ಬೆಂಗಳೂರು ಅನುದಾನವಿಲ್ಲದೆ ಕೆಲಸ ಮಾಡಿ ಎಂದು ಸರ್ಕಾರ ಮತ್ತು ನಾನು (ಸಿಎಂ) ಹೇಳಿದ್ರೂ ಕೆಲಸ ಮಾಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುತ್ತಿಗೆದಾರರಿಗೆ ಕರೆ ನೀಡಿದರು.
ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರು ಹಮ್ಮಿಕೊಂಡಿರುವ 2 ದಿನಗಳ ಸಮ್ಮೇಳನಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂದಿನ ಸರ್ಕಾರ ನೀಡಿರುವ ಟೆಂಡರ್ಗಳನ್ನು ದುಡ್ಡು ಇಲ್ಲದೆ ಕೆಲಸ ಮಾಡಿದ್ದೀರಿ. ಯಾಕೆ ಮಾಡಿದ್ರಿ
ಎಂದು ಗುತ್ತಿಗೆದಾರರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಗುತ್ತಿಗೆದಾರರು ಸರ್ಕಾರ ಹೇಳಿದ್ದರಿಂದ ಕೆಲಸ ಮಾಡಿದೆವು ಎಂದಾಗ, ಸರ್ಕಾರ ಹೇಳುವುದನ್ನು ಕೇಳಬಾರದು ರೀ.. ನಾನು ಹೇಳಿದೆ ಎಂದು ಕೇಳಬಾರದು. ಮೂರನೇ ಒಂದು ಭಾಗ ಅನುದಾನ ನೀಡಿದಾಗ ಕೆಲಸ ಆರಂಭಿಸಿ ಎಂದು ಸೂಚಿಸಿದರು.
ಗುತ್ತಿಗೆ ನೀಡುವಲ್ಲಿ ಭ್ರಷ್ಟಾಚಾರ ಇಲ್ಲವೆಂದು ನಾನು ಹೇಳಲ್ಲ. ಆದರೆ, ಅದನ್ನು ಹಂತ ಹಂತವಾಗಿ ಕಡಿಮೆ ಮಾಡಬೇಕು. ಈ ಹಿಂದೆ 5 ವರ್ಷ ಸಿಎಂ ಆಗಿದ್ದಾಗ ಅನುದಾನ ಬಿಡುಗಡೆ ಮಾಡುವುದಕ್ಕೆ ಯಾರಿಂದಲೂ ನಯಾ ಪೈಸೆ ಪಡೆದಿಲ್ಲ. ಒಂದು ವೇಳೆ ಪಡೆದಿರುವುದನ್ನು ಯಾರಾದರೂ ಕೇಳಿದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.
ಆಯೋಗಕ್ಕೆ ದೂರು ನೀಡಿ:
ಗುತ್ತಿಗೆದಾರರು ಮತ್ತು ಸರ್ಕಾರ ಕೈಜೋಡಿಸಿದಾಗ ಅಭಿವೃದ್ಧಿ ಸಾಧ್ಯವಾಗಲಿದೆ. ಇದರಲ್ಲಿ ಎರಡು ಮಾತೇ ಇಲ್ಲ. ಹೀಗಾಗಿ, ಗುತ್ತಿಗೆದಾರರ ಸಂಘವು ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.40 ಸರ್ಕಾರವೆಂದು ಗಂಭೀರ ಆರೋಪ ಮಾಡಿದ್ದರು. ಅದರ ಸತ್ಯಾಸತ್ಯತೆ ತಿಳಿಯಲು ಹೈಕೊರ್ಟ್ ನಿವೃತ್ತ ನ್ಯಾ. ಎಚ್.ಎಸ್. ನಾಗಮೋಹನ್ ದಾಸ್ ಅವರ ಆಯೊಗ ಮಾಡಲಾಗಿದೆ. ಆಯೋಗವು ಇನ್ನೂ ವರದಿ ನೀಡಿಲ್ಲ. ನಮ್ಮ ಸರ್ಕಾರವು ಬಡವರು ಹಾಗೂ ರಾಜ್ಯದ ಸರ್ವತೋಮಖ ಅಭಿವೃದ್ಧಿ ಮಾಡಬೇಕು ಎಂದು ನಮ್ಮ ಉದ್ದೇಶವಾಗಿದೆ. ಆದ್ದರಿಂದ ಯಾರಾದರೂ ಕಮೀಷನ್ ಕೇಳಿದರೆ, ಆಯೋಗಕ್ಕೆ ದೂರು ನೀಡುವಂತೆ ಕರೆ ನೀಡಿದರು.
