ಜಗಳೂರು: ರೈತರು ಬೆಳೆದಿರುವ ಶೇಂಗಾ ಮತ್ತು ಮೆಕ್ಕೆಜೋಳ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಹಾಗೂ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯಿಸಿ ಬುಧವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಕೃಷಿಕರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಡಾ. ನಾಗವೇಣಿ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಂ. ಹೊಳೆ ಚಿರಂಜೀವಿ ಮಾತನಾಡಿ, ರೈತರು ದೇಶದ ಬೆನ್ನೆಲುಬು ಎನ್ನುವ ಆಡಳಿತ ಸರ್ಕಾರಗಳು ಅವರು ಬೆಳೆದ ಶೇಂಗಾ, ಮೆಕ್ಕೆಜೋಳ ಇನ್ನಿತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುತ್ತಿಲ್ಲ. ಕೇವಲ ವೋಟ್ಬ್ಯಾಂಕ್ಗಾಗಿ ರೈತರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆಪಾದಿಸಿದರು.
ಈ ಬಾರಿ ಉತ್ತಮ ಮಳೆಯಿಂದ ಫಸಲು ಸಹ ಚೆನ್ನಾಗಿವೆ. ಈ ವರ್ಷವಾದರೂ ರೈತರಿಗೆ ನ್ಯಾಯ ಒದಗಿಸಬೇಕು. ಕೂಡಲೇ ಮೆಕ್ಕೆಜೋಳ ಮತ್ತು ಶೇಂಗಾ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಪದಾಧಿಕಾರಿಗಳಾದ ಗಂಗಾಧರಪ್ಪ, ಸತೀಶ್, ಲೋಕೇಶ್, ನಾಗರಾಜ, ಶರಣಪ್ಪ, ಪ್ರಹ್ಲಾದಪ್ಪ, ವೀರೇಶ್, ಅಜ್ಜಪ್ಪ, ಹನುಮಂತಪ್ಪ, ಮೇಘನಾಥ, ಹೊನ್ನೂರು ಅಲಿ, ಶಾಂತಪ್ಪ, ರಂಗಜ್ಜ, ನಿಂಗಪ್ಪ ಮತ್ತಿತರರಿದ್ದರು.