ಗಂಗಾಧರ ಕಲ್ಲಪಳ್ಳಿ ಸುಳ್ಯ
ಪ್ರತಿವರ್ಷ 4,000ದಿಂದ 4,500 ಮಿ.ಮೀ. ಮಳೆ ಸುರಿಯುವ ನಾಡಿನಲ್ಲಿ ಮಳೆನಿಂತ ಕೆಲವೇ ತಿಂಗಳಲ್ಲಿ ಬರ ಬಡಿಯತ್ತದೆ. ಮಳೆಗಾಲದಲ್ಲಿ ತುಂಬಿ ತುಳುಕಿ ಭೋರ್ಗರೆದು ಹರಿಯುವ ನದಿಗಳು ಬೇಸಿಗೆ ಆರಂಭದಲ್ಲಿಯೇ ಬತ್ತಲು ಆರಂಭಿಸುತ್ತದೆ. ಕರ್ನಾಟಕ ಮತ್ತು ಕೇರಳ ರಾಜ್ಯಗಳ ಲಕ್ಷಾಂತರ ಮಂದಿಗೆ ಜೀವಜಲ ನೀಡುವ, ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸುವ ಪಯಸ್ವಿನಿ ನದಿ ಸ್ಥಿತಿಯೂ ಭಿನ್ನವಾಗಿಲ್ಲ.
ಮಳೆ ನಿಂತು ಕೆಲವೇ ತಿಂಗಳಲ್ಲಿ ನದಿ ಬತ್ತಿ ಹೋಗುತ್ತದೆ. ತ್ಯಾಜ್ಯವನ್ನೂ, ತ್ಯಾಜ್ಯ ನೀರನ್ನು ಹರಿಯ ಬಿಟ್ಟು ನದಿಯನ್ನು ಕಲುಷಿತಗೊಳಿಸಲಾಗುತ್ತದೆ. ಬೇಸಿಗೆಯಲ್ಲಿ ತ್ಯಾಜ್ಯ ಎಸೆದು ಮತ್ತು ನದಿಯ ಬಗೆಗಿನ ತಾತ್ಸಾರ ಮನೋಭಾವದಿಂದ ಪಯಸ್ವಿನಿ ವಿನಾಶದೆಡೆಗೆ ಮುಖ ಮಾಡಿದೆ. ಆದ್ದರಿಂದ ನದಿಯ ಒಡಲಾಳದ ನೋವನ್ನು ಅರಿತು ಪಯಸ್ವಿನಿ ಉಳಿಸಿ ಆಂದೋಲನಕ್ಕೆ ಸುಳ್ಯದಲ್ಲಿ ಚಾಲನೆ ನೀಡಲಾಗಿದೆ. ಇದರ ಅಂಗವಾಗಿ ಪಯಸ್ವಿನಿ ಉತ್ಸವ ಆಚರಿಸಲಾಗಿದೆ. ನದಿ ಮತ್ತು ಜಲಮೂಲಗಳನ್ನು ಸಂರಕ್ಷಿಸದ ಕಾರಣ ನಾಡಿಗೆ ಬರ ಬಡಿದು ಬೇಸಿಗೆಯಲ್ಲಿ ಒಂದೊಂದು ಹನಿ ನೀರಿಗೂ ಹಾಹಾಕಾರ ಪಡುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ವರ್ಷಪೂರ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ಏನೆಲ್ಲ ಮಾಡಬಹುದು?: ಪಯಸ್ವಿನಿ ಉತ್ಸವ ಸಂದರ್ಭ ನಡೆದ ಉಪನ್ಯಾಸ, ಚರ್ಚೆ, ಸಂವಾದದಲ್ಲಿ ಪಯಸ್ವಿನಿ ನದಿಯ ಉಳಿವಿಗೆ ಹಲವಾರು ಸಲಹೆ ಸೂಚನೆ, ಅಭಿಪ್ರಾಯಗಳು ವ್ಯಕ್ತವಾಯಿತು. ಪಯಸ್ವಿನಿ ನದಿಗೆ ತ್ಯಾಜ್ಯ ಎಸೆಯುವುದನ್ನು ತಡೆಯಲು ಬೃಹತ್ ತ್ಯಾಜ್ಯ ನಿರ್ವಹಣಾ ಘಟಕದ ಸ್ಥಾಪನೆಯಾಗಬೇಕು. ಮಲಿನ ನೀರು ಶುದ್ಧೀಕರಣಕ್ಕೆ ಅಲ್ಲಲ್ಲಿ ಶುದ್ಧೀಕರಣ ಘಟಕ ಸ್ಥಾಪನೆ ಮಾಡಬೇಕು. ವಾಹನಗಳನ್ನು ನದಿಯಲ್ಲಿ ತೊಳೆಯದಂತೆ ವಾಹನ ಚಾಲಕರಿಗೆ ಜಾಗೃತಿ ಮೂಡಿಸಬೇಕು, ಸ್ಫೋಟಕಗಳನ್ನು ಬಳಸಿ ಮೀನುಗಾರಿಕೆ ಮತ್ತು ಬಲೆ ಹಾಕಿ ಮೀನು ಹಿಡಿಯುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ನದಿಯಲ್ಲಿ ತುಂಬಿರುವ ಮರಳು ಮತ್ತು ಹೂಳನ್ನು ತೆಗೆಯಬೇಕು. ನದಿಯಲ್ಲಿ ನೀರಿನ ಹರಿವು ಉಳಿಸಲು ಮತ್ತು ಅಂತರ್ಜಲ ಹೆಚ್ಚಿಸಲು ನದಿಯಲ್ಲಿ 10 ಕಿ.