ಒಂದೇ ಕಂತಿನಲ್ಲಿ ಕೊಡಿ ಅಂದ್ರೆ ನೋಟ್ ಪ್ರಿಂಟ್ ಮಾಡಲಾ?
ನನ್ನ ಹಿಂದಿನ ಅವಧಿಯಲ್ಲಿ ಕಾಮಗಾರಿಗಳ ಯಾವುದೇ ಬಿಲ್ಗಳನ್ನು ಬಾಕಿ ಉಳಿಸಿಕೊಳ್ಳುತ್ತಿರಲಿಲ್ಲ ಮತ್ತು ಹಣ ನೀಡಿ ಟೆಂಡರ್ ಕರೆಯುತ್ತಿದ್ದೆ. ಬಿಜೆಪಿ ಸರ್ಕಾರ ಬಂದ ನಂತರ ಬಾಕಿ ಮೊತ್ತ ಹೆಚ್ಚಳವಾಗಿದೆ. ಸರ್ಕಾರದಲ್ಲಿ ದುಡ್ಡು ಇಲ್ಲದಿದ್ದರೂ ಬಿಜೆಪಿ ಸರ್ಕಾರವು 1.2 ಲಕ್ಷ ಸಾವಿರ ಕೋಟಿ ರೂ. ಮೊತ್ತದ ಟೆಂಡರ್ ಕರೆದಿದ್ದಾರೆ. ಈ ಹಣವನ್ನು ಈಗ ಒಂದೇ ಕಂತಿನಲ್ಲಿ ಬಿಡುಗಡೆಗೊಳಿಸಿ ಎಂದರೆ ನಾನು ನೋಟನ್ನು ಪ್ರಿಂಟ್ ಮಾಡಲಾ ಎಂದು ಗರಂ ಆದರು.
4 ಸಾವಿರ ಕೋಟಿ ರೂ. ಬಿಡುಗಡೆ:
ಈಗ 4 ಸಾವಿರ ಕೋಟಿ ರೂ. ಅನುದಾನವನ್ನು ಲೋಕೋಪಯೋಗಿ ಇಲಾಖೆಗೆ ಗುತ್ತಿಗೆ ನೀಡಲಾಗಿದೆ. ಸಣ್ಣ ಗುತ್ತಿಗೆದಾರರು ಮತ್ತು ರಾಜ್ಯದ ಗುತ್ತಿಗೆದಾರರಿಗೆ ಕೆಲಸ ಮಾಡಲು ಅವಕಾಶ ಸಿಗಲಿ ಎಂಬ ಕಾರಣದಿಂದ ಪ್ಯಾಕೇಜ್ ವ್ಯವಸ್ಥೆ ಮಾಡಿಲ್ಲ ಎಂದು ಹೇಳಿದರು.
ಹಾಗೆಯೇ, ಗುತಿಗೆದಾರರೇ ಕ್ವಾಲಿಟಿ ಕಂಟ್ರೋಲ್ ಮಾಡುತ್ತೇವೆಂದು ಹೇಳಿರುವುದನ್ನು ಮುಖ್ಯಮಂತ್ರಿಗಳು ಸ್ವಾಗತಿಸಿದರು.