ಜೈಪುರ: ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿದ್ದು, ಬಣಗಳ ಬಲ ಪ್ರದರ್ಶನಕ್ಕೆ ಪೈಪೋಟಿ ಶುರುವಾಗಿದೆ. ಈ ನಡುವೆ, ಗೆಹ್ಲೋಟ್ ಸರ್ಕಾರ ವಿಶ್ವಾಸ ಮತ ಯಾಚಿಸಬೇಕು ಎಂದು ಸಚಿನ್ ಪೈಲಟ್ ಬೆಂಬಲಿಗರು ಆಗ್ರಹಿಸಿದ್ದಾರೆ. ಇದರೊಂದಿಗೆ ಆಡಳಿತಾರೂಢ ಪಕ್ಷದೊಳಗಿನ ಭಿನ್ನಮತದ ಬಿಕ್ಕಟ್ಟು ಇನ್ನಷ್ಟು ಬಲವಾಗಿದೆ.
ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಮೇಶ್ ಮೀನಾ ವಿಶ್ವಾಸ ಮತ ಯಾಚನೆಯ ಆಗ್ರಹ ಮಾಡಿದ್ದು, ಗೆಹ್ಲೋಟ್ ಸರ್ಕಾರದ ಬೆಂಬಲಕ್ಕೆ ಎಷ್ಟು ಶಾಸಕರಿದ್ದಾರೆ ಎಂಬುದು ಸಾಬೀತಾಗಿ ಬಿಡಲಿ. ಗೆಹ್ಲೋಟ್ ಅವರು ಹೇಳುವಂತೆ 109 ಶಾಸಕರು ಅವರ ಬೆಂಬಲಕ್ಕೆ ಇದ್ದಾರೆ ಎಂದಾದರೆ ಅದೂ ಬಹಿರಂಗವಾಗಿಬಿಡಲಿ ಎಂದು ಹೇಳಿದ್ದಾರೆ. ಪೈಲಟ್ ಬೆಂಬಲಿಗರ ಶಾಸಕರು ಸೋಮವಾರ ಮತ್ತು ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ರಾಜಕೀಯ ನಾಟಕದಲ್ಲಿ ಕ್ಷಣಕ್ಕೊಂದು ತಿರುವು; ಪತನದ ಅಂಚಿನಲ್ಲಿ ಗೆಹ್ಲೋಟ್ ಸರ್ಕಾರ
ಈ ನಡುವೆ, ಸೋಮವಾರವೇ ಕಾಂಗ್ರೆಸ್ ಶಾಸಕ ದೀಪೇಂದ್ರ ಸಿಂಗ್ ಶೇಖಾವತ್ ಕೂಡ ವಿಶ್ವಾಸ ಮತ ಯಾಚಿಸುವಂತೆ ಗೆಹ್ಲೋಟ್ ಅವರನ್ನು ಆಗ್ರಹಿಸಿದ್ದರು. ಇದರೊಂದಿಗೆ ಗೆಹ್ಲೋಟ್ ಸರ್ಕಾರ ವಿಶ್ವಾಸ ಮತಯಾಚಿಸಬೇಕೆಂಬ ಕೂಗಿಗೆ ಕೋರಸ್ ಸೇರತೊಡಗಿದೆ. (ಏಜೆನ್ಸೀಸ್)