ನವದೆಹಲಿ: ಕಳೆದ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಮೃತಪಟ್ಟವರು ಒಟ್ಟು 53 ಜನರು. ಪೊಲೀಸರು ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ದೋಷಾರೋಪ ಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಶಾಲೆಯ ಮುಖ್ಯಸ್ಥನೊಬ್ಬ ಎದುರಾಳಿ ಶಾಲೆಯ ಮೇಲೆ ದಾಳಿ ನಡೆಸಿದ್ದು, ತಬ್ಲಿಘಿ ಮುಖಂಡನ ಕೈವಾಡ ಹಾಗೂ ವಿವಾದಾತ್ಮಕ ಇಸ್ಲಾಂ ಧರ್ಮ ಪ್ರಚಾರಕ ಝಾಕೀರ್ ಹುಸೇನ್ ಹೆಸರೂ ಕೂಡ ಇದರಲ್ಲಿ ಕೇಳಿ ಬಂದಿತ್ತು. ಗಲಭೆಗೆ ಪ್ರತ್ಯಕ್ಷದರ್ಶಿಗಳಾಗಿದ್ದ ಹಲವರು ಪೊಲೀಸರಿಗೆ ನೀಡಿದ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರು ಬಿಚ್ಚಿಟ್ಟ ಕರಾಳ ಸತ್ಯವನ್ನು ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ; ಇಸ್ಲಾಂ ಪ್ರಚಾರಕನ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ; 3 ಹಳ್ಳಿಗಳಿಗೆ ದಿಗ್ಬಂಧನ; ಸೂಪರ್ ಸ್ಪ್ರೆಡರ್ ಭೀತಿ
ಫೆಬ್ರವರಿ 26ರಂದು ರಾತ್ರಿ 10.05 ನಿಮಿಷಕ್ಕೆ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಜನರ ಗುಂಪೊಂದು ವ್ಯಕ್ತಿಯೊಬ್ಬನನ್ನು ತಡೆದು ಆತನ ಬೈಕನ್ನು ಸುಟ್ಟು ಹಾಕಿದೆ ಎಂದು ಮಾಹಿತಿ ನೀಡುತ್ತಾನೆ. ನನ್ನನ್ನು ಕೊಲ್ಲಲು ಬಂದರು. ಆದರೆ, ಚರಂಡಿಗೆ ಜಿಗಿದು ಪಾರಾದೆ ಎಂದು ಆತ ಹೇಳುತ್ತಾನೆ. ಈ ಕರೆ ಮಾಡಿದ ವ್ಯಕ್ತಿಯನ್ನು ಗುರುತಿಸಿದ ಪೊಲೀಸರು ಮೂವರನ್ನು ಹತ್ಯೆ ಮಾಡಿದ ಗುಂಪನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಫೆ.24ರಂದು ಮನೆಗೆ ತೆರಳುತ್ತಿದ್ದಾಗ ಗಂಗಾ ವಿಹಾರದ ಬಳಿ ಗುಂಪೊಂದು ಎದುರಾಯಿತು. ಜೋರಾಗಿ ಬ್ರೇಕ್ ಹಾಕಿದ್ದರಿಂದ ಬೈಕ್ ಸ್ಕಿಡ್ ಆಗಿ ಬಿದ್ದೆ. ಸುಧಾರಿಸಿಕೊಂಡು ನೋಡುವಷ್ಟರಲ್ಲಿ ಬೈಕ್ ಅಲ್ಲಿರಲಿಲ್ಲ. ಇದನ್ನು ಪೊಲೀಸರಿಗೆ ತಿಳಿಸಲೆಂದು ಠಾಣೆಗೆ ಹೋದರೂ, ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ಮರುದಿನ ಬರಲು ಹೇಳಿದರು.
