ಶಿಕಾರಿಪುರ: ಭೀಕರ ಬರಗಾಲದ ನಡುವೆಯೂ ಆಶಾಕಿರಣವಾಗಿ ಬಂದಿದ್ದು ಶಾಶ್ವತ ನೀರಾವರಿ ಯೋಜನೆ ಅಡಿಯಲ್ಲಿ ಕೆರೆ ತುಂಬಿಸುವ ಯೋಜನೆ. ಕೆರೆಗಳಲ್ಲಿ ನೀರಿರುವ ಕಾರಣ ಮೀನುಗಾರರಿಗೆ ಅನುಕೂಲವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಸಮೀಪದ ಮದಗದ ಕೆರೆಯಲ್ಲಿ ಗುರುವಾರ ಮೀನು ಮರಿಗಳ ಬಿತ್ತನೆ ಮಾಡಿದ ಅವರು, ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಕೆರೆಗಳಿರುವ ತಾಲೂಕು ಸೊರಬ ಆಗಿತ್ತು. ಆದರೆ ಈಗ ಶಿಕಾರಿಪುರ ಮೊದಲ ಸ್ಥಾನದಲ್ಲಿದೆ. ಮೀನುಗಾರಿಕೆ ಸಹ ಕೃಷಿ. ಉದ್ಯೋಗ ನೀಡುತ್ತದೆ. ಬರಗಾಲದಿಂದ ಮೀನುಗಾರಿಕೆಗೆ ಬಹಳಷ್ಟು ಪೆಟ್ಟು ಬಿದ್ದಿದೆ. ಕೆರೆಗಳ ಟೆಂಡರ್ ಹಿಡಿದವರು ಮಳೆ ಬಾರದ ಕಾರಣ ಕಂಗಾಲಾಗಿದ್ದಾರೆ ಎಂದರು.
ಮೀನುಗಾರರು ಆಳವನ್ನು ಅಭ್ಯಾಸ ಮಾಡಿ ಸೂಕ್ತವಾದ ಸಲಕರಣೆಗಳೊಂದಿಗೆ ಕೆರೆಗಳಿಗೆ ಇಳಿಯಬೇಕು. ಈಜು ಗೊತ್ತಿರುವವರು, ಮೀನು ಹಿಡಿಯುವ ಅನುಭವವುಳ್ಳವರು ನಿಮ್ಮ ಜತೆಗಿರಬೇಕು. ಮತ್ಸೋದ್ಯಮದಿಂದ ದೇಶದಲ್ಲಿ ಕೋಟ್ಯಂತರ ಜನ ಬದುಕು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.
ಮೀನುಗಾರಿಕೆ ಸಲಕರಣೆ ಕಿಟ್ ಮತ್ತು ಪೈಬರ್ ಹರಿಗೋಲನ್ನು ವಿತರಿಸಲಾಯಿತು. ಮಲೆನಾಡು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಪ್ರಮುಖರಾದ ಎಚ್.ಟಿ.ಬಳಿಗಾರ್, ಪಿ.ರಾಮಯ್ಯ, ಗಿರೀಶ್, ಶಿವಕುಮಾರ್, ಡಾ. ವಿನಯ್ ಚನ್ನಪ್ಪ, ಜಮೀರ್ ಅಹ್ಮದ್ ಇತರರಿದ್ದರು.