ನವದೆಹಲಿ: ಭಾರತ ವಿಭಜನೆಯ ಮಾತುಗಳನ್ನಾಡುವ ಶಾರ್ಜಿಲ್ ಇಮಾಮ್ರಂತವರನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಬೇಕು ಎಂದು ಬಿಜೆಪಿ ಶಾಸಕ ಸಂಗೀತ್ ಸೋಮ್ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶಾಹೀನ್ ಬಾಘ್ನಲ್ಲಿ ಸಿಎಎ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಮಹಿಳೆಯರು ಯಾವುದೇ ಕೆಲಸದಲ್ಲಿಲ್ಲ. ಹೀಗಾಗಿ ಇಂತಹ ಪ್ರತಿಭಟನೆಗೆ ಹಣವನ್ನು ನೀಡುತ್ತಿರುವ ಮೂಲ ಯಾವುದು ಎಂಬುದನ್ನು ತನಿಖೆ ಮೂಲಕ ಪತ್ತೆ ಹಚ್ಚಬೇಕಿದೆ. ಹಾಗೇ ಶಾರ್ಜಿಲ್ ಇಮಾಮ್ರಂತೆ ದೇಶ ವಿಭಜನೆ ಮಾತಾಡುವವರನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಬೇಕಾಗಿದೆ ಎಂದರು.
ಅಂದಹಾಗೆ ಇಮಾಮ್, ಜೆಎನ್ಯು ಮಾಜಿ ವಿದ್ಯಾರ್ಥಿ. ಪ್ರತಿಭಟನಾ ವೇಳೆ ಅಸ್ಸಾಂ ಅನ್ನು ಭಾರತದಿಂದ ವಿಭಜಿಸಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಪೊಲೀಸ್ ಗಮನಕ್ಕೆ ಬಂದಿತ್ತು. ತಲೆಮರೆಸಿಕೊಂಡಿದ್ದ ಇಮಾಮ್ನನ್ನು ದೆಹಲಿ ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದರು.
ಗುರುವಾರವಷ್ಟೇ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಜಾಮಿಯಾ ಏರಿಯಾದಲ್ಲಿ ಪ್ರತಿಭಟನೆ ನಡೆಸುವಾಗ ವ್ಯಕ್ತಿಯೊಬ್ಬ ಪೊಲೀಸರ ಎದುರೇ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಇದಾದ ಒಂದು ದಿನದ ಬೆನ್ನಲ್ಲೇ ಶಾಸಕ ಸೋಮ್ ಹೇಳಿಕೆ ನೀಡಿರುವುದು ತೀವ್ರ ಚರ್ಚೆಗೆ ಗುರಿಯಾಗಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರಚೋದನೆಯಿಂದಲೇ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಈಗಾಗಲೇ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. (ಏಜೆನ್ಸೀಸ್)