ಮೀ. ದೂರಕ್ಕೆ ಒಂದರಂತೆ ಕಿಂಡಿ ಅಣೆಕಟ್ಟುಗಳು ನಿರ್ಮಾಣವಾಗಬೇಕು. ಪಯಸ್ವಿನಿ ನದಿಯಲ್ಲಿ ಚೆನ್ನಕೇಶವ ಮತ್ತು ಕಾಂತಮಂಗಲ ಸುಬ್ರಹ್ಮಣ್ಯ ದೇವರ ಜಳಕದ ಗುಂಡಿಯನ್ನು ಅಭಿವೃದ್ಧಿಪಡಿಸಿ ಪವಿತ್ರ ಸಂಗಮ ಕ್ಷೇತ್ರ ಸೃಷ್ಟಿ ಮಾಡಿದರೆ ನದಿಯ ಪಾವಿತ್ರೃ ಉಳಿಸಬಹುದು ಮತ್ತಿತರ ಸಲಹೆಗಳನ್ನು ಪ್ರಮುಖರು ಮುಂದಿರಿಸಿದರು.
ಏನೆಲ್ಲಾ ಮಾಡುತ್ತಾರೆ?: ಪಯಸ್ವಿನಿ ನದಿ ಸಂರಕ್ಷಣೆಗೆ ಮತ್ತು ಪಾವಿತ್ರೃ ಉಳಿಸಲು ಸುಳ್ಯದ ಹಲವು ಸಂಘಟನೆಗಳು ಒಂದು ವರ್ಷದ ಯೋಜನೆಯನ್ನು ಪ್ರಸ್ತುತಪಡಿಸಿದರು. ಪಯಸ್ವಿನಿ ನದಿಯ ಚರಿತ್ರೆ ಮತ್ತು ಪ್ರಾಮುಖ್ಯತೆಯನ್ನು ಪ್ರಚುರಪಡಿಸಲಾಗುವುದು. ನದಿಯ ಉಳಿಸುವಿಕೆಯ ಸಂದೇಶ ಸಾರುವ ಫಲಕಗಳನ್ನು ನದಿಯ ಬದಿಯಲ್ಲಿ ಅಲ್ಲಲ್ಲಿ ಅಳವಡಿಸಲಾಗುವುದು. ಮಕ್ಕಳಲ್ಲಿ ನದಿ ಬಗ್ಗೆ ಅರಿವು, ಜಾಗೃತಿ ಮೂಡಿಸಲು ಶಾಲೆಗಳಿಂದ ಮಕ್ಕಳ ನದಿ ಯಾತ್ರೆ, ನದಿ ಬಗ್ಗೆ ಪ್ರಬಂಧ, ರಸಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧೆ ಹಮ್ಮಿಕೊಳ್ಳುವುದು. ನದಿಯಲ್ಲಿ ನಿರಂತರ ಸ್ವಚ್ಛತೆ, ನದಿ ಬಗ್ಗೆ ಕಾರ್ಯಾಗಾರ, ಚರ್ಚೆ, ಜಾಥಾ ನಡೆಸಲಾಗುವುದು. ನದಿಗೆ ತ್ಯಾಜ್ಯ ಎಸೆಯುವುದು, ತ್ಯಾಜ್ಯ ನೀರು ಬಿಡುವುದು ಮತ್ತು ಮೀನುಗಾರಿಕೆ ತಡೆಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ, ನದಿ ಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ನದಿಯ ಒಡಲಾಳದ ನೋವು ಕೇಳಿಸಿಕೊಳ್ಳಿ
ಶ್ರಿಕೊಡಗು ಜಿಲ್ಲೆಯ ತಾಳತ್ಮನೆಯಲ್ಲಿ ಹುಟ್ಟಿ ಕರ್ನಾಟಕ, ಕೇರಳ ರಾಜ್ಯಗಳಲ್ಲಿ 87 ಕಿ.