ಅನಂತನಾಗ್: ಪರಿಸರ ಸ್ನೇಹಿ ಕಾರ್ಯಕ್ರಮದ ಭಾಗವಾಗಿ, ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಹಿಲ್ಲರ್ ಶಹಾಬಾದ್ ಬ್ಲಾಕ್ನಲ್ಲಿರುವ ಸದಿವಾರದ ದೂರದ ಗ್ರಾಮ ಪಂಚಾಯತಿಗೆ ಪ್ಲಾಸ್ಟಿಕ್ ಕೊಟ್ಟರೆ ಚಿನ್ನದ ನಾಣ್ಯವನ್ನು ನೀಡುತ್ತಿದೆ.
ಈ ಯೋಜನೆಯಡಿ ಯಾರಾದರೂ 20 ಕ್ವಿಂಟಾಲ್ ಪ್ಲಾಸ್ಟಿಕ್ ತ್ಯಾಜ್ಯವನ್ನು ನೀಡಿದರೆ,ಆ ಗ್ರಾಮ ಪಂಚಾಯತ್ ಅವರಿಗೆ ಒಂದು ಚಿನ್ನದ ನಾಣ್ಯವನ್ನು ನೀಡುತ್ತದೆ.
ವೃತ್ತಿಯಲ್ಲಿ ವಕೀಲರಾಗಿರುವ ಸಾದಿವಾರ ಗ್ರಾಮದ ಸರಪಂಚ ಫಾರೂಕ್ ಅಹ್ಮದ್ ಗನಾಯ್ ಕಾಶ್ಮೀರ ಕಣಿವೆಯಲ್ಲಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅಭಿಯಾನ ಆರಂಭವಾದ 15 ದಿನಗಳಲ್ಲಿ ಇಡೀ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಎಂದು ಘೋಷಿಸಲಾಯಿತು. ಅಭಿಯಾನವು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಮತ್ತು ಇತರ ಪಂಚಾಯತ್ಗಳು ಸಹ ಇದೇ ಮಾದರಿಯನ್ನು ಅಳವಡಿಸಿಕೊಂಡಿವೆ.
ವಕೀಲ ಫಾರೂಕ್ ಅಹ್ಮದ್ ಗನಾಯ್ “ನಾನು ನನ್ನ ಗ್ರಾಮದಲ್ಲಿ ಬಹುಮಾನಕ್ಕಾಗಿ ಪ್ಲಾಸ್ಟಿಕ್ ನೀಡುವಂತೆ ಘೋಷಣೆ ಮಾಡಿದೆ. ನದಿ, ತೊರೆಗಳ ಸ್ವಚ್ಛತೆಗೆ ನಾನೇ ಮುಂದಾಗಿದ್ದೇನೆ. ಈಗ ಗ್ರಾಮದ ಎಲ್ಲರೂ ಸೈಟ್ಗಳನ್ನು ಕಸ ಮುಕ್ತ ಮಾಡಲು ನಮಗೆ ಸಹಾಯ ಮಾಡಿದರು.
ರಸ್ತೆ, ಬೀದಿಗಳಲ್ಲಿ ರಾಶಿಗಟ್ಟಲೆ ಪ್ಲಾಸ್ಟಿಕ್ ಎಸೆದಿದ್ದ ಗ್ರಾಮ ಈಗ ಸಂಪೂರ್ಣ ಸ್ವಚ್ಛವಾಗಿದ್ದು, ಸಂಗ್ರಹವಾದ ಪ್ಲಾಸ್ಟಿಕ್ ಅನ್ನು ಪಂಚಾಯಿತಿ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಈ ಗ್ರಾಮವು ಎಲ್ಲಾ ಗ್ರಾಮಗಳಿಗೆ ಮಾದರಿಯಾಗಿದ್ದು ಕೇಂದ್ರಾಡಳಿತ ಪ್ರದೇಶದ ಪ್ರತಿಯೊಂದು ಹಳ್ಳಿಯಲ್ಲೂ ಇದೇ ಕಲ್ಪನೆಯನ್ನು ಪುನರಾವರ್ತಿಸಲು ಸರ್ಕಾರ ಪ್ರಯತ್ನಿಸುತ್ತಿದೆ.
ಸಡಿವಾರ ಯೂತ್ ಕ್ಲಬ್ನ ಅಧ್ಯಕ್ಷ ಶಕೀಲ್ ವಾನಿ “ಕಸದ ರಾಶಿಗಳು, ನದಿಗಳಲ್ಲಿ ಮತ್ತು ರಸ್ತೆಗಳಲ್ಲಿ ಇರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲು ಪಂಚಾಯತ್ ತಾಕೀತು ಮಾಡಿದಾಗ ಎಲ್ಲಾ ಸ್ಥಳೀಯರು ಆಸಕ್ತಿ ತೋರಿಸಿದರು” ಎಂದರು.
ಅನಂತನಾಗ್ ಜಿಲ್ಲೆಯ ಅಭಿವೃದ್ಧಿ ಸಹಾಯಕ ಆಯುಕ್ತ ರಿಯಾಜ್ ಅಹ್ಮದ್ “ಸ್ವಚ್ಛ ಭಾರತ ಅಭಿಯಾನ 2ರ ಅಡಿ ನಮ್ಮ ಗ್ರಾಮವನ್ನು ಪ್ಲಾಸ್ಟಿಕ್ ಮತ್ತು ಕಸಮುಕ್ತವನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಸದಿವಾರ ಪಂಚಾಯತ್ ಈ ಮಾದರಿಯನ್ನು ಪ್ರಾರಂಭಿಸಿದೆ. ಇದು ಸರ್ಕಾರದ ಯೋಜನೆಯಲ್ಲ” ಎಂದು ಹೇಳಿದರು. (ಏಜೆನ್ಸೀಸ್)