ರೋಣ: ತಾಲೂಕಿನಾದ್ಯಂತ ಎರಡು ದಿನದಿಂದ ಆರಂಭಗೊಂಡಿರುವ ಜಿಟಿಜಿಟಿ ಮಳೆಗೆ ಜನರು ಒದ್ದೆ ಮುದ್ದೆಯಾಗಿದ್ದಾರೆ
.
ಹಲವು ದಿನಗಳಿಂದ ಎದುರು ನೋಡುತ್ತಿದ್ದ ರೈತರ ಮೊಗದಲ್ಲಿ ಬುಧವಾರ ಮಂದಹಾಸ ಮೂಡಿತ್ತು. ಬರದ ಛಾಯೆ ಆವರಿಸಿದ್ದ ರೋಣ ತಾಲೂಕಿನಲ್ಲಿ ದಿನವಿಡೀ ಮಳೆ ಸುರಿಯಿತು.
ಮಧ್ಯಾಹ್ನದ ಬಳಿಕ ಬಿರುಸು ಪಡೆದುಕೊಂಡ ಮಳೆ, ಸುಮಾರು ಅರ್ಧಗಂಟೆಗೂ ಹೆಚ್ಚು ಸಮಯ ಧಾರಾಕಾರವಾಗಿ ಸುರಿಯಿತು.
ತಾಲೂಕಿನ ಚವಡಿ, ಚಿಕ್ಕಮಣ್ಣೂರು, ಅಬ್ಬಿಗೇರಿ, ನೈನಾಪುರ, ಮಾಡಲಗೇರಿ, ಕುರಹಟ್ಟಿ, ಕೊತಬಾಳ, ತಳ್ಳಿಹಾಳ, ಮುಗಳಿ, ಇಟಗಿ, ಹೊಸಳ್ಳಿ, ಜಿಗಳೂರು, ಹಿರೇಹಾಳ, ಹೊನ್ನಿಗನೂರ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದೆ.
ಗ್ರಾಮೀಣ ಭಾಗದ ಮಕ್ಕಳಿಗೆ ತೊಂದರೆ: ಗ್ರಾಮೀಣ ಭಾಗಗಳಲ್ಲಿ ಶಾಲೆಗಳಿಗೆ ತೆರಳಲು ಸಮರ್ಪಕ ರಸ್ತೆಗಳಿಲ್ಲದ ಪರಿಣಾಮ ಮಳೆಯಿಂದ ಶಾಲಾ ಮಕ್ಕಳಿಗೆ ತೊಂದರೆಯಾಯಿತು. ಸರ್ಕಾರಿ, ಖಾಸಗಿ ಕಚೇರಿಗಳಿಗೆ ಆಗಮಿಸಿದ ಸಾರ್ವಜನಿಕರು ನಿರಂತರ ಮಳೆಯಿಂದ ಮಳೆಯಲ್ಲಿ ನೆನೆದುಕೊಂಡೇ ಮನೆ ಸೇರಿದರು.