ಮೀ. ಹರಿದು ಸಮುದ್ರ ಸೇರುವ ಮುನ್ನ ಕೊಡಗು, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಹಲವಾರು ಗ್ರಾಮಗಳ ಲಕ್ಷಾಂತರ ಮಂದಿಗೆ ಮತ್ತು ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸುವ ಪಯಸ್ವಿನಿ ನದಿ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಆದರೆ ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ನದಿಯ ಒಡಲು ಬತ್ತಲು ಆರಂಭಗೊಳ್ಳುತ್ತದೆ. ಹೆಚ್ಚುತ್ತಿರುವ ತಾಪಮಾನ, ಹವಾಮಾನ ವೈಪರೀತ್ಯ ಮತ್ತಿತರ ಕಾರಣಗಳಿಂದ ಪಯಸ್ವಿನಿ ನದಿ ನೀರು ಬೇಗನೆ ಕಡಿಮೆಯಾಗಲು ಕಾರಣವಾಗುತ್ತಿದೆ. ನದಿಗೆ ಎಸೆಯುವ ತ್ಯಾಜ್ಯ, ಎಗ್ಗಿಲ್ಲದೆ ಹರಿಯ ಬಿಡುವ ತ್ಯಾಜ್ಯ ನೀರು, ಕೋಳಿ ತ್ಯಾಜ್ಯಗಳು, ಅವೈಜ್ಞಾನಿಕವಾಗಿ ನಡೆಯುವ ಮರಳುಗಾರಿಕೆ ಪಯಸ್ವಿನಿ ನದಿಯ ನಾಶಕ್ಕೆ ಕಾರಣವಾಗುತ್ತಿದೆ. ನದಿಯಲ್ಲಿ ಇಳಿಸಿ ವಾಹನಗಳನ್ನು ತೊಳೆಯುವುದರಿಂದಲೂ ನದಿ ಕಲುಷಿತಗೊಳ್ಳುತಿದೆ ಎಂಬುದು ಹಲವಾರು ವರ್ಷಗಳಿಂದಲೂ ಕೇಳಿಬರುವ ನದಿಯ ಒಡಲಿನ ನೋವು.
ನದಿಗಳು ನಾಶವಾದರೆ ಜತೆಯಲ್ಲಿ ನಾಗರಿಕತೆ, ಸಂಸ್ಕೃತಿ ಅನೇಕ ಜೈವಿಕ ಸಂಪತ್ತು ಎಲ್ಲವೂ ನಾಶವಾಗುತ್ತವೆ. ಆದ್ದರಿಂದ ನದಿಯನ್ನು ಮೃತ ನದಿಯಾಗಲು ಬಿಡಬಾರದು. ಜೀವ ನದಿಯಾಗಿದ್ದರೆ ಮಾತ್ರ ಪ್ರಕೃತಿಯೂ, ಜೀವಿಗಳು ಬದುಕಲು ಸಾಧ್ಯ. ನದಿ, ಜಲ, ನೆಲ ಇವೆಲ್ಲದಕ್ಕೂ ಮುಂದಿನ ತಲೆಮಾರಿಗೂ ಹಕ್ಕಿದೆ. ಆದ್ದರಿಂದ ನದಿಯನ್ನು ಉಳಿಸಿ ಮುಂದಿನ ಜನಾಂಗಕ್ಕೆ ಹಸ್ತಾಂತರಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.
ಡಾ.ಪ್ರಭಾಕರ ಶಿಶಿಲ ಸಾಹಿತಿ, ಅರ್ಥಶಾಸ್ತ್ರಜ್ಞಪಯಸ್ವಿನಿ ನದಿಯನ್ನು ಉಳಿಸುವ ಅಭಿಯಾನದಲ್ಲಿ ಹಲವಾರು ಸಂಘ ಸಂಸ್ಥೆಗಳು ಕೈ ಜೋಡಿಸಿದ್ದಾರೆ. ಈ ನಿಟ್ಟಿನಲ್ಲಿ ಹಲವು ಸಂಘಟನೆಗಳು ಕೈಗೊಳ್ಳುವ ಹಲವು ಕ್ರಿಯಾತ್ಮಕ ಕಾರ್ಯಕ್ರಮಗಳ ರೂಪುರೇಷೆ ತಯಾರಿಸಿದ್ದಾರೆ. ಪಯಸ್ವಿನಿಯನ್ನು ಉಳಿಸಲು ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಯಸ್ವಿನಿ ಉತ್ಸವ ಸಂಘಟಿಸಲಾಗಿದೆ. ವರ್ಷ ಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಪ್ರಕಾಶ್ ಮೂಡಿತ್ತಾಯ ಸಂಚಾಲಕ, ಪಯಸ್ವಿನಿ ಉತ್ಸವ ಸಮಿತಿ