ಮೊಳಕಾಲ್ಮೂರು: ಲಾಕ್ಡೌನ್ ತೆರವಿನ ನಂತರ ಸೆ.1ರಿಂದ ಸಾರ್ವಜನಿಕ ಗ್ರಂಥಾಲಯಗಳು ಆರಂಭವಾಗಿದ್ದು, ಓದುಗರು ಮಾತ್ರ ಇತ್ತ ಹೆಜ್ಜೆ ಹಾಕುವ ಮನಸು ಮಾಡುತ್ತಿಲ್ಲ.
ಇಲ್ಲಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಓದುಗರ ಸಂಖ್ಯೆ ವಿರಳವಾಗಿದ್ದು, ಬಿಕೋ ಎನ್ನುತ್ತಿದೆ. ಸದಾ ಓದುಗರಿಂದ ತುಂಬಿರುತ್ತಿದ್ದ ಗ್ರಂಥಾಲಯದಲ್ಲಿ ಪ್ರಸ್ತುತ ದಿನಕ್ಕೆ ಗರಿಷ್ಠ 15 ಮಂದಿ ಬರುವುದು ಕಷ್ಟವಾಗಿದೆ.
ಓದು ಮುಗಿಸಿದ ನಂತರ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂಬ ಆಸಕ್ತಿ ಇರುವವರಿಗೆ ಇಲ್ಲಿನ ಲೈಬ್ರರಿ ಉತ್ತಮ ವೇದಿಕೆಯಾಗಿತ್ತು. ಬೆಳಗ್ಗೆಯಿಂದ ಸಂಜೆ ವರೆಗೆ ಹತ್ತಾರು ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದರು. ಟೀ 20 ಕ್ರಿಕೆಟ್ ಇದ್ದಾಗ ಪತ್ರಿಕೆ ಓದಲು ಇಲ್ಲಿ ಓದುಗರ ಸಂಖ್ಯೆ ಹೆಚ್ಚಿರುತ್ತಿತ್ತು. ಕರೊನಾ ಕರಿನೆರಳಾಗಿ ಕಾಡುತ್ತಿದ್ದು, ಆತಂಕದಿಂದ ಓದುಗರು ಗ್ರಂಥಾಲಯಕ್ಕೆ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಬರುತ್ತಿದ್ದಾರೆ.
ಸಾರ್ವಜನಿಕ ಗ್ರಂಥಾಲಯಗಳೆಂದರೆ ಸರ್ವರ ಬುದ್ಧಿ ಶಕ್ತಿ ವಿಕಸನಗೊಳಿಸುವ ದೇಗುಲಗಳಾಗಿವೆ. ಕರೊನಾ ಅದೆಲ್ಲವನ್ನು ನುಂಗಿದೆ. ಗ್ರಂಥಾಲಯಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಾರೆ ಚಿತ್ರದುರ್ಗ ಕೃಷ್ಣರಾಜೇಂದ್ರ ಜಿಲ್ಲಾ ಗಂಥಾಲಯಾಧಿಕಾರಿ ತಿಪ್ಪೇಸ್ವಾಮಿ.