ಉಡುಪಿ: ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶನಿವಾರ ಅಯೋಧ್ಯಾ ಕ್ಷೇತ್ರದಲ್ಲಿ ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರೊಂದಿಗೆ ಅನೌಪಚಾರಿಕ ಸಭೆ ನಡೆಸಿದರು. ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್, ಡಾ.ಅನಿಲ್ ಮಿಶ್ರಾ, ದಿನೇಶ್ ಚಂದ್ರ, ಇಂಜಿನಿಯರ್ ಜಗದೀಶ್ ಉಪಸ್ಥಿತರಿದ್ದರು.
ರಾಮ ಮಂದಿರದ ನಿರ್ಮಾಣ ಕಾಮಗಾರಿಯನ್ನು ಎಲ್ ಆ್ಯಂಡ್ ಟಿ ಕಂಪನಿ ನಡೆಸಲಿದ್ದು, ಯೋಜನಾ ವರದಿಯನ್ನು ಟಾಟಾ ಕನ್ಸ್ಟ್ರಕ್ಷನ್ ಸಂಸ್ಥೆ ಪರಿಶೀಲಿಸಲಿದೆ. ಬಳಿಕ ರಾಮ ಜನ್ಮಭೂಮಿ ಪ್ರಾಜೆಕ್ಟ್ ಮ್ಯಾನೇಜರ್ಗೆ ವರದಿ ಸಲ್ಲಿಸಲಿದ್ದು, ಅದನ್ನು ರಾಮ ಜನ್ಮಭೂಮಿ ಟ್ರಸ್ಟ್ ಸಭೆಯಲ್ಲಿ ಪರಿಶೀಲಿಸಿ, ಅನುಮೋದನೆಗೊಂಡ ಬಳಿಕ ಕಾಮಗಾರಿ ನಡೆಯಲಿದೆ ಎಂದರು.
ಇಂದು ಟ್ರಸ್ಟ್ ಸಭೆ: ಅಯೋಧ್ಯೆ ಪ್ರವಾಸಿ ಮಂದಿರದಲ್ಲಿ ಭಾನುವಾರ ಬೆಳಗ್ಗೆ 10ರಿಂದ 3 ಗಂಟೆವರೆಗೆ ರಾಮಮಂದಿರ ಕಾಮಗಾರಿಗೆ ಸಂಬಂಧಿಸಿ ಚರ್ಚಿಸಲು ರಾಮಜನ್ಮಭೂಮಿ ಟ್ರಸ್ಟಿನ ಸದಸ್ಯರ ಸಭೆ ಆಯೋಜಿಸಲಾಗಿದೆ. ಸಾಯಂಕಾಲ ಪೇಜಾವರ ಶ್ರೀಗಳು ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ. ನ.2ರಂದು ಲಖನೌದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಶ್ರೀಗಳು ಭೇಟಿ ಮಾಡಿ, ನಂತರ ನೈಮಿಷಾರಣ್ಯಕ್ಕೆ ತೆರಳಿ, 3ರಂದು ಹರಿದ್ವಾರಕ್ಕೆ ಭೇಟಿ ನೀಡಲಿದ್ದಾರೆ.