆ ನೋಡಲ್ ಆಫಿಸರ್ ಅಥವಾ ಚೀಫ್ ಕಂಪ್ಲೈಯನ್ಸ್ ಆಫೀಸರನ್ನಾಗಲೀ ನೇಮಕ ಮಾಡಿಲ್ಲ ಎಂದಿದ್ದಾರೆ. (ಏಜೆನ್ಸೀಸ್)
ಕೋವಿಡ್ ಹೆಚ್ಚಿರುವ ಜಿಲ್ಲೆಗಳಿಗೆ ಸಿಎಂ ಭೇಟಿ; ಇಂದು ತುಮಕೂರಿಗೆ ಬಿಎಸ್ವೈ