‘ಮರುದಿನ ನಾಲ್ಕು ಗಂಟೆಗೆ ಗೋಕಲ್ಪುರಿ ಪೊಲೀಸ್ ಠಾಣೆಯಿಂದ ಮನೆಗೆ ಮರಳುತ್ತಿದ್ದಾಗ ಗುಂಪೊಂದು ಬರುತ್ತಿದ್ದುದನ್ನು ನೋಡಿದೆ. ಅವರೆಲ್ಲ ಹೆಲ್ಮೆಟ್ ಧರಿಸಿದ್ದರು ಹಾಗೂ ಬಟ್ಟೆಯಿಂದ ಮುಖ ಮುಚ್ಚಿಕೊಂಡಿದ್ದರು. ಎದುರಿಗೆ ಬಂದವರ ಧರ್ಮವನ್ನು ಕೇಳುತ್ತಿದ್ದರು. ಮುಸ್ಲಿಮರಾಗಿದ್ದರೆ, ಕೊಂದು ಶವವನ್ನು ಚರಂಡಿಗೆ ಎಸೆಯುತ್ತಿದ್ದರು’ ಎಂದು ಹೇಳಿದ್ದಾನೆ.
ಇದನ್ನೂ ಓದಿ; ದೆಹಲಿ ಗಲಭೆಯಲ್ಲಿ ಝಾಕೀರ್ ನಾಯ್ಕ್ ಕೈವಾಡ…? ಭಾರತಕ್ಕೆ ಒಪ್ಪಿಸಲು ಮಲೇಷ್ಯಾಗೆ ಒತ್ತಡ
ಫೆ.26 ರಂದು ರಾತ್ರಿ ಬೈಕ್ ಹುಡುಕಲೆಂದು ಅದು ಕಳೆದು ಹೋಗಿದ್ದ ಭಾಗೀರಥಿ ವಿಹಾರದ ಚರಂಡಿ ಹೋಗಿದ್ದೆ. ಜನರ ಗುಂಪೊಂದು ಲೋನಿಯಿಂದ ಬರುತ್ತಿದ್ದ ವ್ಯಕ್ತಿಯನ್ನು ತಡೆದು ನಿಲ್ಲಿಸಿತ್ತು. ಆತ ಮುಸ್ಲಿಮನೆಂದು ತಿಳದು, ಕಲ್ಲು, ಕಬ್ಬಿಣದ ರಾಡ್, ಮಾರಕಾಸ್ತ್ರಗಳಿಂದ ಹೊಡೆದು ಕೊಂದು ಹಾಕಿತು. ಬಳಿಕ ಶವವನ್ನು ಚರಂಡಿಗೆಸೆದರು. ಇದಾದ ಮೇಲೆ ಅಪಾಚೆ ಬೈಕ್ ಮೇಲೆ ಬಂದ ಮತ್ತಿಬ್ಬರಿಗೂ ಇದೇ ಗತಿಯಾಯಿತು ಎಂದು ಪ್ರತ್ಯಕ್ಷದರ್ಶಿ ಹೇಳಿರುವುದಾಗಿ ಚಾರ್ಜ್ಶಿಟ್ನಲ್ಲಿ ಉಲ್ಲೇಖೀಸಲಾಗಿದೆ.
ಇಷ್ಟಕ್ಕೂ ಈ ಎಲ್ಲ ಮಾಹಿತಿಯನ್ನು ನೀಡಿದ್ದು ಒಬ್ಬ ಹಿಂದು ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ. ಈ ಸಾಕ್ಷ್ಯ ಆಧರಿಸಿ ಚರಂಡಿಯಲ್ಲಿ ಪತ್ತೆಯಾದ ಶವಗಳ ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಗುಂಪು ವಾಸಿಸುತ್ತಿದ್ದ ಪ್ರದೇಶದಲ್ಲಿಯೇ ಈ ಪ್ರತ್ಯಕ್ಷದರ್ಶಿ ವಾಸವಾಗಿದ್ದ. ಗುಂಪಿನಲ್ಲಿದ್ದ ಹಲವರನ್ನು ಪ್ರತ್ಯಕ್ಷದರ್ಶಿ ಗುರುತಿಸಿದ್ದಾನೆ. ಒಟ್ಟು 9 ಜನರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಕರೊನಾ ಸೋಂಕು ಖಚಿತವಾದರೆ… ಮುಂದೇನು? ಈ ವಿಷಯಗಳನ್ನು ಅಗತ್ಯವಾಗಿ ತಿಳಿದಿರಿ