ಖಾನಾಪುರ: ತಾಲೂಕಿನ ಉಚವಡೆ ಕ್ರಾಸ್ನ ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿ ಬಳಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ತಂಡವನ್ನು ಶನಿವಾರ ಪತ್ತೆ ಹಚ್ಚಿದ ಖಾನಾಪುರ ಪೊಲೀಸರು ನಾಲ್ವರನ್ನು ಬಂಧಿಸಿ, ಅವರಿಂದ ಒಂದು ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ನಡೆದ ದಾಳಿಯಲ್ಲಿ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆ ಚಂದಗಡ ತಾಲೂಕಿನ ಕಾಲಕುಂದ್ರಿ ಗ್ರಾಮದ ನಿವಾಸಿ ತುಳಸೀದಾಸ ಜೋಶಿ, ಬೆಳಗಾವಿ ನಗರದ ವಡಗಾಂವ ನಿವಾಸಿ ಸಚಿನ ಢವಳಿ, ಧಾರವಾಡ ಜಿಲ್ಲೆ ಅಣ್ಣಿಗೇರಿ ನಿವಾಸಿ ಉಮೇಶ ಬಿಳಿಯಲಿ ಮತ್ತು ಗದಗ ಜಿಲ್ಲೆ ಅಂತೂರು-ಬೆಂತೂರು ಗ್ರಾಮದ ನಿವಾಸಿ ಗುರುವಯ್ಯ ಲಗಮಯ್ಯನವರ ಎಂಬಾತರನ್ನು ಬಂಧಿಸಲಾಗಿದೆ.
ಬಂಧಿತರಿಂದ ಒಂದು ಸೆಮೀ ಅಟೋಮೆಟಿಕ್ ಪಿಸ್ತೂಲ್, ಮೂರು ಜೀವಂತ ಗುಂಡುಗಳು, ಒಂದು ಟಾಟಾ ಇಂಡಿಕಾ ಕಾರು, ಎರಡು ದ್ವಿಚಕ್ರ ವಾಹನ, 3 ಮೊಬೈಲ್ ಮತ್ತು 34 ಸಾವಿರ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಸಿಪಿಐ ಸುರೇಶ ಸಿಂಗಿ ಮಾಹಿತಿ ನೀಡಿದ್ದಾರೆ.